ಸುರತ್ಕಲ್ ಯುವಕನ ಕೊಲೆ| ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್, ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ : SDPI

Prasthutha|

►‘ಆರೋಪಿಗಳನ್ನು ಮತ್ತು ಘಟನೆಯ ಹಿಂದಿರುವ ಶಕ್ತಿಗಳನ್ನು UAPA ಪ್ರಕರಣದಡಿ ಬಂಧಿಸಿ’

- Advertisement -

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಯುವಕನ ಕೊಲೆಯು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಶನಿವಾರ ಸಾಯಂಕಾಲ ಮಂಗಳೂರು ನಗರದ ಹೊರವಲಯದ ಕಾಟಿಪಳ್ಳ ನಾಲ್ಕನೇ ಬ್ಲಾಕಿನ ಲತೀಫಾ ಸ್ಟೋರ್ ಮಾಲಕ ಅಬ್ದುಲ್ ಜಲೀಲ್ ಎಂಬ ಯುವಕನನ್ನು ತನ್ನ ಅಂಗಡಿಯ ಮುಂದೆ ದುಷ್ಕರ್ಮಿಗಳು ಚೂರಿ ಇರಿದು ಹತ್ಯೆ ನಡೆಸಿರುವುದು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮತೀಯ ಶಕ್ತಿಗಳು ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿ , ಹಾಗೂ ಗೂಂಡಾಗಿರಿಗೆ ಕಡಿವಾಣ ಹಾಕದ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ ಎಂದು ಹೇಳಿದ್ದಾರೆ.

- Advertisement -

 ಚುನಾವಣೆ ಹತ್ತಿರ ಬರುತ್ತಿರುವ ದಿನಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಗೂಂಡಾಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸಿ ಮತಬ್ಯಾಂಕ್ ಗಟ್ಟಿಗೊಳಿಸುವ ನೀಚ ರಾಜಕೀಯದ ಚಾಳಿಯನ್ನು ಮುಂದುವರಿಸುತ್ತಿರುವ ಮೂಲಕ ಜಿಲ್ಲೆಯ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ ಎಂದರು.

ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಯನ್ನೇ ಅಣಕಿಸುವ ರೀತಿಯಲ್ಲಿ ಹಿಂದುತ್ವದ ಶಕ್ತಿಗಳು ಜಿಲ್ಲೆಯಲ್ಲಿ ಬೇಕಾಬಿಟ್ಟಿ ಗೂಂಡಾಗಿರಿ ನಡೆಸುತ್ತಿದ್ದಾಗ ಅದರ ಗಂಭೀರತೆ ಬಗ್ಗೆ SDPI ಪೊಲೀಸ್ ಇಲಾಖೆಯನ್ನು, ಗುಪ್ತಚರ ಇಲಾಖೆ ಯನ್ನು ಎಚ್ಚರಿಸಿತ್ತು ಆದರೆ ಇದ್ಯಾವುದನ್ನು ಇಲಾಖೆ ಗಂಭೀರವಾಗಿ ತೆಗೆದು ಕೊಳ್ಳದೆ ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ದೊರೆಯುವಂತಹ ಕೇಸುಗಳನ್ನು ದಾಖಲಿಸಿತು. ಇದರಿಂದ ಪ್ರೇರಿತವಾಗಿ ದುಷ್ಕರ್ಮಿಗಳು ಅಕ್ರಮ ಕೂಟಗಳನ್ನು ಕಟ್ಟಿಕೊಂಡು ಇಂದು ಕೊಲೆ ನಡೆಸುವ ಹಂತಕ್ಕೆ ಬಂದಿದೆ. ಈ ಎಲ್ಲಾ ಘಟನೆಗಳು ಕೇವಲ ಒಂದೋ ಎರಡೋ ವ್ಯಕ್ತಿಗಳಿಂದ ನಡೆಯಲು ಸಾದ್ಯವಿಲ್ಲ ಇದರ ಹಿಂದೆ ಸಂಘಟಿತ ಅಪರಾಧದ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಅನ್ವರ್ ಸಾದಾತ್ ಕಳವಳ ವ್ಯಕ್ತಪಡಿಸಿದ್ದಾರೆ.

 ಪೊಲೀಸ್ ಇಲಾಖೆ ಮತ್ತು   ಸರಕಾರ ಕೂಡಲೇ ಈ ಘಟನೆಯನ್ನು ಯುಎಪಿಐ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅರೋಪಿಗಳನ್ನು ಮತ್ತು ಅದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಿ ಪೊಲೀಸ್ ಇಲಾಖೆಯ ಮೇಲೆ ಜನಸಾಮಾನ್ಯರಿಗೆ ವಿಶ್ವಾಸ ಮೂಡಿಸಬೇಕು. ಸಂಘಪರಿವಾರದ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳ ಮೇಲೆ ಹಲ್ಲೆ, ಕೊಲೆಗಳು ನಡೆದಾಗ ಪೊಲೀಸ್ ಇಲಾಖೆ ತೋರುವ ಉತ್ಸಾಹ ಅಮಾಯಕ ಮುಸ್ಲಿಂ ಯುವಕರ ಕೊಲೆಗಳು ನಡೆದಾಗ ಪೊಲೀಸರು ಯಾಕಾಗಿ ತೋರುವುದಿಲ್ಲ. ಸಂಘಪರಿವಾರದ ಯುವಕರ ಜೀವಕ್ಕಿರುವ ಬೆಲೆ ಇತರ ಸಮುದಾಯದ ಯುವಕರಿಗೆ ಇಲ್ಲವೇ  ಎಂದು ಅವರು ಪ್ರಶ್ನಿಸಿದರು.

 ಸರಕಾರ ಮತ್ತು ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೊಲೆಯಾದ ಜಲೀಲ್ ಕುಟುಂಬಕ್ಕೆ ಕನಿಷ್ಟ ಪಕ್ಷ ಇಪ್ಪತ್ತೈದು ಲಕ್ಷ ರೂಪಾಯಿಗಳ ಪರಿಹಾರ ಮತ್ತು ಕುಟುಂಬದ ಸದಸ್ಯನೊಬ್ಬನಿಗೆ ಸರಕಾರಿ ಹುದ್ದೆ ನೀಡಬೇಕು ಮತ್ತು ಕರಾವಳಿಯಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳನ್ನು ನಿಯಂತ್ರಿಸಲು ಜಿಲ್ಲೆಗೆ ವಿಶೇಷ ಟಾಸ್ಕ್ ಫೋರ್ಸ್ ಒಂದನ್ನು ರಚಿಸಬೇಕು ಎಂದು ಅನ್ವರ್ ಸಾದತ್ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದರು. ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಸಂಘಟನೆಗಳನ್ನು ಜೊತೆ ಸೇರಿಸಿ ಜಿಲ್ಲಾದ್ಯಂತ ಬೃಹತ್ ಜನಾಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Join Whatsapp