ಮಸೂದ್, ಪ್ರವೀಣ್ ಹತ್ಯೆ: ಸಂತ್ರಸ್ತ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಲು ಯು.ಟಿ.ಖಾದರ್ ಆಗ್ರಹ

Prasthutha|

ಮಂಗಳೂರು: ಇತ್ತೀಚೆಗೆ ಸಮಾಜ ಘಾತುಕ ಶಕ್ತಿಗಳು, ಕೊಲೆಗಡುಕರಿಗೆ ಸರಕಾರದ ಭಯವಿಲ್ಲ ಎಂಬುದು ಕೆಲವು ದಿನಗಳಲ್ಲಿ ಆದಂತಹ ಘಟನೆಗಳೇ ಸಾಕ್ಷಿ. ಈ ಸರಕಾರದಲ್ಲಿ ಜನಸಾಮಾನ್ಯರಿಗೂ ರಕ್ಷಣೆ ನೆಮ್ಮದಿಯ ವಾತಾವರಣ ಇಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.

- Advertisement -

ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮಸೂದ್ ಮತ್ತು ಪ್ರವೀಣ್  ಹತ್ಯೆಯಾಗಿದ್ದು ಅತ್ಯಂತ  ನೋವಿನ ವಿಚಾರ. ಗೂಂಡಾಗಳಿಗೆ, ಕೊಲೆಗಡುಕರಿಗೆ ಸರಕಾರ ಮತ್ತು ಕಾನೂನಿನ ಭಯವಿಲ್ಲ ಎಂದು ಇದರಿಂದ ಸಾಬೀತಾಗಿದೆ. ಈ ಹಿಂದೆ ಆದ ಘಟನೆಯನ್ನು ಸೂಕ್ಷ್ಮತೆಯನ್ನು ಅರಿತುಕೊಂಡು ಮುಂಜಾಗ್ರತೆ ಮಾಡುವ ಜವಾಬ್ದಾರಿ ಸರಕಾರ ಮತ್ತು ಪೊಲೀಸ್ ಇಲಾಖೆಯದ್ದು ಎಂದು ಅವರು ಹೇಳಿದ್ದಾರೆ.

ನಿನ್ನೆ ನಡೆದ ಪ್ರವೀಣ್ ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಶಾಸಕ ಯು.ಟಿ.ಖಾದರ್, ಈ ಎಲ್ಲಾ ಘಟನೆಗಳನ್ನು ಭೇದಿಸುವುದರ ಮೂಲಕ ನೈಜ ಅಪರಾಧಿಗಳನ್ನು ಆದಷ್ಟು ಬೇಗನೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರಕಾರ ಮೃತ ಮಸೂದ್ ಮತ್ತು ಪ್ರವೀಣ್ ಅವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕೆಂದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಶಾಸಕ ಯು.ಟಿ.ಖಾದರ್  ಒತ್ತಾಯಿಸಿದ್ದಾರೆ.

- Advertisement -

ಎಲ್ಲಾ ಜಾತಿ, ಮತ, ವರ್ಗದವರು ಒಂದಾಗಿ ಯಾರೇ ಸಮಾಜ ಘಾತುಕ ಶಕ್ತಿಗಳು, ಕೊಲೆಗಡುಕರು ಆಗಲಿ ಅವರ ವಿರುದ್ಧ ಹೋರಾಡಲು ಒಟ್ಟಾಗಿ ಮುಂದಾಗಬೇಕು. ಇಂತಹ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಮಾಜದಲ್ಲಿ ಒಟ್ಟಾಗಿ ಒಂದಾಗಿ ಸಂಪೂರ್ಣ ಸಹಕಾರ ಕೊಡಬೇಕೆಂದು ಯು.ಟಿ.ಖಾದರ್ ಮನವಿ ಮಾಡಿದ್ದಾರೆ.

Join Whatsapp