ಸಕಲೇಶಪುರ ಬಳಿ ಭೂ ಕುಸಿತ: ಬೆಂಗಳೂರು-ಮಂಗಳೂರು ಹೆದ್ದಾರಿ ಬಂದ್

Prasthutha|

ಸಕಲೇಶಪುರ, ಜು.22: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲೂಕಿನ ದೋಣಿಗಲ್ ಎಂಬಲ್ಲಿ ಭೂ ಕುಸಿತವಾಗಿದ್ದು, ಬೆಂಗಳೂರನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

- Advertisement -


ಸಕಲೇಶಪುರದ ದೋಣಿಗಲ್ ನಲ್ಲಿ ರಸ್ತೆ ಕುಸಿದಿರುವ ಕಾರಣ ಮಂಗಳೂರಿಗೆ ಹೋಗುವ ಎಲ್ಲಾ ವಾಹನಗಳು ಬೇಲೂರು ಮೂಡಿಗೆರೆ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಸಂಚರಿಸಲು ಹಾಸನ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ಹಾಸನ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಮುಂದುವರಿದಿದೆ. ಹಾಸನ, ಸಕಲೇಶಪುರ, ಅರಕಲಗೂಡು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಭೂ ಕುಸಿತವಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.


ಈ ರಸ್ತೆಯ ಕೆಳಭಾಗದಲ್ಲಿ ಹೊಸ ರಸ್ತೆ ನಿರ್ಮಾಣವಾಗುತ್ತಿದ್ದು, ಇದರ ಕಾಮಗಾರಿಯಿಂದಾಗಿ ಭೂ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಘನ ವಾಹನಗಳಿಗೆ ಚಾರ್ಮಾಡಿ ಹಾಗೂ ಮಡಿಕೇರಿ ರಸ್ತೆಯಲ್ಲಿ ಹೋಗುವುದು ಕಷ್ಟವಾಗಿದ್ದು ಶಿರಾಡಿ ಘಾಟ್ ನ ರಸ್ತೆಯೂ ಬಿರುಕುಬಿಟ್ಟ ಪರಿಣಾಮ ಸರಕು ಸಾಗಣೆಗೆ ತೊಡಕುಂಟಾಗಿದೆ.

Join Whatsapp