ಕಾಂಗ್ರೆಸ್​ ಟಿಕೆಟ್ ವಂಚಿತ ಎಚ್​ಆರ್ ಶ್ರೀನಾಥ್ ಮನೆಗೆ ಭೇಟಿ ನೀಡಿದ ಜನಾರ್ಧನ ರೆಡ್ಡಿ

Prasthutha|

ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ನಿಂದ ವಂಚಿತರಾಗಿರುವ ಎಚ್​​ಆರ್ ಶ್ರೀನಾಥ್​ಗೆ ಜನಾರ್ಧನ ರೆಡ್ಡಿ ಗಾಳ ಹಾಕಿದ್ದಾರೆ. ಎಚ್​ಆರ್​ ಶ್ರೀನಾಥ್​ಗೆ ಟಿಕೆಟ್ ಕೈತಪ್ಪುತ್ತಿದ್ದಂತೆಯೇ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಬಸವರಾಜ ದಢೇಸೂಗೂರು ಅವರು ಮಧ್ಯಾಹ್ನ ಶ್ರೀನಾಥ್ ಅವರನ್ನು ಭೇಟಿಯಾದ ಬೆನ್ನಲ್ಲೇ ಜನಾರ್ಧನ ರೆಡ್ಡಿ ಕೂಡ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಶ್ರೀನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾಗ ಬೇರೆ ಯಾವ ಪಕ್ಷಗಳ ಯಾವ ನಾಯಕರೂ ಅವರನ್ನು ಭೇಟಿಯಾಗಿರಲಿಲ್ಲ, ಇದೀಗ ಟಿಕೆಟ್ ಕೈತಪ್ಪುತ್ತಿದ್ದಂತೆ ಬೇರೆ ಪಕ್ಷಗಳಿಂದ ಓಲೈಕೆ ಶುರುವಾಗಿದೆ. ರಾತ್ರೋರಾತ್ರಿ ಜನಾರ್ಧನ ರೆಡ್ಡಿ ಶ್ರೀನಾಥ್ ಮನೆಗೆ ಭೇಟಿ ನೀಡಿದ್ದಾರೆ. ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಘೋಷಣೆ ಹಿನ್ನೆಲೆ ಶ್ರೀನಾಥ್​ಗೆ ಟಿಕೆಟ್ ತಪ್ಪಿದೆ.

ಶ್ರೀನಾಥ್ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಶ್ರೀನಾಥ್ ಜಿಲ್ಲೆಯಲ್ಲಿ ಕಾಂಗ್ರೆಸ್​ನ ಯಾವ ಅಭ್ಯರ್ಥಿ ಪರವೂ ಪ್ರಚಾರ ಮಾಡುವುದಿಲ್ಲ, ಹೊರ ಜಿಲ್ಲೆಗಳಲ್ಲಿ ಅಲ್ಲಿನ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತೇನೆ ಎಂದಿದ್ದಾರೆ. ಗಂಗಾವತಿಯಲ್ಲಿ ಟಿಕೆಟ್​ಗಾಗಿ ಇಕ್ಬಾಲ್​ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ ಹಾಗೂ ಎಚ್​ಆರ್ ಶ್ರೀನಾಥ್ ನಡುವೆ ಸ್ಪರ್ಧೆ ಇತ್ತು. ಪಕ್ಷ ಅನ್ಸಾರಿ ಅವರಿಗೆ ಟಿಕೆಟ್ ನೀಡಿದೆ.

Join Whatsapp