ಲಕ್ಷದ್ವೀಪವನ್ನು ನರಕವನ್ನಾಗಿಸುವ ಫ್ಯಾಶಿಸ್ಟ್ ಹುನ್ನಾರ…

Prasthutha|

✍️ ಸಾರಾ ಅಲಿ, ಪರ್ಲಡ್ಕ, ಪುತ್ತೂರು

- Advertisement -

ಜಗತ್ತಿನಲ್ಲಿ ಅದೆಷ್ಟೋ  ಸುಂದರ ತಾಣಗಳಿವೆ. ಆದರೆ ಅಪರಾಧಗಳಿಂದ, ದೌರ್ಜನ್ಯ, ಹಿಂಸಾಚಾರ ಗಳಿಂದ ಮುಕ್ತವಾದ ನೆಮ್ಮದಿಯ ರಮಣೀಯ ತಾಣವೆಂದರೆ ಲಕ್ಷದ್ವೀಪ ಮಾತ್ರವಾಗಿದೆ ಅನ್ನುವುದರಲ್ಲಿ ಇನ್ನೊಂದು ಮಾತಿಲ್ಲ. ಭಾರತದ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ ಮಧ್ಯೆ ಇರುವ ದ್ವೀಪವಾಗಿದೆ ಈ ಲಕ್ಷದ್ವೀಪ. ಇದು ಕೇರಳದ ನೇರಕ್ಕೆ ಇದ್ದು ಕೇರಳದಿಂದ 400 ಕಿ.ಮೀ ಅಂತರದಲ್ಲಿದೆ. ಕೇರಳ ಹಾಗೂ ಲಕ್ಷದ್ವೀಪಗಳ ಮಧ್ಯೆ ಅವಿನಾಭಾವ ಸಂಬಂಧದ ನಂಟಿದೆ.  ಈ ದ್ವೀಪದಲ್ಲಿನ ಜನತೆಯಲ್ಲಿ 90% ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಿದ್ದಾರೆ. ಇಲ್ಲಿನ ಮಾತೃ ಭಾಷೆ ಮಲಯಾಳಂ ಆಗಿದೆ ಹಾಗೂ ಕೆಲವಷ್ಟು ನಾಗರೀಕರು ಮಾಹಿ ಭಾಷೆಯನ್ನೂ ಆಡುತ್ತಾರೆ. ಇಲ್ಲಿನ ಬುಡಕಟ್ಟು ಜನಾಂಗದ ಜನರು ಮೀನುಗಾರಿಕೆಯನ್ನು ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಇಲ್ಲಿ ಹೇರಳವಾಗಿ ತೆಂಗು ಫಸಲು ನೀಡುತ್ತಿದ್ದು, ಕೊಬ್ಬರಿ ಹಾಗೂ ಮೀನು ವ್ಯವಹಾರದಲ್ಲಿ ಕೇರಳ ಮತ್ತು ಲಕ್ಷದ್ವೀಪವು ಬಲವಾದ ನಂಟು ಹೊಂದಿದೆ. ದ್ವೀಪದ ವ್ಯಾಜ್ಯಗಳು ಕೇರಳದ ಉಚ್ಚನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ.  ಲಕ್ಷದ್ವೀಪದಲ್ಲಿನ ಜನರು ಅಲ್ಲಿನ ಪರಿಸರ ಬದುಕು ಹಾಗೂ ಮಣ್ಣಿನ ಗುಣಕ್ಕೆ ಅನುಗುಣವಾಗಿ ಕೃಷಿಯಾಭಿವೃದ್ಧಿ ಹೊಂದಲು ಸಾದ್ಯವಾಗಲಿಲ್ಲ. ಅದರಂತೆಯೇ ಅವರ ಆಹಾರಕ್ರಮದಲ್ಲಿ ಮಾಂಸಾಹಾರವನ್ನು ಅವಲಂಬಿಸಿಕೊಂಡಿರುವರು.

      ಲಕ್ಷದ್ವೀಪ ದಲ್ಲಿ ನಾಗರೀಕರು ಅದೆಷ್ಟು ಶಿಸ್ತುಪಾಲಿಸುತ್ತಿದ್ದಾರೆಂದರೆ ಅಲ್ಲಿ ಶತಮಾನಗಳಿಂದ ಮದ್ಯದ ಅಂಗಡಿಗಳೇ ಇರಲಿಲ್ಲ. ದುರಭ್ಯಾಸಗಳಿಂದ ದ್ವೀಪದ ಜನರು ಮುಕ್ತರಾಗಿದ್ದರು. ಅಷ್ಟು ಮಾತ್ರವಲ್ಲ, ಆರೋಪಗಳಿಂದಲೂ ಮುಕ್ತರಾಗಿದ್ದರು ಅನ್ನುವುದು ಪ್ರಪಂಚವೇ ಚಕಿತಗೊಳ್ಳುವಂತಹ ಸತ್ಯಸಂಗತಿ. ಇಡೀ ದ್ವೀಪದಲ್ಲಿ ಕಾರಾಗೃಹಗಳು ಕಾರ್ಯಗತವಾಗಿರಲಲ್ಲಿ. ಕೈದಿಗಳ ಸಂಖ್ಯೆ ಅಲ್ಲಿರಲಿಲ್ಲ. ಕೊಲೆ, ಹಿಂಸಾಚಾರಗಳು ಅಲ್ಲಿನಡೆಯುತ್ತಿರಲಿಲ್ಲ. ಅಬ್ಬಬ್ಬಾ ಅಂದರೆ ಅಲ್ಲಿ ಮೂರು ಕೊಲೆಗಳೇನೋ ನಡೆದಿರಬಹುದಷ್ಟೆ. ಪ್ರವಾಸಿತಾಣಕ್ಕೆ ಹೆಸರುವಾಸಿ ಆಗಿರುವ ಈ ಆಕರ್ಷಣೀಯ ದ್ವೀಪವು ಇತ್ತೀಚೆಗೆ ಆಡಳಿತದಲ್ಲಾದ ಹೊಸ ಬದಲಾವಣೆಯ ನೀತಿಯಂದಲೂ ಪ್ರಚಾರ ಪಡೆದಿದೆ. ಆದರೆ ಈ ಸುಂದರ ಲಕ್ಷದ್ವೀಪದ ಜನರ ಇತ್ತೀಚೆಗಿನ ಅಳಲಿಗೆ ಕಾರಣವೇನು ?

- Advertisement -

    ” ಲಕ್ಷದ್ವೀಪವನ್ನು ಉಳಿಸಿರಿ”  ಅಥವಾ ” ಲಕ್ಷದ್ವೀಪವನ್ನು ಸಂರಕ್ಷಿಸಿರಿ” ಎಂದು  ಬೀದಿಗಿಳಿದು ಮುಷ್ಕರ ಕೈಗೊಳ್ಳಲು ಕಾರಣವೇನು? ಅಲ್ಲಿನ ಜನತೆಗೆ ಒದಗಿ ಬಂದ ಸಂಕಷ್ಟವೇನು? ಲಕ್ಷದ್ವೀಪದ ಆಡಳಿತಾಧಿಕಾರಿ ಮರಣ ಹೊಂದಿದ ನಂತರ ಇನ್ನೊಬ್ಬ ಐಎಎಸ್ ಅಧಿಕಾರಿ ಒಬ್ಬ ನೇಮಕಗೊಳ್ಳಬೇಕಿತ್ತು. ಭಾರತದ ಭಾರತೀಯ ಜನತಾ ಪಕ್ಷವು ಅಧಿಕಾರ ಬಲದಿಂದ ನರೇಂದ್ರ ಮೋದಿಯ ಆಪ್ತನಾದ , ಐಎಎಸ್ ಅಲ್ಲದ ಗುಜರಾತ್ ನ ಮಾಜಿ ಸಚಿವ ಪ್ರಫುಲ್ ಪಟೇಲ್ ರನ್ನು ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ಭಾರತೀಯ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನೇಮಕಗೊಳಿಸಿದರು.

ಅಲ್ಲಿಂದಲೇ, ಲಕ್ಷದ್ವೀಪವು ಭಾರತದ ಮತ್ತೊಂದು ಕಾಶ್ಮೀರದ ರೂಪ ತಾಳಲಾರಂಬಿಸಿತು. ಈ ಪ್ರಫುಲ್ ಪಟೇಲ್ ಲಕ್ಷದ್ವೀಪದಲ್ಲಿ ಹೊಸ ನೀತಿ’ ನಿಯಮ ರೂಪಿಸಲು ಮುಂದಾಗಿದ್ದಾರೆ. ದಶಕಗಳಿಂದ ನಿಷೇಧದಲ್ಲಿದ್ದ 190 ಮದ್ಯದ ಅಂಗಡಿಗಳನ್ನು ತೆರೆಯಲು ಆಜ್ಞಾಪನೆ ನೀಡುತ್ತಾರೆ. ಜನತೆಯ ಆಧಾಯ ಮಾರ್ಗ ಮೀನುಗಾರಿಕೆಗೆ ಕಠಿಣ ಕಟ್ಟಳೆ ಹೇರಲಾಗುತ್ತದೆ. ಸಮುದ್ರ ಕಿನಾರೆಗಳಲ್ಲಿ ದೋಣಿ, ಹಡಗುಗಳ ಸಂರಕ್ಷಣೆಗಾಗಿ ಮೀನುಗಾರರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್ ಗಳನ್ನು ತೆರವುಗೊಳಿಸಲಾಗುತ್ತದೆ. ಹಲವಾರು ಶೆಡ್ ಗಳನ್ನು ಧ್ವಂಸಗೊಳಿಸಿದ್ದೂ ಆಯಿತು. ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಅಲ್ಲಿನ ಖಾಸಗಿ ಜಾಗಗಳನ್ನು ವಶಪಡಿಸಲಾಯಿತು. ಬುಡಕಟ್ಟು ಜನಾಂಗಕ್ಕೆ ಬಂದೊದಗಿದ ಅತಂತ್ರ ಪರಿಸ್ಥಿತಿಯು ತಮ್ಮ ತಾಯ್ನಾಡಲ್ಲೇ ಪರಕೀಯತೆಯನ್ನು ಎದುರಿಸಬೇಕಾದಂತಾಗಿದೆ.

       ಅದೇಷ್ಟೋ ಅಂಗನವಾಡಿಗಳನ್ನು ಮುಚ್ಚಿಸಲಾಯಿತು. ಶಾಲೆಗಳಲ್ಲಿ ರೂಢಿಯಲ್ಲಿದ್ದ ಮಾಂಸಾಹಾರ ಬಿಸಿಯೂಟವನ್ನು ನಿಷೇಧಿಸಿ, ಸಸ್ಯಾಹಾರವನ್ನು ಮಾತ್ರ ನೀಡಬೇಕೆಂದು ಸೂಚಿಸಲಾಯಿತು. ಗೋಮಾಂಸಕ್ಕೆ ಸಂಪೂರ್ಣ ನಿಷೇಧ ಹೇರಲಾಯಿತು. ಎರಡರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುವುದನ್ನು ಜಾರಿಗೊಳಿಸಿ, ಅತಂತ್ರ ನೀತಿಗೆ ಸೂಚಿಸಲಾಯಿತು.

      ಮೊದಲ ಅಲೆಯ ವೇಳೆ ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸಿದ್ದರೂ, ಲಕ್ಷದ್ವೀಪದಲ್ಲಿ ಒಂದೇ ಒಂದು ಸೋಂಕಿತ ಸಂಖ್ಯೆ ಕಂಡು ಬಂದಿರಲಿಲ್ಲ. ಆದರೆ ಈ ಹೊಸ ಆಡಳಿಧಿಕಾರಿಯು  ಯಾವುದೇ ರೀತಿ – ನಿಯಮಗಳನ್ನು  ನೀಡದೆ, ದ್ವೀಪ ಪ್ರವೇಶಕ್ಕೆ ಅವಕಾಶ ನೀಡಿರುವ ಪರಿಣಾಮದಿಂದ ಈಗ ಸೋಂಕಿತರ ಸಂಖ್ಯೆ 68% ಕ್ಕೆ ಏರಿದೆ.    

      ಪ್ರಫುಲ್ ಪಟೇಲ್ ಅಧಿಕಾರ ಬಿಟ್ಟು ಹಿಂದಕ್ಕೆ ತೆರಳಬೇಕಿದೆ, ಲಕ್ಷದ್ವೀಪವನ್ನು ಭಾರತದ ಎರಡನೇ ಕಾಶ್ಮೀರವಾಗುವುದನ್ನು ತಡೆಯುವ ಸಲುವಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆ ತಮ್ಮ ಧ್ವನಿ ಎತ್ತಬೇಕಿದೆ.

Join Whatsapp