ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರ ನೀಡಲು ಅಗತ್ಯ ಕ್ರಮ: ಕಂದಾಯ ಸಚಿವ ಆರ್. ಅಶೋಕ್

Prasthutha|

- Advertisement -

ಬೆಂಗಳೂರು: ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣ ಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.


ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಮುನಿರಾಜುಗೌಡ ಪಿ.ಎಂ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಕ್ಕನಾಗವಲ್ಲಿ ಗ್ರಾಮದ ಸರ್ವೆ ನಂ. 43 (ಹೊಸ ಸರ್ವೆ ನಂ. 135 ಮತ್ತು 136)ನ್ನು ಕಲ್ಲು ಗಣಿಗಾರಿಕೆಗೆ ಸುರಕ್ಷಿತ ವಲಯವೆಂದು ಘೋಷಿಸಿರುವುದಿಲ್ಲ. ಆದರೆ ಕಲ್ಲುಪುಡಿ ಘಟಕ ನಿರ್ಮಾಣಕ್ಕಾಗಿ ಸುರಕ್ಷಿತ ವಲಯವೆಂದು ಘೋಷಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ. ಸದರಿ ಸರ್ವೆ ನಂ 43ರಲ್ಲಿ ಗಣಿಗಾರಿಕೆಗಾಗಿ ನಿರಾಕ್ಷೇಪಣಾ ಪತ್ರಕ್ಕಾಗಿ ತಹಶೀಲ್ದಾರರಿಂದ ಉಪ ವಿಭಾಗಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದ್ದು, ಉಪ ವಿಭಾಗಧಿಕಾರಿಗಳು ಜಿಲ್ಲಾ ಟಾಸ್ಕ್ ಪೋರ್ಸ್ಗೆ ಕಳುಹಿಸಬೇಕಿತ್ತು ಎಂದರು.

- Advertisement -


ಆದರೆ ಉಪ ವಿಭಾಗಧಿಕಾರಿಗಳು ತಹಶೀಲ್ದಾರ್’ರವರ ವರದಿಯ ಮೇಲೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಟಾಸ್ಕ್ ಪೋರ್ಸ್ ಸಮಿತಿಗೆ ವರದಿಯನ್ನು ಸಲ್ಲಿಸದೇ ತಮ್ಮ ಹಂತದಲ್ಲಿಯೇ ನಿರ್ಧಾರ ಕೈಗೊಂಡು ಅನಗತ್ಯವಾಗಿ ಪತ್ರ ವ್ಯವಹಾರ ಮಾಡಿರುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.


ಈ ಸಂಬಂಧ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಉತ್ತರ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಸವಲತ್ತುಗಳು ಬಾಕಿ ಇಟ್ಟು ಕೊಳ್ಳದೇ ಸಕಾಲದಲ್ಲಿ ಫಲಾನುಭವಿಗಳಿಗೆ ಸಿಗಬೇಕು. ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Join Whatsapp