ಕೆಸರೆರಚಾಟದ ಬದಲು ಆರೋಗ್ಯ, ಶಿಕ್ಷಣದ ಬಗ್ಗೆ ಚರ್ಚೆಯಾಗಲಿ: ಆಮ್ ಆದ್ಮಿ

Prasthutha|

ಬೆಂಗಳೂರು : ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪರಸ್ಪರ ಕೆಸರೆರಚಾಡಿಕೊಂಡು ಮತದಾರರ ಹಾದಿ ತಪ್ಪಿಸುವ ಬದಲು ಕ್ಷೇತ್ರದ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಹಾಗೂ ಜನರಿಗೆ ಊತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮೂರೂ ಪಕ್ಷಗಳು ಚರ್ಚೆ ನಡೆಸಲಿ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಟ್ವೀಟ್ ಮಾಡಿದ್ದಾರೆ.

- Advertisement -


ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಬರೆದಿರುವ ಜಗದೀಶ್ ವಿ.ಸದಂ, “ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಎರಡು ಕ್ಷೇತ್ರಗಳ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಡುತ್ತಿವೆ. ಪರಸ್ಪರ ಕೆಸರೆರಚಾಟ, ವೈಯಕ್ತಿಕ ನಿಂದನೆ, ಅಪಹಾಸ್ಯದಲ್ಲೇ ನಾಯಕರು ಕಾಲಕಳೆಯುತ್ತಿದ್ದಾರೆ. ಜಾತಿ, ಧರ್ಮಕ್ಕೆ ಸಂಬಂಧಿಸಿ ಜನರ ಭಾವನೆ ಕೆರಳಿಸುವುದೇ ಅವರ ಬಂಡವಾಳವಾಗಿದೆ. ಇದರ ಬದಲು ಜನರಿಗೆ ಉಪಯೋಗವಾಗುವಂತಹ ವಿಷಯಗಳ ಬಗ್ಗೆ ಚರ್ಚಿಸಿ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲಿ” ಎಂದು ಆಗ್ರಹ ಮಾಡಿದ್ದಾರೆ.


ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿವೆ. 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ಗಳು ಜನರಿಗೆ ಅತ್ಯಂತ ಸುಲಭ ಹಾಗೂ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿವೆ. ನಮ್ಮಲ್ಲೂ ಆ ಗುಣಮಟ್ಟದ ಸೌಲಭ್ಯಗಳನ್ನು ನೀಡುವ ಇಚ್ಛಾಶಕ್ತಿಯು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗಿಲ್ಲ. ಕನಿಷ್ಠಪಕ್ಷ, ಆ ಬಗ್ಗೆ ಚುನಾವಣೆ ಸಂದರ್ಭದಲ್ಲಾದರೂ ಮಾತನಾಡಲಿ ಎಂದು ಜಗದೀಶ್ ವಿ. ಸದಂ ಹೇಳಿದ್ದಾರೆ.

- Advertisement -

Join Whatsapp