ಹಣದ ರಾಜಕೀಯಕ್ಕೆ ಸೋಲಾಗಿದೆ, ಜನರ ಪ್ರೀತಿಗೆ ಗೆಲುವಾಗಿದೆ: ಹೆಚ್.ಡಿ.ಕುಮಾರಸ್ವಾಮಿ

Prasthutha|

ಬಿಡದಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಹಣದ ರಾಜಕೀಯಕ್ಕೆ ಸೋಲಾಗಿದೆ. ಜನರ ಪ್ರೀತಿಗೆ ಗೆಲುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

- Advertisement -

ಬಿಡದಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಕಾಂಗ್ರೆಸ್ ನವರು ದೊಡ್ಡಮಟ್ಟದಲ್ಲಿ ಬಿಡದಿ ಹಿಡಿಯಲು ಹೊರಟ್ಟಿದ್ದರು. ಕುಮಾರಸ್ವಾಮಿ ಇಲ್ಲಿನ ಕೇತಗಾನಹಳ್ಳಿ ಇದ್ದಾರೆ. ಅವರನ್ನು ಅಲ್ಲಿಗೇ ನೂಕುತ್ತೇವೆ ಎಂದಿದ್ದರು. ಈ ಫಲಿತಾಂಶ ಅವರಿಗೆ ಉತ್ತರ ನೀಡಿದೆ ಎಂದರು.

ಕಾಂಗ್ರೆಸ್ ಪಕ್ಷದ ಜತೆ ಸಂಸದರು, ಮಾಜಿ ಶಾಸಕರ ಜೊತೆ ದೊಡ್ಡ ಹಿಂಡಿತ್ತು. ಆದರೆ ಬಿಡದಿಯ ಮತದಾರರು ನಮಗೆ ಆರ್ಶೀವಾದ ಮಾಡಿದ್ದಾರೆ. ಈ ಫಲಿತಾಂಶ ನನಗೆ ದೊಡ್ಡಮಟ್ಟದ ಅಚ್ಚರಿ ಫಲಿತಾಂಶ ಅಲ್ಲ, ನಿರೀಕ್ಷಿತವೇ ಆಗಿತ್ತು ಎಂದು ಅವರು ತಿಳಿಸಿದರು.
ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳ ಬಿಡದಿ. ಬಿಡದಿಯ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ. ನಾನು ಎರಡು ದಿನ ನಮ್ಮ ಶಾಸಕರ ಜತೆ ಸೇರಿ ಪ್ರಚಾರ ಮಾಡಿದ್ದೆ. ಮುಂದಿನ 2023ರ ಚುನಾವಣೆಗೆ ಈ ಫಲಿತಾಂಶ ನನಗೆ ಮಾನಸಿಕವಾಗಿ ಶಕ್ತಿ ತುಂಬಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

- Advertisement -

ರಾಜ್ಯದ ವಿಜಯಪುರ, ರಾಯಚೂರು, ಶಿರಾ ಮತ್ತಿತರೆ ಕಡೆ ನಮ್ಮವರು ಗೆದ್ದಿದ್ದಾರೆ. ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದರು. ಜನ ಇವತ್ತು ಅಲ್ಲಿಯೂ ಉತ್ತರ ನೀಡಿದ್ದಾರೆ. ಉಪ ಚುನಾವಣೆಗಳು ಬೇರೆ, ಸಾರ್ವತ್ರಿಕ ಚುನಾವಣೆಗಳು ಬೇರೆ. 2023ರಲ್ಲಿ ಜೆಡಿಎಸ್ ಏನು ಎಂದು ಜನರೇ ಉತ್ತರ ಕೊಡುತ್ತಾರೆ. ಕಾಂಗ್ರೆಸ್ ನವರು ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಚಿಕ್ಕಮಗಳೂರಿನಲ್ಲಿ ನಮ್ಮನ್ನು ಬಿಟ್ಟು ಬೇರೆಯವರು ಅಧಿಕಾರ ಮಾಡಲು ಆಗಲ್ಲ. ಅಲ್ಲಿನ ನಗರಸಭೆಯಲ್ಲಿ ನಮ್ಮ ಬೆಂಬಲ ಇದ್ದವರಿಗೆ ಅಧಿಕಾರ ಸಿಗುತ್ತದೆ. ರಾಜ್ಯದ ಹಲವಾರು ಕ್ಷೇತ್ರದಲ್ಲಿ ನಮ್ಮ ಬೆಂಬಲ ಬೇಕೆಬೇಕು, ಅದೇ ಪರಿಸ್ಥಿತಿ ಅನೇಕ ಕಡೆ ಇದೆ. ಕರಾವಳಿಯಲ್ಲಿಯೂ ನಮಗೆ ಒಂದು ಸ್ಥಾನ ಸಿಕ್ಕಿದೆ, ಅಲ್ಲಿ ನಮ್ಮ ನೆಲೆ ಇರಲಿಲ್ಲ. ನಾವು ಆರ್ಥಿಕವಾಗಿ ಶಕ್ತಿ ತುಂಬಿಲ್ಲ, ಆದರೂ ಕಾರ್ಯಕರ್ತರೇ ಹೋರಾಟ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

2023 ನಮ್ಮ ಪಕ್ಷದ ಸಂಘಟನಾ ವರ್ಷ:

2023ರ ಚುನಾವಣೆಗೆ ನಾವು ತಯಾರಿ ನಡೆಸುತ್ತಿದ್ದೇವೆ. ರಾಜಕೀಯ ವಿಶ್ಲೇಷಕರ ನಿರೀಕ್ಷೆ ಬದಲಾಗಲಿದೆ ಎನ್ನುವುದು ನನ್ನ ಅಚಲ ವಿಶ್ವಾಸ. ಸಂಕ್ರಾಂತಿಯಿಂದ ನಾನು ಒಂದು ದಿನವೂ ಬಿಡುವು ತೆಗೆದುಕೊಳ್ಳುವುದಿಲ್ಲ. 123 ಸ್ಥಾನಗಳ ಗುರಿ ತಲುಪಲು ಪಕ್ಷ ಸಂಘಟನೆ ಮಾಡುತ್ತೇವೆ. ಯಾರು ಎಷ್ಟೇ ಲಘುವಾಗಿ ಮಾತನಾಡಲಿ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಪ್ರಾರಂಭಿಸುತ್ತೇವೆ ಎಂದು ಅವರು ತಿಳಿಸಿದರು

Join Whatsapp