ಒಕ್ಕೂಟ ಸರ್ಕಾರದಿಂದ ಸಂವಿಧಾನ ದಿನಾಚರಣೆ: ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ಬಹಿಷ್ಕಾರ

Prasthutha|

ನವದೆಹಲಿ: ಒಕ್ಕೂಟ ಸರ್ಕಾರದ ವತಿಯಿಂದ ನಡೆಯುತ್ತಿರುವ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಬಹಿಷ್ಕರಿಸಿ, ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಶುಕ್ರವಾರ ಪ್ರತಿಭಟಿಸಿದೆ.

- Advertisement -

ಕಾಂಗ್ರೆಸ್ ಹೊರತುಪಡಿಸಿ, ಇತರ ಪಕ್ಷಗಳಾದ ಟಿಎಂಸಿ, ಆರೆ.ಜೆ.ಡಿ, ಡಿ.ಎಂ.ಕೆ, ಸಿಪಿಐ (ಎಂ), ಸಿಪಿಐ, ಆರ್.ಎಸ್.ಪಿ, ಕೇರಳ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಸಂಸದರನ್ನು ಕಾರ್ಯಕ್ರಮಕ್ಕೆ ಕಳುಹಿಸದಿರಲು ನಿರ್ಧರಿಸಿತ್ತು.

ನವೆಂಬರ್ 26 ರ ಕಾರ್ಯಕ್ರಮ ಪ್ರತಿಪಕ್ಷಗಳು ಎರಡನೇ ಬಾರಿಗೆ ಬಹಿಷ್ಕರಿಸುತ್ತಿವೆ. 2019ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರತಿಪಕ್ಷಗಳು ಸೆಂಟ್ರಲ್ ಹಾಲ್ ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಂಸತ್ ಭವನದ ಸಂಕೀರ್ಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಸಮಾವೇಶ ನಡೆಸಿದ್ದವು.

- Advertisement -

ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಸಮಾರಂಭವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಖರ್ಗೆ, ಆನಂದ್ ಶರ್ಮಾ, ಜೈ ರಾಮ್ ರಮೇಶ್ ಮತ್ತು ಅಧೀರ್ ರಂಜನ್ ಚೌಧರಿ ಅವರು ಬಹಿಷ್ಕಾರವನ್ನು ಆಯೋಜಿಸುವ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾತನಾಡಿದ್ದಾರೆ.

Join Whatsapp