ಜನ ಕೊರೊನಾ ಸಂಕಷ್ಟದಲ್ಲಿರುವಾಗ ಬಿಜೆಪಿಗೆ ನಾಯಕತ್ವದ ಚಿಂತೆ: ಈಶ್ವರ ಖಂಡ್ರೆ ಟೀಕೆ

Prasthutha|

ಬೆಂಗಳೂರು, ರೋಮ್ ಹೊತ್ತಿ ಉರಿಯುತ್ತಿದ್ದಾಗ, ದೊರೆ ನೀರೋ ಪಿಟೀಲು ನುಡಿಸುತ್ತಿದ್ದನಂತೆ, ಅದೇ ರೀತಿ, ರಾಜ್ಯದ ಜನತೆ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ನಿಂದ ನಲುಗುತ್ತಿರುವಾಗ ರಾಜ್ಯ ಸರ್ಕಾರ ಜನರ ಸಂಕಷ್ಟ ಪರಿಹರಿಸುವುದನ್ನು ಬಿಟ್ಟು, ನಾಯಕತ್ವ ಬದಲಾವಣೆಯ ಕಸರತ್ತಿನಲ್ಲಿ ನಿರತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ.

- Advertisement -


ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದೆ, ಆದರೆ ರೈತರಿಗೆ ಸೂಕ್ತ ಪ್ರಮಾಣದಲ್ಲಿ ಬಿತ್ತನೆ ಬೀಜ ದೊರಕುತ್ತಿಲ್ಲ, ಕೊರೊನಾ ಸಂಕಷ್ಟದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲ, ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾಗಿರುವವರಿಗೆ ಇನ್ನೂ ಔಷಧ ಸಿಗುತ್ತಿಲ್ಲ ಇಂತಹ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಲ್ಲಬೇಕಾದ ಸರ್ಕಾರದ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದರೆ, ಶಾಸಕರು, ಮಂತ್ರಿಗಳು ನಾಯಕತ್ವ ಬದಲಾವಣೆಗೆ ಹರ ಸಾಹಸ ಮಾಡುತ್ತಿದ್ದಾರೆ ಇದರಲ್ಲಿ ಏನಾದರೂ ಅರ್ಥ ಇದೆಯೇ ಎಂದು ಪ್ರಶ್ನಿಸಿದರು.


ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗಿ ಜನ ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾಗ, ಹಾಸಿಗೆ ದೊರಕದೆ ಹಾದಿ ಬೀದಿಯಲ್ಲಿ ಸಾಯುತ್ತಿದ್ದಾಗ ಸರ್ಕಾರ ಹೇಗೆ ಕೆಲಸ ಮಾಡಬೇಕು ಎಂದು ಹೇಳಲು ದೆಹಲಿಯಿಂದ ಯಾರೂ ಬರಲಿಲ್ಲ. ಈಗ ನಿತ್ಯ ಹತ್ತಾರು ಸಾವಿರ ಹೊಸ ಪ್ರಕರಣ ಬರುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ವಹಿಸುವ ಬದಲು, ಬಡವರ, ಕಡುಬಡವರ ಸಂಕಷ್ಟ ಆಲಿಸುವ ಬದಲು, ನಾಯಕತ್ವ ಬದಲು ಮಾಡಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿರುವುದು ಅಸಹ್ಯದ ಪರಮಾವಧಿ, ಸರ್ಕಾರ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ಈ ಕಪಟ ನಾಟಕ ಆಡುತ್ತಿದೆ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಮರಣ ಶಾಸನವಾದ ಬೆಳೆ ವಿಮೆ ಯೋಜನೆ: ಕೇಂದ್ರ ಸರ್ಕಾರ ತಾನು ರೂಪಿಸಿರುವ ಫಸಲು ವಿಮಾ ಯೋಜನೆ ಒಂದು ಕ್ರಾಂತಿಕಾರಿ ಎಂದು ಕೊಚ್ಚಿಕೊಳ್ಳುತ್ತದೆ. ಆದರೆ, ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ 10 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟ ಸಂಭವಿಸಿದೆ. ಆದರೆ ರೈತರಿಗೆ ಇನ್ನೂ ಪರಿಹಾರವೇ ಸಿಕ್ಕಿಲ್ಲ. ಪ್ರವಾಹದಿಂದ ರೈತರಿಗೆ ನಷ್ಟವಾದಾಗ, ಮಿಡ್ ಸೀಸನ್ ಅಡ್ವರ್ಸಿಟಿ ಅನುಬಂಧವನ್ನು ಜಾರಿ ಮಾಡಿದ್ದರೆ (ಇನ್ವೋಕ್), ಎಲ್ಲ ರೈತರಿಗೂ ಶೇ.25ರಷ್ಟು ಪರಿಹಾರ ಸಿಗುತ್ತಿತ್ತು. ಆದರೆ ಸರ್ಕಾರ ರೈತರಿಗೆ ನೆರವಾಗುವ ಬದಲು, ವಿಮಾ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಈ ಅವಕಾಶವನ್ನು ಕೈಚೆಲ್ಲಿದೆ ಎಂದು ದೂರಿದರು. ಈ ವಿಮೆ ಯೋಜನೆ ರೈತರಿಗೆ ಮರಣ ಶಾಸನ ಬರೆಯುತ್ತಿದೆ ಎಂದು ಕಿಡಿ ಕಾರಿದರು.
ಕೂಡಲೇ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೆ ರೈತರು ಪಾವತಿಸಿದ ಕಂತು, ಸರ್ಕಾರದ ಸಬ್ಸಿಡಿ ಸೇರಿ ಒಟ್ಟು ಎಷ್ಟು ಹಣವನ್ನು ಯಾವ ಯಾವ ವರ್ಷ ಎಷ್ಟೆಷ್ಟು ಪಾವತಿ ಮಾಡಿದೆ. ಅದಕ್ಕೆ ಪ್ರತಿಯಾಗಿ ವಿಮಾ ಕಂಪನಿಗಳು ನೀಡಿರುವ ಪರಿಹಾರದ ಮೊತ್ತ ಎಷ್ಟು ಎಂದು ಶ್ವೇತ ಪತ್ರ ಹೊರಡಿಸಿದರೆ. ಆಗ ಇದರಿಂದ ರೈತರಿಗೆ ಪ್ರಯೋಜನ ಆಗಿದಿಯೋ ಇಲ್ಲ ವಿಮಾ ಕಂಪನಿಗಳು ಶ್ರೀಮಂತವಾಗಿದೆಯೋ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

- Advertisement -


ಬಿತ್ತನೆ ಬೀಜ ಪೂರೈಕೆಗೆ ಆಗ್ರಹ: ರಾಜ್ಯದಲ್ಲಿ ಬಿತ್ತನೆ ಬೀಜ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸೋಯಾಬೀನ್ ಬೆಳೆಗಾರರಿಗೆ ಬಿತ್ತನೆ ಬೀಜವೇ ಸಿಗುತ್ತಿಲ್ಲ. ಬೀದರ್ ಜಿಲ್ಲೆಯೊಂದರಲ್ಲಿ ಈ ಬಾರಿ ಸುಮಾರು 1.80 ಹೆಕ್ಟೆರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದರೂ, ಸರ್ಕಾರ ಸಮರ್ಪಕವಾಗಿ ಬೀಜ ಪೂರೈಕೆ ಮಾಡುತ್ತಿಲ್ಲ. ಬಿತ್ತನೆ ಬೀಜಕ್ಕೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ದುಬಾರಿ ದರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರಕ್ಕೆ ಇದನ್ನು ತಡೆಯುವ ಶಕ್ತಿಯೂ ಇಲ್ಲದಂತಾಗಿದೆ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.
ವಿದ್ಯುತ ದರ ಏರಿಕೆ ಅವೈಜ್ಞಾನಿಕ: ಸರ್ಕಾರ ಕೊರೊನಾ ಸಂಕಷ್ಟದ ಸಮಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಅನ್ಯಾಯದ ಪರಮಾವಧಿ. ಈ ದರ ಏರಿಕೆ ಅತ್ಯಂತ ಅವೈಜ್ಞಾನಿಕವಾಗಿದೆ. ದೆಹಲಿಯಲ್ಲಿ ಆಪ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತದೆ. ಇಲ್ಲಿ ವಿದ್ಯುತ್ ಶಾಕ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳಾದ ಸೌರವಿದ್ಯುತ್, ಪವನ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದ್ದು, ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವ ಅಗತ್ಯವೇ ಇಲ್ಲ. ಆದರೂ ಹಳೆಯ ಒಪ್ಪಂದಗಳು ಇನ್ನೂ ಚಾಲ್ತಿಯಲ್ಲಿದ್ದು, ಅವುಗಳನ್ನು ರದ್ದು ಮಾಡದ ಕಾರಣ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಆಗುತ್ತಿದೆ. ಆ ನಷ್ಟ ಭರ್ತಿಗೆ ಜನರ ಮೇಲೆ ದರ ಏರಿಕೆಯ ಬರೆ ಹಾಕಲಾಗುತ್ತಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

Join Whatsapp