ಮಂಗಳೂರು: ಯುವಕನ ಹತ್ಯೆಗೆ ವ್ಯಾಪಕ ಖಂಡನೆ

Prasthutha|

ಮಂಗಳೂರು: ಮಂಗಳೂರು ನಗರದ ಹೊರವಲಯದ ಕಾಟಿಪಳ್ಳ ನಾಲ್ಕನೇ ಬ್ಲಾಕಿನ ಲತೀಫಾ ಸ್ಟೋರ್ ಮಾಲಕ ಅಬ್ದುಲ್ ಜಲೀಲ್ ಎಂಬ ಯುವಕನ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

- Advertisement -

ಫಾಝಿಲ್  ಹತ್ಯೆಯ ಬಳಿಕ ಶಾಂತವಾಗಿದ್ದ ಸುರತ್ಕಲ್ ನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸಗೈದಿದ್ದು, ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳು ಕೇಳಿ ಬಂದಿದೆ.  

ಈ ಕುರಿತು ಟ್ವೀಟ್ ಮಾಡಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಮುಖಂಡ ರಿಯಾಝ್ ಕಡಂಬು, ಸುರತ್ಕಲ್ ನಲ್ಲಿ ಮತ್ತೊಂದು ಕೊಲೆಯಾಗಿದ್ದು,  ಮಂಗಳೂರು ಕಮಿಷನರೇಟ್  ವ್ಯಾಪ್ತಿ ಕೊಲೆಗಳ ಬೀಡಾಗುತ್ತಿದೆ. ಪೊಲೀಸ್ ಇಲಾಖೆ ರಾಜಕಾರಣಿಗಳಿಗೆ ಎಸ್ಕಾರ್ಟ್ ಕೊಡ್ಲಿಕ್ಕೆ, ಅಮಾಯಕರನ್ನು UAPA ಹಾಕಿ ಬಂಧಿಸಲಿಕ್ಕೆ ಸೀಮಿತವಾಗಿದೆ. ಅದು ಬಿಟ್ಟು ಕೊಲೆ, ನೈತಿಕ ಪೊಲೀಸ್ ಗಿರಿ, ದರೋಡೆ, ಡ್ರಗ್ಸ್ ಮಾಫಿಯಾಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.

- Advertisement -

ಸುರತ್ಕಲ್ ಸಮೀಪ ಜಲೀಲ್ ಎಂಬ ಯುವಕನ ಕೊಲೆಯಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸಂಘಪರಿವಾರ ನಡೆಸುತಿರುವ 10ಕ್ಕೂಅಧಿಕ ಗುಂಪು ಹಲ್ಲೆ ನಡೆಸಿದವರಿಗೆ ಅಂದೇ ಸಿಗುವ ಜಾಮೀನಿಗೆ ಪ್ರೇರಣೆಗೊಂಡು ಜಿಲ್ಲೆಯು ಅಶಾಂತಿಗೆ ಕಾರಣವಾಗುವ ಮೊದಲು ಪೋಲೀಸರು ಸಂಘಿ ಸರಕಾರದ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು SDPI ರಾಜ್ಯ ನಾಯಕ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

SSF ಖಂಡನೆ

ಅಮಾಯಕ ಜಲೀಲ್ ರನ್ನು ಹತ್ಯೆ ಮಾಡಿರುವ ದುಷ್ಕೃತ್ಯಗಳ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ಪೋಲಿಸ್ ಇಲಾಖೆ ಯು ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಸಮಿತಿ ಆಗ್ರಹಿಸಿದೆ.

ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವನ್ನು ವಿಫಲಗೊಳಿಸದಿದ್ದರೆ ಅರಾಜಕತೆ ಉಂಟಾಗುವ ಅಪಾಯ ಇದೆ. ಇದನ್ನು ಮನಗಂಡು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಮುಸ್ಲಿಮ್ ಜಮಾಅತ್ ಖಂಡನೆ

ಜಲೀಲ್ ಹತ್ಯೆಯನ್ನು ಕರ್ನಾಟಕ ಮುಸ್ಲಿಮ್ ಜಮಾಅತ್ ತೀವ್ರವಾಗಿ ಖಂಡಿಸಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಕೊಲೆಗಳು, ಕೋಮು ಗಲಭೆ, ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಮುಖ್ಯವಾಗಿ ಮುಸ್ಲಿಮ್ ಸಮುದಾಯದ ವ್ಯಕ್ತಿಗಳನ್ನು ಗುರಿಯಾಗಿಸಿ ನೈತಿಕ ಪೊಲೀಸ್ ಗಿರಿ, ಹಲ್ಲೆಯಂತಹ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವುದೇ ಇಂದು ಜಲೀಲ್ ರಂತಹವರ ಕೊಲೆಗೆ ಕಾರಣವಾಗಿದೆ.

ರಾಜ್ಯ ಸರಕಾರ ಕೂಡಲೇ ಕರಾವಳಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಭದ್ರಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜಲೀಲ್ ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಕ್ರಮಕೈಗೊಳ್ಳುವುದರ ಜೊತೆಗೆ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.

 ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಖಂಡನೆ

ಸುರತ್ಕಲ್ ಕಾಟಿಪಳ್ಳ ದಲ್ಲಿ ಅಂಗಡಿಯಲ್ಲಿ ಕೆಲಸಕ್ಕಿರುವ ಜಲೀಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಖಂಡನೀಯ, ದ ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅನೈತಿಕ ಪೊಲೀಸ್ ಗಿರಿ ಘಟನೆಗಳು ನಡೆದಾಗ, ಹಲವು ಬಾರಿ ಜಿಲ್ಲಾಡಳಿತ ದೊಂದಿಗೆ ಎಚ್ಚರವಹಿಸಲು ಮನವಿಯನ್ನು ನೀಡಿದ್ದೆವು, ಆರೋಪಿಗಳಿಗೆ ಸಣ್ಣ ಪುಟ್ಟ ಕೇಸು ಹಾಕಿ ಬಿಡುಗಡೆಯಾಗುವಂತೆ ಪೊಲೀಸ್ ಇಲಾಖೆ ಸಹಕರಿಸಿದ್ದೇ ದುಷ್ಕರ್ಮಿಗಳಿಗೆ ಕ್ರಿಮಿನಲ್ ಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಿದಂತಾಗಿ, ಕಾನೂನಿನ ಹೆದರಿಕೆ ಇಲ್ಲದಂತಾಗಿದೆ.

ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹೇಳಿಕೆಯೂ ಇದಕ್ಕೆ ನೇರ ಪ್ರೇರಣೆಯಾಗಿದೆ. ಅನೈತಿಕ ಪೊಲೀಸ್ ಗಿರಿ ಮತ್ತು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸರಕಾರ ನೇರ ಹೊಣೆ. ಜಿಲ್ಲಾಡಳಿತ ಕೂಡಲೇ ಮದ್ಯೆ ಪ್ರವೇಶಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಕೆ .ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಕೆ.ಎಸ್.ಜೆ.ಎಂ ಖಂಡನೆ

ಜಲೀಲ್ ರವರನ್ನು ಅಮಾನುಷವಾಗಿ ಕೊಲೆಗೈದ ಕೃತ್ಯವನ್ನು ಉಡುಪಿ ಜಿಲ್ಲಾ ಎಸ್.ಕೆ.ಎಸ್.ಜೆ.ಎಂ ಪ್ರಧಾನ ಕಾರ್ಯದರ್ಶಿ ಹಂಝ ಫೈಝಿ ತೋಡಾರ್ ತೀವ್ರವಾಗಿ ಖಂಡಿಸಿದ್ದಾರೆ.

      ಕೋಮು ಸೂಕ್ಷ್ಮ ಪ್ರದೇಶವಾದ ಜಿಲ್ಲೆಯಾದ್ಯಂತ   ಮುಸಲ್ಮಾನರ ಮೇಲೆ ದೈನಂದಿನ ಹೆಚ್ಚುತ್ತಿರುವ ಕೊಲೆ, ಹಲ್ಲೆ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಹಿಂದೆ ನಡೆದ ಸರಣಿ ಕೊಲೆಗಳ‌ ಹಿಂದಿರುವ ನಿಜವಾದ ಅರೋಪಿಗಳನ್ನು ಬಂಧಿಸದೇ ಇದ್ದುದೇ ಇಂತಹ ಪ್ರಕರಣಗಳು ಹೆಚ್ಚಾಗಲು ಮೂಲ‌ಕಾರಣ ಎಂದು ಅವರು ಹೇಳಿದರು.

      ಚುನಾವಣಾ ಪೂರ್ವ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರು ಜೀವಿಸಲು ಭಯ ಪಡುವಂತಹ ಶೋಚನೀಯ ಪರಿಸ್ಥಿತಿಯು ನಿರ್ಮಾಣವಾಗಿದೆ. ಮತ್ತು  ಎಲ್ಲಾ ಕೊಲೆ ಪ್ರಕರಣಗಳ ನೈಜ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್  ಆಗ್ರಹಿಸಿದೆ.

ಮಾಜಿ ಶಾಸಕ ಮೊಯ್ದೀನ್ ಬಾವ ಖಂಡನೆ

ಜಲೀಲ್ ಕೊಲೆಯನ್ನು ಮಾಜಿ ಶಾಸಕ ಮೊಯ್ದೀನ್ ಬಾವ ತೀವ್ರವಾಗಿ ಖಂಡಿಸಿದ್ದು, ಗೃಹ ಇಲಾಖೆ ಮತ್ತು ಸರ್ಕಾರದ ಸಂಪೂರ್ಣ ವೈಫಲ್ಯದಿಂದ ಕೃತ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನಡೆದ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಅರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳುವಲ್ಲಿ ನಿರುತ್ಸಾಹ ತೋರಿಸಿದ ಗೃಹ ಸಚಿವರ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಕೊಲೆ ನಡೆದಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಖಂಡನೆ

ಜಲೀಲ್ ಕೊಲೆಯನ್ನು ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಕಠಿಣ ಶಬ್ದಗಳಿಂದ ಖಂಡಿಸಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.

ಅಬ್ದುಲ್ ಜಲೀಲ್ ಅವರನ್ನು  ತನ್ನ ಅಂಗಡಿಯ ಮುಂದೆ ದುಷ್ಕರ್ಮಿಗಳು ಚೂರಿ ಇರಿದು ಹತ್ಯೆ ನಡೆಸಿರುವುದು ಮಾನವೀಯತೆ ಇರುವ ಪ್ರತಿಯೊಬ್ಬರು ಖಂಡಿಸಲೇಬೇಕಾಗಿದೆ. ಈ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಪೊಲೀಸ್ ಇಲಾಖೆ ಬಯಲಿಗೆಳೆಯ ಬೇಕು ಎಂದು ಆಗ್ರಹಿಸಿದೆ.

Join Whatsapp