UAPAಯಡಿ ಬಂಧಿತ ಅತೀಕುರ್ರಹ್ಮಾನ್ ಜೀವಕ್ಕೆ ಅಪಾಯ: ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ

Prasthutha|

ಉತ್ತರ ಪ್ರದೇಶ: ಯುಎಪಿಎಯಡಿ ಬಂಧಿತನಾಗಿ ಜೈಲಿನಲ್ಲಿರುವ ಅತೀಕುರ್ರಹ್ಮಾನ್ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಆತನ ಜೀವ ಅಪಾಯದಲ್ಲಿದೆ. ತಕ್ಷಣ ಆತನಿಗೆ ಶಸ್ತ್ರ ಚಿಕಿತ್ಸೆ ದೊರೆಯದಿದ್ದರೆ ಆತ ಜೈಲಿನಲ್ಲೇ ಸಾವನ್ನಪ್ಪಬಹುದು ಎಂದು ಆತನ ಕುಟುಂಬದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ದಿ ಕ್ವಿಂಟ್ ಪತ್ರಕರ್ತರೊಬ್ಬರು ಕರೆ ಮಾಡಿದಾಗ, “ನನ್ನ ಸಹೋದರನ ಕುರಿತು ವಿಚಾರಿಸಲು ನನಗೆ ಕರೆ ಮಾಡಿದ ಮೊದಲ ಪತ್ರಕರ್ತ ನೀನು. ಅವನಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ, ಇಲ್ಲದಿದ್ದರೆ ಆತ ಸಾಯಬಹುದು ಎಂದು ನಾವು ಆತಂಕಗೊಂಡಿದ್ದೇವೆ” ಎಂದು ಯುಎಪಿಎಯಡಿ ಬಂಧಿತನಾಗಿರುವ ಅತೀಕುರ್ರಹ್ಮಾನ್ ಅವರ ಸಹೋದರ ಮತೀನ್ ಅವರು ಉತ್ತರ ಪ್ರದೇಶದ ಮುಝಫ್ಫರ್ ನಗರದ ಮನೆಯಿಂದಲೇ ಉತ್ತರಿಸುತ್ತಾರೆ.

- Advertisement -


ಪಶ್ಚಿಮ ಯುಪಿಯ ಹತ್ರಾಸ್‌ ನಲ್ಲಿ 2020ರ, ಸೆಪ್ಟೆಂಬರ್‌ನಲ್ಲಿ ದಲಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ಯಲಾಗಿತ್ತು. ಈ ಹತ್ಯೆ ಘಟನೆಯ ನಂತರ ಹತ್ರಾಸ್ ಗೆ ತೆರಳುತ್ತಿದ್ದ ಕೆಲವು ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಪತ್ರಕರ್ತರನ್ನು ‘ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಸಂಚು’ ಎಂಬ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಬಂಧಿತ ಎಂಟು ಮಂದಿ ಆರೋಪಿಗಳಲ್ಲಿ ಮತೀನ್ ಸಹೋದರ 27 ವರ್ಷದ ಅತೀಕುರ್ರಹ್ಮಾನ್ ಕೂಡ ಒಬ್ಬರು. ಯುಪಿ ಪೊಲೀಸರ ವಿಶೇಷ ಕಾರ್ಯಪಡೆ, ರಹ್ಮಾನ್ ಮತ್ತು ಪತ್ರಕರ್ತ ಸಿದ್ದೀಕ್ ಕಾಪ್ಪನ್ ಸೇರಿದಂತೆ ಇತರ ಏಳು ಮಂದಿಯ ವಿರುದ್ಧ ದೇಶದ್ರೋಹ, ಯುಎಪಿಎ ಸೇರಿದಂತೆ ಐಪಿಸಿಯ ಹಲವು ಕಲಂಗಳಡಿ ಪ್ರಕರಣ ದಾಖಲಿಸಿದ್ದರು.


ಅಕ್ಟೋಬರ್ 2020 ರಲ್ಲಿ ಅತೀಕುರ್ರಹ್ಮಾನ್ ರನ್ನು ಬಂಧಿಸುವ ಒಂದು ತಿಂಗಳ ಮೊದಲು, ಏಮ್ಸ್ ನಲ್ಲಿರುವ ವೈದ್ಯರು ಅವರ ಹೃದಯ ಮಹಾಪಧಮನಿಯ ಕವಾಟವನ್ನು ಬದಲಿಸಲು ಬೆಂಟಾಲ್ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರು. ಏಮ್ಸ್ ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ನಾವು ಆತನಿಗೆ 60 ದಿನಗಳ ಮಧ್ಯಾಂತರ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು ಎಂದು ಮತೀನ್ ವಿವರಿಸುತ್ತಾರೆ.

- Advertisement -


ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಆತ ಜೈಲಿನಲ್ಲಿ ಸಾಯಬಹುದು. ನಾವು ಆತನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಮಾತ್ರ ಕೇಳುತ್ತಿದ್ದೇವೆ, ವಾಲ್ವ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ದೇಹದಾದ್ಯಂತ ರಕ್ತ ಪಂಪ್ ಆಗದೆ ಆತ ಸಾವನ್ನಪ್ಪಬಹುದು ಎಂದು ಮತೀನ್ ಆತಂಕದಿಂದ ಹೇಳುತ್ತಾರೆ. ವಕೀಲರು ಆತನಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ, ಆದರೆ ಅದನ್ನು ಮಥುರಾ ನ್ಯಾಯಾಲಯ ತಿರಸ್ಕರಿಸಿದೆ ಎಂದು ಮತೀನ್ ತಿಳಿಸಿದ್ದಾರೆ.


“ಯುಎಪಿಎ ದಾಖಲಿಸ್ಪಟ್ಟ ಎಲ್ಲಾ ಆರೋಪಿಗಳು ಮುಸ್ಲಿಮರೇ ಆಗಿದ್ದಾರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ರಾಷ್ಟ್ರೀಯ ಲೋಕದಳದ ನಾಯಕ ಜಯಂತ್ ಚೌಧರಿಯಂತಹ ಇತರ ಜನರು ಕೂಡ ಹತ್ರಾಸ್ ಗೆ ಹೋಗಲಿಲ್ಲವೇ? ಏಕೆ ಕೇವಲ ಎಂಟು ಮುಸ್ಲಿಂ ಯುವಕರ ಮೇಲೆ ಮಾತ್ರ ಯುಎಪಿಎ ಜಡಿಯಲಾಗಿದೆ ? ಇವರು ಹತ್ರಾಸ್ ಗೆ ಇನ್ನೂ ತಲುಪಿರಲೇ ಇಲ್ಲ” ಎಂದು ಕಬ್ಬು ಕೃಷಿಕನಾಗಿರುವ ಮತೀನ್ ಹೇಳುತ್ತಾರೆ. ರಹ್ಮಾನ್ ಮತ್ತು ಕಾಪ್ಪನ್ ಹೊರತುಪಡಿಸಿ, ಮಸೂದ್ ಅಹ್ಮದ್, ಆಲಂ, ರವೂಫ್ ಷರೀಫ್, ಫಿರೋಝ್, ಅನ್ಸಾದ್ ಬದ್ರುದ್ದೀನ್ ಮತ್ತು ದ್ಯಾನಿಶ್ ಪ್ರಕರಣ ಇತರ ಆರೋಪಿಗಳಾಗಿದ್ದಾರೆ.


ರೆಹಮಾನ್ ಸಾಯಬಹುದು ಎಂಬ ಆತಂಕ ಕುಟುಂಬದಲ್ಲಿದೆ. “ಆತನ ಹೃದಯ ಯಾವಾಗ ಬೇಕಾದರೂ ವಿಫಲವಾಗಬಹುದು. ನಾವು ಅವನನ್ನು ಮಧ್ಯರಾತ್ರಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದೇವೆ, ಆತ ಎದುರಿಸುತ್ತಿರುವ ಅಪಾಯಗಳ ಬಗ್ಗೆ ನಮಗೆ ತಿಳಿದಿವೆ. ಈಗ ನಮ್ಮ ಆಶಯ ಹೈಕೋರ್ಟ್‌ ಮೇಲೆ ಮಾತ್ರ ಉಳಿದಿದೆ” ಎಂದು ರಹ್ಮಾನ್ ಚಿಕ್ಕಪ್ಪ ಸಖಾವತ್ ಹೇಳುತ್ತಾರೆ. ರೆಹಮಾನ್ ಪರ ವಕೀಲ ಸೈಫಾನ್, ಮಥುರಾದಲ್ಲಿ ವೈದ್ಯಕೀಯ ಸೌಲಭ್ಯಗಳು ಸಮರ್ಪಕವಾಗಿಲ್ಲ ಎಂದು ಹೇಳಿದರು.


“ಈ ಸ್ಥಿತಿಯ ಸಂಕೀರ್ಣ ಸ್ವರೂಪವನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅದರ ಹೊರತಾಗಿಯೂ, ಮತ್ತು ಅದನ್ನು ದಾಖಲಿಸಲಾಗಿದೆ, ಅವರು ಆತನನ್ನು ಮಥುರಾ ಮತ್ತು ಆಗ್ರಾದ ಆಸ್ಪತ್ರೆಗಳಿಗೆ ಅನೇಕ ಬಾರಿ ಕರೆದೊಯ್ದಿದ್ದಾರೆ. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ತುರ್ತಾಗಿ ಕೂಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ”ಎಂದು ಸೈಫಾನ್ ವಿವರಿಸುತ್ತಾರೆ. ರಹ್ಮಾನ್ ಅವರ ಪತ್ನಿ ಸಂಜೀದಾ ಬೇಗಂ ಅವರು ಸ್ವತಃ ಹೃದ್ರೋಗಿಯಾಗಿದ್ದಾರೆ, “ನಾನು ನನ್ನ ಪತಿಯ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ. ನಾವು ಆತನೊಂದಿಗೆ ಮಾತನಾಡುವಾಗ ಆತ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. 3 ಮತ್ತು 4 ವರ್ಷಗಳ ಮಕ್ಕಳಿದ್ದು, ತಂದೆ ಜೈಲಿನಲ್ಲಿದ್ದಾರೆ ಎಂದು ಇನ್ನೂ ಮಕ್ಕಳಿಗೆ ತಿಳಿಸಿಲ್ಲ ಎಂದು ಹೇಳಿದರು.

Join Whatsapp