ನನ್ನ ರಾಜೀನಾಮೆ ನಿರ್ಧಾರ ಬದಲಿಸಿದ್ದು ನರೇಂದ್ರ ಮೋದಿ : ಹೆಚ್.ಡಿ ದೇವೇಗೌಡ

Prasthutha|

ಮಂಡ್ಯ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ದೇವೇಗೌಡರು ಘೋಷಿಸಿದ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಟೀಕೆಗಳೂ ಆ ಸಂದರ್ಭದಲ್ಲಿ ಕೇಳಿಬಂದಿದ್ದವು. ಹಲವು ವರ್ಷಗಳ ಹಿಂದಿನ ಈ ಬೆಳವಣಿಗೆಗೆ ಇದೀಗ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ತಾವೇಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ.

- Advertisement -

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಶ ಮಾಡುತ್ತೇವೆ ಎನ್ನುವವರ ವಿರುದ್ಧ ಎದ್ದು ನಿಲ್ಲುತ್ತೇವೆ ಎಂದು ಘೋಷಿಸಿದರು. ಬಿಜೆಪಿ ಬಹುಮತ ಗಳಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಕಳೆದ ಲೋಕಸಭೆ ಚುನಾವಣೆಯಲ್ಲಿ ಘೋಷಿಸಿದ್ದೆ. ಫಲಿತಾಂಶ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಬರುವಂತೆ ನನಗೆ ಪತ್ರ ಬರೆದಿದ್ದರು. ದೆಹಲಿಗೆ ಹೋದಾಗ ರಾಜೀನಾಮೆ ತೆಗೆದುಕೊಳ್ಳಿ ಎಂದು ಹೇಳಿದ್ದೆ. ರಾಜಕೀಯದಲ್ಲಿ ಹೀಗೆ ಮಾತನಾಡುವುದು ಮಾಮೂಲಿ. ಇದನ್ನೆಲ್ಲ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಮೋದಿ ನನ್ನ ಮನವೊಲಿಸಿದ್ದರು ಎಂದು ಹೇಳಿದ್ದಾರೆ

Join Whatsapp