‘ಜನತಾ ಜಲಧಾರೆ ಗಂಗಾ ರಥಯಾತ್ರೆ ‘ ಪೂರ್ವಭಾವಿ ಸರಣಿ ಸಭೆ

Prasthutha|

ಬೆಂಗಳೂರು: ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜೆಡಿಎಸ್ ಕೈಗೊಳ್ಳಲಿರುವ ‘ಜನತಾ ಜಲಧಾರೆ ಗಂಗಾ ರಥಯಾತ್ರೆ ‘ ಯ ಪೂರ್ವಭಾವಿ ಸರಣಿ ಸಭೆಗಳನ್ನು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂದು ಕೂಡ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ  ಜಿಲ್ಲೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿದರು.

- Advertisement -

ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು ಹಾಗೂ ಹಿರಿಯ ಮುಖಂಡರ ಜತೆ ಮಾತುಕತೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಕೆಲ ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದರು.

ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿರುವ ಈ ನಾಲ್ಕು ಜಿಲ್ಲೆಗಳಲ್ಲಿ ಜಲಧಾರೆ ಕಾರ್ಯಕ್ರಮವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಅವರು ಮುಖಂಡರಿಗೆ ತಾಕೀತು ಮಾಡಿದರು.

- Advertisement -

ತಲಕಾವೇರಿ, ಹಾರಂಗಿ, ಚುಂಚನ ಕಟ್ಟೆ, ಲಕ್ಷ್ಮಣ ತೀರ್ಥ, ಕೃಷ್ಣರಾಜ ಸಾಗರ ಜಲಾಶಯ, ಶ್ರೀರಂಗಪಟ್ಟಣ ಸಂಗಮ, ಕೆ ಆರ್ ಪೇಟೆಯ ಮಂದಗೆರೆ, ಶಿವನಸಮುದ್ರ, ಗಗನಚುಕ್ಕಿ, ಕಬಿನಿ ಜಲಾಶಯ, ನುಗು ಜಲಾಶಯ, ಗುಂಡಾಲ್ ಜಲಾಶಯ, ತಲಕಾಡು, ಕಪಿಲಾ ನದಿನ್ನುಂತದ ಕಡೆಗಳಲ್ಲಿ ಪವಿತ್ರ ಜಲ ಸಂಗ್ರಹ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಜಲಧಾರೆ ಕಾರ್ಯಕ್ರಮವನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಮಾಡಬೇಕು. ಜಲ ಸಂಗ್ರಹದ, ಕಲಶ ಪೂಜೆ, ಮೆರವಣಿಗೆ, ಕಲಾ ತಂಡಗಳು, ಮಂಗಳ ವಾದ್ಯ ಇತ್ಯಾದಿಗಳ ರೂಪುರೇಷೆ ಹೇಗಿರಬೇಕು ಎನ್ನುವುದನ್ನು ಮುಖಂಡರಿಗೆ ಮನವರಿಕೆ ಅವರು ಮಾಡಿಕೊಟ್ಟರು.

ಕಾವೇರಿ, ಕಪಿಲಾ, ಕಬಿನಿ ಸೇರಿದಂತೆ ಈ ಭಾಗದ ಪವಿತ್ರ ನದಿ ಜಲವನ್ನು ರಾಜ್ಯದ ಅಭಿವೃದ್ಧಿಗೆ ಹೇಗೆ ಬಳಿಸಿಕೊಳ್ಳಬೇಕು. ಅದಕ್ಕೆ ನಮ್ಮ ಮುಂದಿರುವ ಸವಾಲುಗಳು ಏನು? ಅವುಗಳನ್ನು ಬಗೆಹರಿಸಿಕೊಂಡು ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದು ಹೇಗೆ? ಎಂಬ ಹಲವಾರು ಅಂಶಗಳನ್ನು ಜನರ ಮನಸ್ಸಿಗೆ ನಾಟುವಂತೆ ತಿಳಿಸಬೇಕು. ಮನೆ ಮನೆಗೂ ಮಾಹಿತಿ ಮುಟ್ಟುವಂತೆ ಪ್ರಚಾರ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಮುಖಂಡರಿಗೆ ಸೂಚನೆ ನೀಡಿದರು.

ಕಾವೇರಿ ಕೊಳ್ಳದಲ್ಲಿ ಹೆಚ್.ಡಿ.ದೇವೇಗೌಡರು 1962ರಿಂದ ನಡೆಸಿದ ಐತಿಹಾಸಿಕ ಹೋರಾಟ, ಕಾವೇರಿ ನೀರಿನ ಸದ್ಬಳಕೆ ಬಗ್ಗೆ ಅವರು ನಡೆಸಿದ ಸಂಘರ್ಷ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳ ಸಾಕಾರ, ತಾವು ರಾಜ್ಯದ ನೀರಾವರಿ ಸಚಿವರಾಗಿದ್ದ ವೇಳೆಯಲ್ಲೇ ಮೇಕೆದಾಟು ಯೋಜನೆ ಬಗ್ಗೆ ಕನಸು ಕಂಡು ಆ ಬಗ್ಗೆ ಹೆಜ್ಜೆ ಇರಿಸಿದ್ದು.. ಇವೆಲ್ಲ ಅಂಶಗಳನ್ನು ಜನರಿಗೆ ಮನ ಮುಟ್ಟುವಂತೆ ಹೇಳಬೇಕು ಎಂದು ಕುಮಾರಸ್ವಾಮಿ ಅವರು ಖಡಕ್ಕಾಗಿ ಹೇಳಿದರು.

ಸಭೆಯಲ್ಲಿ ಪಕ್ಷದ ಶಾಸಕರಾದ ಸಾ.ರಾ.ಮಹೇಶ್, ಡಾ.ಅನ್ನದಾನಿ, ಡಿ.ಸಿ.ತಮ್ಮಣ್ಣ, ಕೆ.ಎನ್.ತಿಪ್ಪೇಸ್ವಾಮಿ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಅಶ್ವಿನ್ ಕುಮಾರ್, ಮಂಡ್ಯ ಜಿಲ್ಲಾಧ್ಯಕ್ಷ ರಮೇಶ್ ಗೌಡ, ಕೊಡಗು ಜಿಲ್ಲಾಧ್ಯಕ್ಷ ಗಣೇಶ್, ಮೈಸೂರು ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮುಂತಾದ ಪ್ರಮುಖ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜತೆಗೆ, ಮಾಜಿ ಸಚಿವ ಬಂಡೆಪ್ಪ ಖಾಷೇಂಪೂರ್, ವಿಧಾನಸಭೆಯಲ್ಲಿನ ಪಕ್ಷದ ಸಚೇತಕ ವೆಂಕಟರಾವ್ ನಾಡಗೌಡ ಅವರು ಇದ್ದರು.

Join Whatsapp