ಮೈಸೂರು । ಗುರುಕುಲದಲ್ಲಿ ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ; ವ್ಯವಸ್ಥಾಪಕನ ಬಂಧನ

Prasthutha|

ಮೈಸೂರು: ಗುರುಕುಲದಲ್ಲಿ ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕನನ್ನು ಬಂಧಿಸಿರುವ ಘಟನೆ ಮೈಸೂರಿನಿಂದ ವರದಿಯಾಗಿದೆ.

- Advertisement -

ಬಂಧಿತ ವ್ಯವಸ್ಥಾಪಕನನ್ನು ಮೈಸೂರು ಜಿಲ್ಲೆಯ ಕೊಳ್ಳೇಗಾಲದ ಗಿರೀಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿವೆ.

ಸದ್ಯ ಈ ಗುರುಕುಲವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಂಯೋಜಿತವಾಗಿದ್ದು, ಸುಮಾರು 18 ಅಪ್ರಾಪ್ತ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಮತ್ತು ಆಹಾರವನ್ನು ಒದಗಿಸಲಾಗುತ್ತಿತ್ತು.

- Advertisement -

ಆರೋಪಿ ಗಿರೀಶ್ ಎಂಬಾತ ಮೈಸೂರು ಹೊರವಲಯದ ಇನ್ಫೋಸಿಸ್ ಬಳಿ ಇರುವ ಗುರುಕುಲದಲ್ಲಿ ವ್ಯವಸ್ಥಾಪಕನಾಗಿ ಸೇವೆ ಸಲ್ಲಿಸುತ್ತಿದ್ದ. ಹಲವು ವರ್ಷಗಳಿಂದ ಈ ಗುರುಕುಲ ಕಾರ್ಯಾಚರಣೆ ನಡೆಸುತ್ತಿದ್ದು, ಶಿಕ್ಷಣ ನೀಡಲು ಸಾಧ್ಯವಾಗದ ಬಡ ಹೆಣ್ಣು ಮಕ್ಕಳನ್ನು ಪೋಷಕರು ಇಲ್ಲಿ ಬಿಟ್ಟು ಹೋಗುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಹೊಸದಾಗಿ ಕರ್ತವ್ಯಕ್ಕೆ ಸೇರಿದ ಸಂಗೀತ ಶಿಕ್ಷಕಿಯೊಬ್ಬರು ವ್ಯವಸ್ಥಾಪಕನ ದುರ್ವರ್ತನೆಯಿಂದ ಸಂಶಯಗೊಂಡು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂಸ್ಥೆಯ ವ್ಯವಸ್ಥಾಪಕ ಎಲ್ಲಾ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯವೆಸಗಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸಂಗೀತ ಶಿಕ್ಷಕಿಯು ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗುರುಕುಲಕ್ಕೆ ಭೇಟಿ ನೀಡಿದ ಸಮಿತಿಯ ಸದಸ್ಯರು ಗಿರೀಶನ ಮೇಲಿನ ಆರೋಪ ಸತ್ಯವೆಂದು ಬಹಿರಂಗವಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಅಡಿಯಲ್ಲಿ ಪೊಲೀಸರು ಗಿರೀಶ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp