ದೇಶದ ಸಾಫ್ಟ್‌ವೇರ್‌ ರಫ್ತಿನಲ್ಲಿ 40% ಕರ್ನಾಟಕದ್ದು, ನಾವೇ ನಂಬರ್‌ 1: ಪ್ರಿಯಾಂಕ್‌ ಖರ್ಗೆ

Prasthutha|

ಬೆಂಗಳೂರು: ಜಗತ್ತು ಇಂದು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಪರಿಹರಿಸುವಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರ ನಿರತವಾಗಿದೆ. ಹವಾಮಾನ ಬದಲಾವಣೆಯ ಪರಿಹಾರ, ಆರೋಗ್ಯ ರಕ್ಷಣೆ ಹಾಗೂ ಸೈಬರ್ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ, ನಾವು ಗಡಿಗಳನ್ನು ಮೀರಿ ಸಮಗ್ರ ಪರಿಹಾರಗಳನ್ನ ರೂಪಿಸಬೇಕಾಗಿದೆ. ಮಾತ್ರವಲ್ಲದೇ ಒಟ್ಟಾರೆಯಾಗಿ ಮಾನವ ಕುಲಕ್ಕೆ ಪ್ರಯೋಜನವಾಗುವಂತಹ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ 2023ರ ನವೆಂಬರ್‌ 29ರಿಂದ ಮೂರು ದಿನಗಳ ಕಾಲ ನಡೆಯಲಿರುವ 26ನೇ ಬೆಂಗಳೂರು ಟೆಕ್‌ ಸಮಿಟ್‌ ಹಿನ್ನೆಲೆಯಲ್ಲಿಂದು ನಡೆದ ಗ್ಲೋಬಲ್‌ ಇನೋವೇಷನ್‌ ಅಲಿಯನ್ಸ್‌ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

ಸಾಫ್ಟ್‌ವೇರ್ ರಫ್ತಿನ ವಿಷಯದಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಸಾಫ್ಟ್‌ವೇರ್ ರಫ್ತು ಪ್ರಮಾಣದಲ್ಲಿ ಶೇ.40 ರಾಜ್ಯದ್ದಾಗಿದೆ ಎಂದು ಹೇಳಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬೆಂಗಳೂರು ವಿಶ್ವದ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದು ನಾವು ವಿಶ್ವದ ಅತ್ಯುತ್ತಮ ನುರಿತ ಉದ್ಯೋಗಿಗಳನ್ನ ಹೊಂದಿದ್ದೇವೆ. ಭವಿಷ್ಯಕ್ಕಾಗಿ ಹೆಚ್ಚು ಚೇತರಿಸಿಕೊಳ್ಳುವ ಅಗತ್ಯವಿದ್ದು, ಕರ್ನಾಟಕ ಸರ್ಕಾರ ನಾವೀನ್ಯತೆಗಳ ಸವಾಲುಗಳಿಗೆ ಸಿದ್ಧವಾಗಿದೆ. ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ನಾವು ಕೌಶಲ್ಯ ಸಲಹಾ ಸಮಿತಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

ಸೈಬರ್‌ ಸೆಕ್ಯುರಿಟಿ, ಅಗ್ರಿ ಇನೋವೇಶನ್, ಡೇಟಾ ಸೈನ್ಸ್ ಮತ್ತು ಎಐ, ಏರೋಸ್ಪೇಸ್, ಸೆಮಿಕಂಡಕ್ಟರ್ ಫೇಬಲ್ಸ್, ಮಿಷಿನ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್, ಅನಿಮೇಷನ್ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಪರಿಣತಿಯಿದೆ. ಆಟೋಮೊಬೈಲ್ ಟೆಕ್, ಗೇಮಿಂಗ್ ವೇಗವರ್ಧಕ ಮತ್ತು ವರ್ತುಲ ಆರ್ಥಿಕ ಪ್ರಯೋಗಾಲಯ ಮುಂತಾದ ಕ್ಷೇತ್ರಗಳಲ್ಲಿಯೂ ನಮ್ಮ ಪರಿಸರ ವ್ಯವಸ್ಥೆಗಳೊಂದಿಗೆ ಸಹಕರಿಸಲು ನಾವು ಬಯಸುತ್ತೇವೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾ, ಕೆನಡ, ಫ್ರಾನ್ಸ್‌ ಇಸ್ರೇಲ್‌, ಜರ್ಮನಿ, ನೆದರ್ಲೆಂಡ್, ಜಪಾನ್‌, ಸ್ವಿ‌ಡ್ಜರ್ಲೆಂಡ್‌ ಹಾಗೂ ಬ್ರಿಟನ್‌ ದೇಶಗಳ ರಾಯಭಾರಿ ಕಚೇರಿಗಳ ಪ್ರತಿನಿಧಿಗಳು ಮಾತನಾಡಿ, ಆಯಾ ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಬಗ್ಗೆ ತಿಳಿಸಿದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಏಕ್‌ರೂಪ್‌ ಕೌರ್‌, ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ದರ್ಶನ್‌ ಸಭೆಯಲ್ಲಿ ಮಾತನಾಡಿದರು.

Join Whatsapp