ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ; ನದಿಗೆ ಹಾರಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Prasthutha|

ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣಕ್ಕೆ ಮನನೊಂದು ಕುಂದಾಪುರದಲ್ಲಿ ನದಿಗೆ ಹಾರಿದ್ದ ವಿದ್ಯಾರ್ಥಿಯ ಮೃತದೇಹ ಬೈಂದೂರು ತಾಲೂಕಿನ ನಾವುಂದದ ಸಮುದ್ರತೀರದಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

- Advertisement -

ಕುಂದಾಪುರದ ವಡೇರಹೋಬಳಿ ಜೆಎಲ್ಬಿ ರಸ್ತೆಯ ನಿವಾಸಿ ರಘುವೀರ್ ಶೆಟ್ಟಿ ಎನ್ನುವವರ ಪುತ್ರ ಸಾಯೀಶ್ ಶೆಟ್ಟಿ (18) ಮೃತಪಟ್ಟ ವಿದ್ಯಾರ್ಥಿ.

ಶಿವಮೊಗ್ಗದ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸದ ವೇಳೆ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ ಸಾಯೀಶ್ ಶೆಟ್ಟಿ, ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅವರು ನೀಟ್ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಬೆಳಗ್ಗೆ ಸೈಬರ್ ಕೇಂದ್ರಕ್ಕೆ ತೆರಳಿ ಫಲಿತಾಂಶ ನೋಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಗುರುವಾರ ಮಧ್ಯಾಹ್ನ 11.30ರ ವೇಳೆ ಸಂಗಮ್ ಸೇತುವೆಯ ಮೇಲಿನಿಂದ ಪಂಚಗಂಗಾವಳಿ ನದಿಗೆ ಹಾರಿರಬಹುದು ಎನ್ನುವ ಶಂಕೆ ಇದೆ.

- Advertisement -

ಸೇತುವೆ ಮೇಲಿಂದ ಯುವಕನೊರ್ವ ನದಿಗೆ ಹಾರುತ್ತಿರುವುದನ್ನು ಗಮನಿಸಿದ ವಾಹನ ಸವಾರರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಗವಿಸಿದ ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು, ಮುಳುಗು ತಜ್ಞರು ಶೋಧ ನಡೆಸಿದ್ದರೂ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಪತ್ತೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ಮತ್ತೆ ಮುಂದುವರೆಸಲಾಗಿತ್ತು. ಕೊನೆಗೂ ಬೈಂದೂರು ತಾಲೂಕಿನ ನಾವುಂದ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp