ಕೇರಳದ ಇಬ್ಬರು ಮೀನುಗಾರರ ಹತ್ಯೆ: ಇಟಲಿಯ ನಾವಿಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು

Prasthutha|

ನವದೆಹಲಿ: 2012ರ ಫೆಬ್ರವರಿ 15ರಂದು ಲಕ್ಷದ್ವೀಪದ ಕಡೆಯಿಂದ ಮೀನುಗಾರಿಕೆ ನಡೆಸಿ ಮರಳುತ್ತಿದ್ದ ಕೇರಳದ ಇಬ್ಬರು ಮೀನುಗಾರರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದ ಇಟಲಿಯ ಇಬ್ಬರು ನಾವಿಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.

- Advertisement -


ಕೇರಳ ಕರಾವಳಿಯಲ್ಲಿ 2012ರ ಫೆಬ್ರವರಿ ತಿಂಗಳಲ್ಲಿ ತಮ್ಮ ನೌಕೆಯತ್ತ ಆಗಮಿಸಿದ್ದ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿದ್ದ ಇಟಲಿ ನಾವಿಕರು ಗುಂಡು ಹಾರಿಸಿದ್ದರು. ಈ ಪ್ರಕರಣದಲ್ಲಿ ಇಟಲಿಯ ಇಬ್ಬರು ನಾವಿಕರ ವಿರುದ್ಧ ಭಾರತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಇದೇ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.


ಪ್ರಕರಣಗಳನ್ನು ರದ್ದುಗೊಳಿಸಲು ಹಾಗೂ ಸಂತ್ರಸ್ತರ ಕುಟುಂಬದವರಿಗೆ 10 ಕೋಟಿ ರೂ ಪರಿಹಾರ ವಿತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿತ್ತು. ಅಂತಾರಾಷ್ಟ್ರೀಯ ನ್ಯಾಯಮಂಡಳಿ ತೀರ್ಪು ಮತ್ತು ಭಾರತ, ಇಟಲಿ ಹಾಗೂ ಕೇರಳ ಸರ್ಕಾರಗಳ ನಡುವೆ ನಡೆದ ಒಪ್ಪಂದಗಳಿಗೆ ಅನುಗುಣವಾಗಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ರಜೆಕಾಲದ ನ್ಯಾಯಪೀಠ, ಆರೋಪಿಗಳಾದ ಮಸ್ಸಿಮಿಲಾನೊ ಲಾಟೊರೆ ಮತ್ತು ಸಾಲ್ವಟೋರ್ ಗಿರೋನ್ ವಿರುದ್ಧದ ಪ್ರಕರಣಗಳನ್ನು ಇಟಲಿಯಲ್ಲಿಯೇ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿತ್ತು.

- Advertisement -

ನಾವಿಕರಿಂದ ಹತ್ಯೆಯಾದ ಮೀನುಗಾರರ ಕುಟುಂಬದವರಿಗೆ ಪಾವತಿಸಲು ಇಟಲಿ ಒಪ್ಪಿಕೊಂಡಿದ್ದ 10 ಕೋಟಿ ರೂ ಪರಿಹಾರವನ್ನು ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕೋರ್ಟ್ ರಿಜಿಸ್ಟ್ರಿಯಲ್ಲಿ ಜಮೆ ಮಾಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಶುಕ್ರವಾರ ನ್ಯಾಯಪೀಠಕ್ಕೆ ತಿಳಿಸಿದ್ದರು. ಈ 10 ಕೋಟಿ ರೂ ಪರಿಹಾರದಲ್ಲಿ ತಲಾ ನಾಲ್ಕು ಕೋಟಿ ರೂ ಮೃತಪಟ್ಟ ಕುಟುಂಬದವರ ಸಂಬಂಧಿಕರಿಗೆ ಹಾಗೂ ಉಳಿದ ಎರಡು ಕೋಟಿ ರೂ ಆ ಮೀನುಗಾರರು ತೆರಳುತ್ತಿದ್ದ ದೋಣಿಯ ಮಾಲೀಕರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

Join Whatsapp