ಮಾರ್ಚ್ 12ಕ್ಕೆ ರಾಜ್ಯಕ್ಕೆ ಪ್ರಧಾನಿ ಭೇಟಿ: ಐಐಟಿ, ಜಯದೇವ ಆಸ್ಪತ್ರೆ ಉದ್ಘಾಟನೆ- ಸಿಎಂ ಬೊಮ್ಮಾಯಿ

Prasthutha|

ಹುಬ್ಬಳ್ಳಿ: ಪ್ರಧಾನಮಂತ್ರಿಯವರು ಮಾರ್ಚ್ 12ರಂದು ಧಾರವಾಡಕ್ಕೆ ಆಗಮಿಸುತ್ತಿದ್ದು, ಐ.ಐ.ಟಿ, ಜಲ್ ಜೀವನ್ ಮಿಷನ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರತಿ ಬಾರಿ ಮೋದಿಯವರು ಬಂದಾಗ ರಾಜ್ಯದ ಅತ್ಯಂತ ಅವಶ್ಯಕ ವಿರುವ ಮೂಲಭೂತ ಸೌಕರ್ಯಗಳಿಗೆ ಅವರು ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಹಲವಾರು ಪೂರ್ಣಗೊಂಡಿರುವ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಇನ್ನು ಕೆಲವನ್ನು ಪ್ರಾರಂಭ ಮಾಡುತ್ತಿದ್ದಾರೆ ಎಂದರು.
ಮೂಲಭೂತ ಸೌಕರ್ಯಗಳಿಗೆ ದೊಡ್ಡ ಪ್ರಮಾಣದ ಕೊಡುಗೆ
ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಹಣ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಬಂದರುಗಳಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ, ವಿಶೇಷವಾಗಿ ರಾಜ್ಯ ಹಾಗೂ ಅಂತರರಾಜ್ಯಗಳ ಮೂಲಭೂತ ಸೌಕರ್ಯಗಳಿಗೆ ಬಹಳ ದೊಡ್ಡ ಪ್ರಮಾಣದ ಕೊಡುಗೆಯನ್ನು ಪ್ರಧಾನಿಗಳು ನೀಡಿದ್ದಾರೆ. ಅವೆಲ್ಲವೂ ಲೋಕಾರ್ಪಣೆಯಾಗುತ್ತಿದೆ. ಕಳೆದ 5 ವರ್ಷಗಳ ಸಹಾಯದ ಫಲಶ್ರುತಿ ಇಂದು ದೊರೆಯುತ್ತಿದೆ ಎಂದರು.
ನಂಬರ್ ಒನ್ ಐಐಟಿ ಮಾಡುವ ಉದ್ದೇಶ
ಹಂತ ಹಂತವಾಗಿ ಐಐಟಿ ಗೆ ಅನುದಾನ ಒದಗಿಸಲಾಗಿದೆ. ಐಐಟಿ ಪ್ರತಿಷ್ಠಿತ ಸಂಸ್ಥೆಯಾಗಿದ್ದು ದೇಶದಲ್ಲಿಯೇ ನಂಬರ್ ಒನ್ ಐಐಟಿ ಮಾಡುವ ಉದ್ದೇಶವಿದೆ. ಧಾರವಾಡ ಸರಸ್ವತಿಯ ನಗರ. ಇಲ್ಲಿ ಐಐಟಿ ಸ್ಥಾಪನೆಯಾಗಿರುವುದು ಕಿರೀಟ ಪ್ರಾಯವಾಗಿದೆ ಎಂದರು.
ಪಿ.ಪಿ.ಪಿ ಮಾದರಿ
ಬೇಲೆಕೇರಿ ಬಂದರು ಅಭಿವೃದ್ಧಿ ಯನ್ನು ಸಾಗರಮಾಲಾ ಯೋಜನೆಯಡಿ ಕೈಗೆಟ್ಟಿಕೊಳ್ಳಲಾಗುವುದು. ಕೇಂದ್ರ ಸರ್ಕಾರದ ಯೋಜನೆಯಡಿ 12 ಯೋಜನೆಗಳಿಗೆ ಅನುಮೊದನೆ ಪಡೆದು ಅನುಷ್ಠಾನ ಮಾಡಲಾಗುವುದು. ರಾಜ್ಯದ 2 ಯೋಜನೆಗಳನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲು ಏಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಕರೆಯಲಾಗಿದೆ ಎಂದರು.

Join Whatsapp