ಬಿರುಕು ಬಿಟ್ಟಿದ್ದ ಮರವೂರು ಸೇತುವೆ ಜು.30ಕ್ಕೆ ವಾಹನ ಸಂಚಾರಕ್ಕೆ ಮುಕ್ತ: ದ.ಕ. ಜಿಲ್ಲಾಧಿಕಾರಿ

Prasthutha|

ಮಂಗಳೂರು: ಇತ್ತೀಚೆಗೆ ಬಿರುಕು ಬಿಟ್ಟಿದ್ದ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿಯ ಫಲ್ಗುಣಿ ನದಿಯ ಮರವೂರು ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಜು.30ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

- Advertisement -

ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ತಜ್ಞರ ಉಪಸ್ಥಿತಿಯಲ್ಲಿ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಪರೀಕ್ಷಿಸಿದ್ದಾರೆ. ಪರೀಕ್ಷೆ ಯಶಸ್ವಿಯಾಗಿದ್ದು, ಶುಕ್ರವಾರ ಮಧ್ಯಾಹ್ನದಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.  

ಈ ಹಿಂದೆ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಸೇತುವೆಯ ಪಿಲ್ಲರನ್ನು ಮೇಲಕ್ಕೆ ಎತ್ತಿ ಯಥಾಸ್ಥಿತಿಗೆ ತರಲಾಗಿತ್ತು. ನಂತರ ವಾಹನ ಸಂಚಾರ ಸುಲಭವಾಗಲೆಂದು ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಇದೀಗ ಕಾಮಗಾರಿ ಪೂರ್ಣಗೊಂಡಿದೆ.

- Advertisement -

ಮರವೂರು ಸೇತುವೆಯಲ್ಲಿ ಇತ್ತೀಚೆಗೆ ಭಾರೀ ಬಿರುಕು ಮೂಡಿರುವುದನ್ನು ಸ್ಥಳೀಯರೊಬ್ಬರು ಗಮನಿಸಿ ಮಾಹಿತಿ ರವಾನಿಸಿದ್ದರು. ಕೂಡಲೇ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವರು ಸುತ್ತುಬಳಸಿ ಹೋಗುವಂತಾಗಿತ್ತು. ಇದೀಗ ಸುಮಾರು ಒಂದೂವರೆ ತಿಂಗಳ ಬಳಿಕ ಸೇತುವೆ ಮತ್ತೆ ಸಂಚಾರಕ್ಕೆ ಮುಕ್ತವಾಗಲಿದೆ.

Join Whatsapp