ಕೊಡಗು, ಮಂಡ್ಯದಲ್ಲಿ ಬಿಜೆಪಿ ನಾಯಕರಿಗೆ ಟಿಕೆಟ್: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿ

Prasthutha|

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕೊಡಗು ಹಾಗೂ ಮಂಡ್ಯದಲ್ಲಿ ಬಿಜೆಪಿ ನಾಯಕರಿಗೆ ಟಿಕೆಟ್ ಕೊಟ್ಟಿರುವುದನ್ನು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

- Advertisement -


ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ಸಿನ ಮಂಡ್ಯ, ಕೊಡಗು ಅಭ್ಯರ್ಥಿಗಳ ಬಗ್ಗೆ ಜನರಿಗೆ ಗೊತ್ತಾಗಿದೆ. ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಯಾರು ಕೊಡಿಸಿದರು ಎನ್ನುವುದನ್ನು ಸ್ವತಃ ಸಹಕಾರ ಸಚಿವರೇ ಹೇಳಿದ್ದಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷ ಬಿಜೆಪಿಯ ಯಾವ ಟೀಮು? ಸಿ ಟೀಮಾ? ಡಿ ಟೀಮಾ? ಎಂದು ಕೇಳಿದ್ದಾರೆ.

ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಟೀಕೆ ಮಾಡುತ್ತಿರುವವರಿಗೆ ತಿವಿದಿರುವ ಅವರು, “ನಮ್ಮನ್ನು ಬಿಜೆಪಿ ಬಿ ಟೀಮ್ ಎನ್ನುವವರೇ ಉತ್ತರಿಸಬೇಕು” ಎಂದಿದ್ದಾರೆ. ಜೆಡಿಎಸ್ ಎಲ್ಲೆಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲೆಲ್ಲಾ ಬಿಜೆಪಿಗೆ ಬೆಂಬಲ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದ್ದರು. ಈ ಬಗ್ಗೆ ನಾನು ಚಿಕ್ಕಬಳ್ಳಾಪುರದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಹೇಳಿದ್ದೇನೆ. ಆದರೆ, ಆ ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ.

- Advertisement -


ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ಎಲ್ಲೂ ನಾನು ಹೇಳಿಲ್ಲ. ಆದರೆ ಬೆಂಬಲ ಕೇಳಿದ ಯಡಿಯೂರಪ್ಪ ಅವರ ಬಗ್ಗೆ ರಾಜಕೀಯವನ್ನು ಹೊರತುಪಡಿಸಿ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ. ಅವರ ರಾಜಕೀಯ ಅನುಭವ, ಹಿರಿತನಕ್ಕೆ ಗೌರವ ಕೊಟ್ಟು ಮಾತನಾಡಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಕ್ಷಣ ಜೆಡಿಎಸ್ ಪಕ್ಷವೂ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದರ್ಥವಲ್ಲ. ಚಿಕ್ಕಬಳ್ಳಾಪುರದಲ್ಲಿ ನಾನು ಕೊಟ್ಟ ಹೇಳಿಕೆಯನ್ನು ಮತ್ತೊಮ್ಮೆ ಗಮನಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಆ ಕಾರಣಕ್ಕೆ ಅವರು ಜನರನ್ನು, ಮತದಾರರನ್ನು ದಿಕ್ಕು ತಪ್ಪಿಸುವ ಹಾಗೂ ಜೆಡಿಎಸ್ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರತೀ ಚುನಾವಣೆ ಬಂದಾಗ ಜೆಡಿಎಸ್ ಜ್ವರ ಶುರುವಾಗುತ್ತದೆ ಎಂದು ಕುಮಾರ ಸ್ವಾಮಿ ವ್ಯಂಗ್ಯವಾಡಿದ್ದಾರೆ.

Join Whatsapp