ದೇಶದಲ್ಲಿ ಆರ್.ಎಸ್.ಎಸ್ ಇಲ್ಲದಿರುತ್ತಿದ್ದರೆ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು: ಸಚಿವ ಪ್ರಭು ಚವ್ಹಾಣ್

Prasthutha|

ಬೆಂಗಳೂರು: ದೇಶದಲ್ಲಿ ಆರ್.ಎಸ್.ಎಸ್ ಇಲ್ಲದಿರುತ್ತಿದ್ದರೆ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಇದ್ದ ಕಾರಣ ದೇಶ ಸುಭದ್ರವಾಗಿದೆದೆ, ಇಲ್ಲದಿದ್ದರೆ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು ಎಂದರು.

- Advertisement -

ಆರ್ ಎಸ್ ಎಸ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ ಅವರು, ಕೇಂದ್ರದಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಹತಾಶೆಯಿಂದ ಈ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯ ಎಂದರು.

ರಾಜ್ಯಕ್ಕೆ 275 ಪಶುಸಂಜೀವಿನಿ ಸಂಚಾರಿ ಪಶು ಚಿಕಿತ್ಸಾವಾಹನ ಮಂಜೂರು

- Advertisement -

ಕಳೆದ ಒಂದು ವರ್ಷದಿಂದ ಕೇಂದ್ರ ಪಶುಸಂಗೋಪನೆ ಇಲಾಖೆಯೊಂದಿಗೆ ಸಂವಹನ ನಡೆಸಿದ ಪರಿಣಾಮ ರಾಜ್ಯಕ್ಕೆ 275 ಪಶುಸಂಜೀವಿನಿ ಸಂಚಾರಿ ಪಶು ಚಿಕಿತ್ಸಾವಾಹನ ರಾಜ್ಯಕ್ಕೆ ದೊರಕಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು. ರಾಜ್ಯದಲ್ಲಿ ಪಶುಸಂಜೀವಿನಿ ಯಶಸ್ವಿಯಾಗಿದ್ದು ಎಲ್ಲ ತಾಲೂಕುಗಳಿಂದ ಬೇಡಿಕೆ ಹೆಚ್ಚು ಬರುತ್ತಿತ್ತು. ರೈತರ ಮನೆ ಬಾಗಿಲಿಗೆ ಸಂಚಾರಿ ಪಶು ಚಿಕಿತ್ಸಾವಾಹನ ತೆರಳಿ ಚಿಕಿತ್ಸೆ ನಿಡುತ್ತಿರುವುದರಿಂದ ರೈತರಿಗೆ ಈ ಯೋಜನೆ ಹೆಚ್ಚು ಉಪಯೋಗವಾಗಿದೆ ಎಂದರು.

ಅಲ್ಲದೇ ಎಲ್ಲ ತಾಲೂಕುಗಳಿಗೂ ಇದನ್ನು ವಿಸ್ತರಣೆ ಮಾಡಬೇಕು ಎಂದು ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಮನವಿ ಸಹ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಪಶುಸಂಗೋಪನೆ ಇಲಾಖೆಯ ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ್, ಕೇಂದ್ರದ ಸಚಿವರಾದ ಗಿರಿರಾಜ್ ಸಿಂಗ್, ಸಂಜೀವ್ ಕುಮಾರ ಬಾಲ್ಯನ್ ಹಾಗೂ ಡಾ.ಎಲ್ ಮುರುಗನ್ ಅವರರೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ ಪರಿಣಾಮ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಕ್ಕೆ 275 ಪಶು ಚಿಕಿತ್ಸಾ ವಾಹನಗಳು ದೊರೆತಿವೆ ಎಂದರು.

ವಾಹನ ಒದಗಿಸಲು ಕೇಂದ್ರದಿಂದ ಒಟ್ಟು ರೂ.44 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಪ್ರತಿ ಪಶು ಚಿಕಿತ್ಸಾ ವಾಹನಕ್ಕೆ ರೂ.16 ಲಕ್ಷ ವೆಚ್ಚವಾಗಲಿದೆ. ವಾರ್ಷಿಕವಾಗಿ ವಾಹನ ನಿರ್ವಹಣೆ ಪಿಪಿಪಿ ಮಾದರಿಯಲ್ಲಿ ನಡೆಯಲಿದೆ. ಪ್ರತಿ ವರ್ಷ ವಾಹನ ಹಾಗೂ ಸಿಬ್ಬಂದಿಯ ನಿರ್ವಹಣೆಗೆ ಹೆಚ್ಚುವರಿಯಾಗಿ ರೂ.50 ಕೋಟಿ ಅನುದಾನವನ್ನು ಕೇಂದ್ರ ಹಾಗೂ ರಾಜ್ಯದ ಪಾಲುದಾರಿಕೆಯಲ್ಲಿ ನೀಡಲಾಗಿದೆ. ರಾಜ್ಯದ ಪಾಲು ಶೇ 40 ಹಾಗೂ ಕೇಂದ್ರದ ಪಾಲು ಶೇ 60 ಇರಲಿದೆ ಎಂದರು.

ವಾಹನದಲ್ಲಿ ಓರ್ವ ಪಶುವೈದ್ಯರು, ಪಶುವೈದ್ಯಕೀಯ ಸಹಾಯಕ ಹಾಗೂ ನುರಿತ ಚಾಲಕ/ಪರಿಚಾರಕ ಇರಲಿದ್ದಾರೆ. ಪಶು ಕಲ್ಯಾಣ ಸಹಾಯವಾಣಿ ದೇಶದಲ್ಲೇ ಮೊದಲಬಾರಿಗೆ ರಾಜ್ಯದಲ್ಲಿ ಸ್ಥಾಪನೆ ಆಗಿದ್ದು ಅತ್ಯಂತ ಯಶಸ್ವಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪಶುಸಂಗೋಪನೆ ಇಲಾಖೆ ಕಾರ್ಯಪ್ರವೃತ್ತವಾಗಿದೆ.

ರಾಜ್ಯದ ಯೋಜನಾ ಮಾದರಿ ಸಂಪೂರ್ಣ ದೇಶಕ್ಕೆ ವಿಸ್ತರಣೆ

ದೆಹಲಿ ಪ್ರವಾಸದ ಸಮಯದಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ಸಮಯದಲ್ಲಿ ಕರ್ನಾಟಕದಲ್ಲಿ ಮಾಡಿದ ನೂತನ ಪ್ರಯೋಗವಾದ ರೈತರ ಮನೆ ಬಾಗಿಲಿಗೆ ಪಶುಸಂಜೀವಿನಿ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಂದಿನ ಕೇಂದ್ರ ಪಶುಸಂಗೋಪನೆ ಕೇಂದ್ರ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಅವರು ರಾಜ್ಯದ ಈ ಯೋಜನೆಯನ್ನು ಶ್ಲಾಘನೆ ಮಾಡಿದ್ದರು. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿ ದೇಶದ ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಇದನ್ನು ದೇಶಾದ್ಯಂತ ವಿಸ್ತರಣೆ ಮಾಡಲು ಚರ್ಚೆ ನಡೆಸುವುದಾಗಿ ತಿಳಿಸಿದ್ದರು. ಸದ್ಯ ದೇಶದ 14 ರಾಜ್ಯಗಳಿಗೆ ಕೇಂದ್ರ ದಿಂದ ಸಂಚಾರಿ ಪಶುಶಸ್ತ್ರ ಚಿಕಿತ್ಸಾವಾಹನ ನೀಡಲಾಗಿದೆ. ರಾಜ್ಯದ ಯೋಜನಾ ಮಾದರಿ ದೇಶಕ್ಕೆ ವಿಸ್ತರಣೆ ಆಗುತ್ತಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕೆ 50 ಲಕ್ಷ ಡೋಸ್

ಸದ್ಯ ರಾಜ್ಯದಲ್ಲಿ ಕಾಲುಬಾಯಿ ರೋಗ ನಿಯಂತ್ರಣದಲ್ಲಿ ಪಶುಸಂಗೋಪನೆ ಇಲಾಖೆ ತೊಡಗಿದೆ. ಸದ್ಯ ಕೇಂದ್ರ ದಿಂದ ರಾಜ್ಯದಲ್ಲಿ ರೂ.50 ಲಕ್ಷ ಡೋಸ್ ದೊರೆತಿದ್ದು ರಾಜ್ಯದಲ್ಲಿ ಕಾಲುಬಾಯಿ ರೋಗ ಕಂಡಬಂದ ಪ್ರದೇಶದಲ್ಲಿ ಆದ್ಯತೆಯ ಮೇಲೆ ಲಸಿಕೆ ವಿತರಣೆ ತುರ್ತಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ರೋಗೋದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ರಿಂಗ್ ವ್ಯಾಕ್ಸಿನ್ ಗೆ ಹೆಚ್ಚು ಆದ್ಯತೆ ನೀಡಿ ಕಾಲುಬಾಯಿ ರೋಗವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತೇವೆ ಎಂದು ಸಚಿವರು ನುಡಿದರು.
ಕರ್ನಾಟಕ ಅನುಷ್ಠಾನಕ್ಕೆ ತಂದ ವಿನೂತನ ಯೋಜನೆ ಪಶುಸಂಜೀವಿಯ ಪರಿಕಲ್ಪನೆಯನ್ನು ದೇಶದ ಎಲ್ಲಾ ರಾಜ್ಯಗಳಿಗೆ ಕೇಂದ್ರದಿಂದ ವಿಸ್ತರಣೆ ಮಾಡುತ್ತಿರುವುದರ ಬಗ್ಗೆ ಸ್ವತಃ ಕೇಂದ್ರ ಪಶುಸಂಗೋಪನೆ ಸಚಿವರು ಕರೆ ಮೂಲಕ ತಿಳಿಸಿದ್ದಾರೆ. ಇದು ಕರ್ನಾಟಕಕ್ಕೆ ಹಾಗೂ ಪಶುಸಂಗೋಪನೆ ಇಲಾಖೆಗೆ ಅತ್ಯಂತ ಸಂತೋಷದ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.

Join Whatsapp