ದೇಶಭಕ್ತಿ ಗೀತೆ ಮತ್ತು ವಾಸ್ತವ ತೆರೆದಿಟ್ಟು ಯತ್ನಾಳ್‌ಗೆ ಉತ್ತರ ಕೊಟ್ಟ ಮೌಲ್ವಿ ತನ್ವೀರ್ ಹಾಶ್ಮಿ

Prasthutha|

ಆರೋಪ ಸಾಬೀತು ಮಾಡದಿದ್ದರೆ ಯತ್ನಾಳ್  ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದ ಮೌಲ್ವಿ

- Advertisement -

ವಿಜಯಪುರ: ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್‌ ಎಂಬ ಉಗ್ರ ಸಂಘಟನೆಯ ಬೆಂಬಲಿತ ವ್ಯಕ್ತಿಯೊಂದಿಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪಕ್ಕೆ ಸಮಾವೇಶದ ಭಾಗಿ ಮೌಲ್ವಿ ತನ್ವೀರ್ ಪೀರಾ ದೇಶಭಕ್ತಿ ಗೀತೆಯ ಮೂಲಕ ತಿರುಗೇಟು ನೀಡಿದ್ದಾರೆ. ಜೊತೆಗೆ, ಸಂಪೂರ್ಣ ವಿವರಣೆಯೊಂದಿಗೆ ಯತ್ನಾಲ್ ಆರೋಪವನ್ನು ಅಲ್ಲಗೆಳೆದಿದ್ದಾರೆ.

ತಮ್ಮ ಫೇಸ್ಬುಕ್ ಅಕೌಂಟ್‌ Hafiz Khwaja ಇದರಲ್ಲಿ ತಾವೇ ಹಾಡಿರುವ “ಸಾರೇ ಜಹಾಸೇ ಅಚ್ಚಾ ಹಿಂದೂ…” ಹಾಡು ಅಪ್ಲೋಡ್ ಮಾಡುವ ಮೂಲಕ ಶಾಸಕ ಯತ್ನಾಳ್ ಆರೋಪಕ್ಕೆ ಟಾಂಗ್ ಕೊಟ್ಟ ಮೌಲ್ವಿ, ಸಮ್ಮೇಳನಕ್ಕೆ 150ಕ್ಕೂ ಹೆಚ್ಚು ಸೂಫಿಗಳನ್ನು ಆಹ್ವಾನಿಸಲಾಗಿತ್ತು. 100ಕ್ಕೂ ಹೆಚ್ಚು ಧರ್ಮಗುರುಗಳ ಭಾಗವಹಿಸಿದ್ದರು. ಯಾರೂ ಸಹ ಐಸಿಸ್‌ ಬೆಂಬಲಿತ ವ್ಯಕ್ತಿಗಳಿರಲಿಲ್ಲ. ಹೇಗೆ ಇರುತ್ತಾರೆ? ಭಯೋತ್ಪಾದನೆಯನ್ನು ಬೆಂಬಲಿಸುವವನು ನೈಜ ಮುಸ್ಲಿಂ ಆಗಿರಲಾರ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -

ಪೊಲೀಸ್ ಇಲಾಖೆಯ ಸೂಚನೆಯಂತೆ ವೇದಿಕೆ ಮೇಲೆ ಕೇವಲ 25 ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ಸಮಾರಂಭದಲ್ಲಿ ಅಂತಹ ವ್ಯಕ್ತಿ ಭಾಗವಹಿಸಿದ್ದರೆ ಗುಪ್ತಚರ ಇಲಾಖೆಗೆ ಅದರ ಬಗ್ಗೆ ಗೊತ್ತಿರಬೇಕಿತ್ತು ಎಂದು ವಿವರಣೆ ನೀಡಿದ್ದಾರೆ.

ಕಳೆದ ಡಿ. 4ರಂದು ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದ ಹಜರತ್ ಸೈಯ್ಯದ್ ಮುಹಮ್ಮದ್ ಬಾದಶಾ ಪೀರಾ (ಭಾಷಾಪೀರಾ) ದರ್ಗಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಭಾರತ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ಜೊತೆ ಐಸಿಸ್‌ ಸಂಘಟನೆಯೊಂದಿಗೆ ನಂಟು ಇದ್ದವರು ಭಾಗಿಯಾಗಿದ್ದರು ಎಂದು ಯತ್ನಾಳ ಆರೋಪಿಸಿ ಅದೇನನ್ನೋ ದಾಖಲೆ ಎಂದು ಬಿಡುಗಡೆ ಮಾಡಿದ್ದರು.

ಐಸಿಸ್‌ ಬೆಂಬಲಿತ ವ್ಯಕ್ತಿ ಯಾರೆಂಬುವುದನ್ನು ಯತ್ನಾಳ ಅವರೇ ಹೇಳಬೇಕು. ಈ ಬಗ್ಗೆ ನಾವು ತನಿಖೆಗೆ ಸಿದ್ಧರಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಒಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಸಾಬೀತಾದರೆ ನಾನು ಈ ದೇಶವನ್ನು ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಸಾಬೀತು ಮಾಡದಿದ್ದರೆ ಬಸನಗೌಡ ಪಾಟೀಲ್​ ಯತ್ನಾಳ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಧರ್ಮಗುರು ಸವಾಲು ಹಾಕಿದ್ದಾರೆ.

Join Whatsapp