ಮಮತಾ ಬ್ಯಾನರ್ಜಿಗೆ ನೈತಿಕ ಬೆಂಬಲದ ಅಗತ್ಯವಿದೆ, ನಾನು ಅವರ ಬೆಂಬಲಕ್ಕಿರುವೆ – ಹೆಚ್ ಡಿಕೆ
Prasthutha: March 11, 2021

ಬಂಗಾಳದಲ್ಲಿ ಅತ್ಯಂತ ಜನಪರ ಮತ್ತು ಸ್ವಚ್ಛ ಆಡಳಿತವನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ. ಹೀಗಾಗಿ ಅವರಿಗೆ ಜನಬೆಂಬಲ ಅಪಾರವಾಗಿದೆ. ಎಂಥ ಶಕ್ತಿಯ ವಿರುದ್ಧ ಹೋರಾಡಿಯಾದರೂ ಬಂಗಾಳವನ್ನು ಗೆಲ್ಲುವ ಶಕ್ತಿ ಮಮತಾ ಅವರಿಗಿದೆ. ಈ ಚುನಾವಣೆಯನ್ನು ಅವರು ಗೆಲ್ಲುತ್ತಾರೆ ಕೂಡ. ಅವರಿಗೆ ಈಗ ನೈತಿಕ ಬೆಂಬಲ ನೀಡಬೇಕಿದೆ. ನಾನು ಅವರ ಬೆಂಬಲಕ್ಕಿರುವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಘಟನೆ ತಿಳಿದು ಆಘಾತವಾಯ್ತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲಿ.ಚುನಾವಣೆಗಳನ್ನು ಪ್ರಜಾಸತ್ತಾತ್ಮಕವಾಗಿ ಗೆಲ್ಲಬೇಕು.ಹಿಂಸೆಯಿಂದ ಅಲ್ಲ. ಘಟನೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು.ಚುನಾವಣಾ ವ್ಯವಸ್ಥೆಯನ್ನು ರಕ್ಷಿಸಬೇಕು ಎಂದಿದ್ದಾರೆ.
