ಕೇರಳ: ಅಂತ್ಯಕ್ರಿಯೆ ನಡೆದ ಐದನೇ ದಿನ ಮನೆಗೆ ಮರಳಿದ ಸತ್ತ ವ್ಯಕ್ತಿ; ಪೊಲೀಸರಿಗೆ ತಲೆನೋವು!

Prasthutha|

- Advertisement -

ಪಟ್ಟಣಂತಿಟ್ಟ: ಕುಟುಂಬದ ಸದಸ್ಯರೆಲ್ಲರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದ ವ್ಯಕ್ತಿಯೊಬ್ಬರು ನಿನ್ನೆ ಸಂಜೆ ಮರಳಿ ಮನೆಗೆ ಬಂದಿರುವ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಮಂಜತೋಡು ಆದಿವಾಸಿ ಕಾಲನಿಯ 70 ವರ್ಷದ ರಮಣ್​​ ಬಾಬು​ ಮೃತರಾಗಿದ್ದಾರೆಂದು ದೇಹದ ಅಂತ್ಯಕ್ರಿಯೆ ಮಾಡಲಾಗಿತ್ತು. ಆದರೆ ಅದೇ ರಮಣ್ ಬಾಬು ಮನೆಗೆ ಮರಳಿದ್ದು, ಕುಟುಂಬಕ್ಕೆ ಅತೀವ ಸಂತೋಷ ತಂದಿದೆ. ಆದರೆ, ಪೊಲೀಸರ ಕೈ ತಲೆಮೇಲೆ ಹೋಗಿದ್ದು, ಕುಟುಂಬ ಅಂತ್ಯಕ್ರಿಯೆ ನೆರವೇರಿಸಿದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಅವರಲ್ಲಿ ಹುಟ್ಟಿಕೊಂಡಿದೆ. ಅದನ್ನು ಪತ್ತೆ ಹಚ್ಚುವ ಕೆಲಸ ಅವರರ ಮೇಲೆ ಬಿದ್ದಿದೆ.

- Advertisement -

ನಡೆದದ್ದೇನು?

ನೀಲಕ್ಕಲ್​ ಮತ್ತು ಇಲವುಂಗಲ್​ ನಡುವೆ ಇರುವ ಅನಂಥರ ಎಂಬಲ್ಲಿ ಡಿಸೆಂಬರ್​ 30ರಂದು ಬೆಳಗ್ಗೆ ಮೃತದೇಹವೊಂದು ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಮೃತದೇಹದ ಕಿವಿಯಿಂದ ರಕ್ತ ಬರುತ್ತಿದ್ದರಿಂದ ಕಾಡಾನೆ ದಾಳಿ ಮಾಡಿರಬಹುದು ಎಂದು ಮೊದಲಿಗೆ ಭಾವಿಸಲಾಗಿತ್ತು.

ನಿಲಕ್ಕಲ್ ಪೊಲೀಸರು ತನಿಖೆ ನಡೆಸಿದಾಗ ಅಚ್ಚನಕೋವಿಲ್ ದೇವಸ್ಥಾನಕ್ಕೆ ಹಬ್ಬಕ್ಕೆಂದು ತೆರಳಿದ್ದ ರಮಣ್​​ ಬಾಬು ಎಂಬವರು ಮನೆಗೆ ವಾಪಸ್ ಬಂದಿಲ್ಲ ಎಂದು ತಿಳಿದುಬಂದಿತ್ತು. ರಮಣ್ ಬಾಬು ಮನೆಯವರನ್ನು ಕರೆಸಲಾಗಿತ್ತು. ಪತ್ನಿ ಮತ್ತು ಮಕ್ಕಳು ಮೃತದೇಹವನ್ನು ನೋಡಿ ಇದು ರಮಣ್ ಬಾಬು ದೇಹ ಎಂದು ಗೋಳೋ ಎಂದು ಅತ್ತಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಮೃತದೇಹವನ್ನು ಕಳುಹಿಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತ್ತು. ಇದಾದ ನಂತರ ಕಾಲನಿ ಸಮೀಪದ ಅರಣ್ಯ ಪ್ರದೇಶದಲ್ಲಿ ರಮಣ್ ಬಾಬು ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದರು.

ಆದರೆ, ಶನಿವಾರ ಬೆಳಗ್ಗೆ 9.45ರ ಸುಮಾರಿಗೆ ಕೊನ್ನಿ-ಕೊಕತೋಡು ಅರಣ್ಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ನೋಡಿದ ಸಂಬಂಧಿಯೂ ಆಗಿರುವ ಅರಣ್ಯ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ. ಫೋಟೋ ತೆಗೆದು ರಮಣ್​ ಮಕ್ಕಳಿಗೆ ಕಳುಹಿಸಿದ್ದಾರೆ. ಅವರು ನೋಡಿದ ಬಳುಕ ಬಳಿಕ ಇದೇ ರಮಣ್​​ ಬಾಬು ಎಂದು ಖಚಿತವಾಗಿ ಕೂಡಲೇ ಆತನನ್ನು ನೀಲಕ್ಕಲ್​ ಪೊಲೀಸ್​ ಠಾಣೆಗೆ ಕರೆತರಲಾಗಿದೆ.

ಕಾಡಿನಲ್ಲಿ ಬಿದ್ದಿದ್ದ ಮೃತದೇಹವು ಸಹ ತನ್ನ ತಂದೆಯಂತೆಯೇ ಇದ್ದಿದ್ದರಿಂದ ಯಾರಿಗೂ ಸಂಶಯ ಬರಲೇ ಇಲ್ಲ ಎಂದು ಅವರ ಮಗ ಅಝಕನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದ ರಮಣ್​ ಬಾಬು ತನ್ನ ಹಿರಿಯ ಮಗ ಬೋಸ್ ಜೊತೆ ವಾಸಿಸುತ್ತಿದ್ದು, ಏಳು ಮಕ್ಕಳಿದ್ದಾರೆ. ಇಡೀ ಕುಟುಂಬ ರಮಣ್​ ನೋಡಿ ಸಂತಸಗೊಂಡಿದೆ. ಆದರೆ, ಅಂತ್ಯಕ್ರಿಯೆ ನಡೆದ ಮೃತದೇಹ ಯಾರದ್ದು ಎಂಬುದು ಪೊಲೀಸರಿಗೆ ಹೊಸ ತಲೆನೋವಾಗಿದೆ.

Join Whatsapp