ಮಮತಾ ಬ್ಯಾನರ್ಜಿ ಚುನಾವಣಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಕೌಶಿಕ್ ಚಂದಾ; ಮಮತಾಗೆ ರೂ.5 ಲಕ್ಷ ದಂಡ

Prasthutha|

ಪ. ಬಂಗಾಳ: ವಿಧಾನಸಭಾ ಚುನಾವಣೆಯ ವೇಳೆ ನಂದಿಗ್ರಾಮ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವುದರಿಂದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರು ಹಿಂದೆ ಸರಿದಿದ್ದಾರೆ. ಅದರೆ, ಇದೇ ವೇಳೆ, ನ್ಯಾಯಾಲಯವು ನ್ಯಾ. ಚಂದಾ ಅವರು ಪ್ರಕರಣವನ್ನು ಆಲಿಸುವುದರಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಕ್ಕೆ ಮಮತಾ ಬ್ಯಾನರ್ಜಿ ಅವರಿಗೆ ರೂ. 5 ಲಕ್ಷ ದಂಡ ವಿಧಿಸಿದೆ.

- Advertisement -


ಪ್ರಕರಣದಿಂದ ಹಿಂಸರಿಯುವ ವೇಳೆ ನ್ಯಾ ಚಂದಾ ಅವರು, ತಮ್ಮ ಮುಂದೆ ಪ್ರಕರಣವು ಮೊದಲ ಬಾರಿಗೆ ಜೂ.18ರಂದು ಬಂದಾಗ ತಾವು ಹಿಂದೆ ಸರಿಯಬೇಕು ಎಂದು ಯಾವುದೇ ಮನವಿಯನ್ನು ಮಾಡಲಾಗಿರಲಿಲ್ಲ. ಆದರೆ, ವಿಚಾರಣೆಯ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿಯೊಂದಿಗಿನ ತಮ್ಮ ನಂಟನ್ನು ಬಿಂಬಿಸಲು ಫೋಟೋಗಳು, ಮಾಹಿತಿಯೊಂದಿಗೆ ಸಿದ್ಧರಾಗಿದ್ದರು ಹಾಗೂ ಈ ಸಂಬಂಧ ಅನೇಕ ಟ್ವೀಟ್ಗಳನ್ನು ಮಾಡಿದರು ಎಂದಿದ್ದಾರೆ.


ಅಲ್ಲದೆ, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮನವಿಯನ್ನೂ ಮಾಡಲಾಯಿತು ಎನ್ನುವುದನ್ನೂ ನ್ಯಾ. ಚಂದಾ ಅವರು ಗಮನಿಸಿದರು. “ಈ ಮೇಲಿನ ಘಟನಾವಳಿಗಳನ್ನು ಗಮನಿಸಿದಾಗ ಹಿಂದೆ ಸರಿಯುವ ಅರ್ಜಿಯನ್ನು ನ್ಯಾಯಾಲಯದ ಮುಂದೆ ಇರಿಸುವುದಕ್ಕೂ ಮುನ್ನ ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ನನ್ನ ನಿರ್ಧಾರವನ್ನು ಪ್ರಭಾವಿಸುವ ಯತ್ನ ನಡೆಯಿತು. ಪ್ರಕರಣದಿಂದ ಹಿಂದೆ ಸರಿಯುವಂತೆ ಮಾಡಲು ನಡೆಸಿದ ಲೆಕ್ಕಾಚಾರದಿಂದ ಕೂಡಿದ ಅಪವಾದ ಮತ್ತು ಮಾನಸಿಕ ದಾಳಿಯನ್ನು ದೃಢವಾಗಿ ವಿರೋಧಿಸಬೇಕಿದ್ದು ಅರ್ಜಿದಾರರ ವಿರುದ್ಧ ರೂ. 5 ಲಕ್ಷ ದಂಡವನ್ನು ವಿಧಿಸಲಾಗಿದೆ,” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

- Advertisement -


ದಂಡವನ್ನು ಪಶ್ಚಿಮ ಬಂಗಾಳ ವಕೀಲರ ಪರಿಷತ್ತಿಗೆ ಪಾವತಿಸಬೇಕಿದ್ದು, ದಂಡದ ಮೊತ್ತವನ್ನು ಕೋವಿಡ್ಗೆ ಬಲಿಯಾದ ವಕೀಲರ ಕುಟುಂಬಗಳ ಒಳಿತಿಗೆ ಬಳಸಬೇಕು ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ನ್ಯಾಯಾಲಯವು, ರಾಜಕೀಯ ಪಕ್ಷಗಳೊಂದಿಗಿನ ನ್ಯಾಯಮೂರ್ತಿಗಳು ಸಂಪರ್ಕ ಹೊಂದಿದ್ದರು ಎಂದ ಮಾತ್ರಕ್ಕೆ ಅದುವೇ ಅವರು ಪ್ರಕರಣದಿಂದ ಹಿಂದೆ ಸರಿಯಲು ಕಾರಣವಾಗಬೇಕಿಲ್ಲ. ಪ್ರತಿಯೊಬ್ಬ ನ್ಯಾಯಮೂರ್ತಿಗೂ ಅವರದೇ ಅದ ರಾಜಕೀಯ ಒಲವುಗಳಿರುತ್ತವೆ ಎಂದಿತು.


“ಯಾವುದೇ ವ್ಯಕ್ತಿಯಂತೆ ನ್ಯಾಯಮೂರ್ತಿಗಳು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ ಹಾಗೂ ರಾಜಕೀಯ ಒಲವನ್ನು ಹೊಂದಿರುತ್ತಾರೆ. ನ್ಯಾಯಮೂರ್ತಿಯೊಬ್ಬರು ಈ ಹಿಂದೆ ರಾಜಕೀಯ ಪಕ್ಷವೊಂದರ ಜೊತೆ ಸಂಪರ್ಕ ಹೊಂದಿದ್ದರು ಎಂದ ಮಾತ್ರಕ್ಕೆ ಪಕ್ಷಪಾತದ ಭೀತಿ ವ್ಯಕ್ತಪಡಿಸಲು ಅದುವೇ ಸಕಾರಣವಾಗುವುದಿಲ್ಲ. ಅಂತಹ ಅರೋಪಗಳನ್ನು ಒಪ್ಪಿದರೆ ಬೆಂಚ್ ಆಯ್ಕೆ ಮಾಡಿಕೊಳ್ಳುವ ಬೇಟೆಗೆ ಅನುವು ಮಾಡಿದಂತಾಗುತ್ತದೆ,” ಎಂದು ನ್ಯಾ. ಚಂದಾ ಅಭಿಪ್ರಾಯಪಟ್ಟರು.


ಮುಂದುವರೆದ ಅವರು, ಮಮತಾ ಬ್ಯಾನರ್ಜಿ ಅವರ ಪ್ರಕರಣವನ್ನು ಆಲಿಸಲು ತಮಗೆ ಯಾವುದೇ ವೈಯಕ್ತಿಕ ಒಲವು ಇಲ್ಲ. ಹಾಗೆ ಮಾಡುವುದು ಉಪದ್ರವಿಗಳಿಗೆ ನ್ಯಾಯಾಲಯವನ್ನು ಹೀಯಾಳಿಸುವ ಸಲುವಾಗಿ ಹೊಸ ವಿವಾದಗಳನ್ನು ಸೃಷ್ಟಿಸಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು.
(ಕೃಪೆ: ಬಾರ್ ಬೆಂಚ್.ಕಾಮ್)

Join Whatsapp