ದೇಶದ ವಿದ್ಯಮಾನಗಳ ಕುರಿತು ಸೋನಿಯಾ-ಮಮತಾ ಚರ್ಚೆ ; 2024 ವೇಳೆಗೆ ಮೋದಿ v/s ದೇಶದ ನಡುವೆ ನೇರ ಹಣಾಹಣಿ: ದೀದಿ ಭವಿಷ್ಯ

Prasthutha|

ನವದೆಹಲಿ ಜುಲೈ 28 : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿ.ಎಮ್.ಸಿ ಜಯಗಳಿಸಿದ ನಂತರ ಇದು ಉಭಯ ನಾಯಕರ ಮೊದಲ ಭೇಟಿಯಾಗಿದೆ. ಕಳೆದ ಎರಡು ದಿನಗಳಿಂದಲೂ ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ನಾಯಕರ ಭೇಟಿಯಲ್ಲಿ ತೊಡಗಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದಾರೆ. ಇಂದು ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2024 ರ ಲೋಕಸಭಾ ಚುನಾವಣೆಗಾಗಿ ಪ್ರತಿಪಕ್ಷಗಳನ್ನೆಲ್ಲ ಬಿಜೆಪಿ ವಿರುದ್ಧ ಒಗ್ಗೂಡಿಸುತ್ತಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಯವರು ಇದೊಂದು ಮಹತ್ವದ ಭೇಟಿ ಎಂದು ಬಣ್ಣಿಸಿದ್ದಾರೆ.

- Advertisement -

ಸೋನಿಯಾ ಗಾಂಧಿಯವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ ನಿಜಕ್ಕೂ ಇದೊಂದು ಅತ್ಯುತ್ತಮವಾದ ಧನಾತ್ಮಕವಾದ ಭೇಟಿ ಎಂದು ಹೇಳಿದ್ದಾರೆ. ಹಾಗೇ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳೂ ಒಗ್ಗಟ್ಟಾಗಿ ಕೆಲಸ ಮಾಡಲಿದೆಯೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿಯವರು ನಿನ್ನೆ ಕಾಂಗ್ರೆಸ್ ನಾಯಕರಾದ ಕಮಲನಾಥ್ ಮತ್ತು ಆನಂದ ಶರ್ಮಾರನ್ನೂ ಭೇಟಿಯಾಗಿ ಪ್ರಸ್ತಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿಯವರು  ಇಡೀ ದೇಶದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. 2024 ರ ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ವರ್ಸಸ್ ದೇಶ ಎಂಬಂತೆ ಬದಲಾವಣೆಯಾಗಲಿದೆಯೆಂದು ತಿಳಿಸಿದ್ದಾರೆ. ಈ ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆ ನಾವು ಪ್ರತಿಪಕ್ಷದವರೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಕುಳಿತು 2024 ರ ಚುನಾವಣಾ ರಣತಂತ್ರದ ಕುರಿತು ಚರ್ಚಿಸುತ್ತೇವೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Join Whatsapp