ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಏಕನಾಥ್ ಶಿಂಧೆಯನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿದ ಶಿವಸೇನೆ

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ನಡುವೆ, ಶಿವಸೇನೆ ಮಂಗಳವಾರ ಕ್ಯಾಬಿನೆಟ್ ಸಚಿವ ಮತ್ತು ಪಕ್ಷದ ನಾಯಕ ಏಕನಾಥ್ ಶಿಂಧೆ ಅವರನ್ನು ಬಂಡಾಯದ ನಂತರ ತನ್ನ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಲು ಶಿವಸೇನೆ ನಿರ್ಧರಿಸಿದೆ

- Advertisement -

ಮೂಲಗಳ ಪ್ರಕಾರ, ಸೆವ್ರಿ ಶಾಸಕ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ಗುಂಪಿನ ಹೊಸ ನಾಯಕರಾಗಿ ಹೆಸರಿಸಲಾಗಿದೆ.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದ ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರ ವಿಚಾರ ತಣ್ಣಗಾಗುವುದಕ್ಕೆ ಮೊದಲೇ ಶಿವಸೇನೆಗೆ ಸೇರಿದ ಮಂತ್ರಿ ಮತ್ತು ಕೆಲವು ಶಾಸಕರು ಗುಜರಾತಿಗೆ ತೆರಳಿ ಯಾರ ಕೈಗೂ ಸಿಗದೆ ಅಡಗಿ ಕುಳಿತಿದ್ದಾರೆ ಎಂದು ವರದಿಯಾಗಿದೆ.

- Advertisement -

ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಮೊದಲು ಮೈತ್ರಿ ಕೂಟದವರಿಗೆ ತಿಳಿಸಿ, ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಪಕ್ಷದ ಶಾಸಕರನ್ನು ಕರೆದು ಶಿಂಧೆ ಸ್ಥಾನಕ್ಕೆ ಚೌಧರಿಯನ್ನು ಆಯ್ಕೆ ಮಾಡಿರುವುದಾಗಿ ಪ್ರಕಟಿಸಿದರು.

“ಎಂವಿಎ ಸರಕಾರ ಬೀಳಿಸಲು ಬಿಜೆಪಿ ಮೂರನೆಯ ಬಾರಿ ನಡೆಸಿರುವ ಪ್ರಯತ್ನವಿದು. ಏಕನಾಥ್ ಎಂದೂ ತಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ನಮ್ಮ ಬಳಿ ಹೇಳಿಲ್ಲ. ಏನೇ ಇದ್ದರೂ ಉದ್ಧವ್ ಠಾಕ್ರೆಯವರು ಪರಿಸ್ಥಿತಿ ನಿಭಾಯಿಸುವರು” ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಹೇಳಿದರು.

ಸೂರತ್ತಿನ ಲೆ ಮೆರಿಡಿಯನ್ ಹೋಟೆಲಿಗೆ ಹೊಸಬರು ಯಾರನ್ನೂ ಬಿಡುತ್ತಿಲ್ಲ. ಪ್ರತಿಯೊಬ್ಬರನ್ನು ಆಸುಪಾಸಿನಲ್ಲಿ ಪೊಲೀಸರು ತಪಾಸಣೆ ಮಾಡಿತ್ತಿದ್ದಾರೆ.

“ಏಕನಾಥ ಶಿಂಧೆಯವರಿಗೆ ಯಾರೋ ತಪ್ಪು ಮಾರ್ಗದರ್ಶನ ಮಾಡಿದ್ದಾರೆ. ಅವರ ಜೊತೆಗೆ ಹೋಗಿರುವ ಶಾಸಕರು ಹಿಂದಿರುಗಲು ಬಯಸಿದ್ದಾರೆ. ನಾನಾ ಮಾರ್ಗಗಳಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ” ಎಂದು ಶಿವಸೇನೆಯ ಹಿರಿಯ ನಾಯಕರೊಬ್ಬರು ಹೇಳಿದರು.

ಇದರ ನಡುವೆ ಪ್ರತಿಪಕ್ಷ ಬಿಜೆಪಿಯ ನಾಯಕ ದೇವೇಂದ್ರ ಫಡ್ನವೀಸ್ ದಿಲ್ಲಿಗೆ ಹಾರಿದ್ದಾರೆ.

ನಾಲ್ವರು ರಾಜ್ಯ ಮಂತ್ರಿಗಳು ಸಂಪರ್ಕದಲ್ಲಿಲ್ಲ ಎಂಬ ಸುದ್ದಿ ಕೂಡ ಇಂದು ಬೆಳಿಗ್ಗೆ ಹಬ್ಬಿತ್ತು. ಅದು ಗಾಳಿ ಸುದ್ದಿ ಎಂದು ಕೆಲವರು ಖಚಿತ ಪಡಿಸಿದ್ದಾರೆ. 

Join Whatsapp