ಆರ್ ಎಸ್ ಎಸ್ ನವರು ಮೂಲ ಭಾರತೀಯರೇ?: ಸಿದ್ದರಾಮಯ್ಯ ಪ್ರಶ್ನೆ

Prasthutha|

ಬೆಂಗಳೂರು: ಆರೆಸ್ಸೆಸ್ ನ ಮೂಲ ಯಾವುದು? ಆರ್ ಎಸ್ ಎಸ್ ನವರು ಮೂಲ ಭಾರತೀಯರೇ? ಆರ್ಯರು ಭಾರತದವರೇ? ಇವರು ಆಫ್ಘಾನಿಸ್ತಾನದ ಮೂಲದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ಮೂಲವನ್ನು ಕೆದಕಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿ.ಪ್ರಧಾನಿ ಜವಾಹರ ಲಾಲ್ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಡಿತ್ ಜವಾಹರ್ ಲಾಲ್ ನೆಹರು ಅವರನ್ನು ಗೌರವಿಸಿ, ಸ್ವತಂತ್ರ ಹೋರಾಟದಲ್ಲಿ ಅವರ ಕೊಡುಗೆ, ನಂತರ ದೇಶದ ಪ್ರಧಾನಮಂತ್ರಿಯಾಗಿ 17 ವರ್ಷಗಳ ಕಾಲ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದನ್ನು ಸ್ಮರಿಸಬೇಕು. ದೇಶ, ವಿಜ್ಞಾನ-ತಂತ್ರಜ್ಞಾನ ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದರೆ, ದೇಶಕ್ಕೆ ಆಹಾರ ಭದ್ರತೆ ಸಿಕ್ಕಿದ್ದರೆ, ಪ್ರಭುತ್ವ ಗಟ್ಟಿಯಾಗಿ ನೆಲೆಯೂರಿದ್ದರೆ ಅದಕ್ಕೆ ನೆಹರು ಅವರೇ ಕಾರಣ ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬ್ರಿಟಿಷರು ಭಾರತ ಬಿಟ್ಟು ಹೊರಟಾಗ ಇಲ್ಲಿ ಏನಿತ್ತು? ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ತಂತ್ರಜ್ಞಾನ, ವಿಜ್ಞಾನ ಸೇರಿ ಪ್ರತಿ ಕ್ಷೇತ್ರವನ್ನೂ ಸೊನ್ನೆಯಿಂದ ಆರಂಭಿಸಿ ಹೊಸದಾಗಿ ನಿರ್ಮಿಸಿದರು. ಆಗ ದೇಶದ ಸಾಕ್ಷರತಾ ಪ್ರಮಾಣ ಶೇ 15-18 ಇತ್ತು. ಇಂದು ಸಾಕ್ಷರತಾ ಪ್ರಮಾಣ ಶೇ 75-80 ನ್ನು ತಲುಪಲು ಅಂದು ನೆಹರೂ ಅವರು ಹಾಕಿಕೊಟ್ಟ ಅಡಿಪಾಯಗಳೇ ಮುಖ್ಯ ಕಾರಣ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಇದಕ್ಕೆಲ್ಲಾ ತದ್ವಿರುದ್ಧ. ಇವರು ಪ್ರಧಾನಿ ಆದ ಬಳಿಕ ಒಂದೇ ಒಂದು ಸಂಸ್ಥೆಯನ್ನೂ ಕಟ್ಟಿ ಬೆಳೆಸಿಲ್ಲ. ನೆಹರೂ ಅವರು ಕಟ್ಟಿದ ತಾಂತ್ರಿಕ-ವೈಜ್ಞಾನಿಕ-ಶೈಕ್ಷಣಿಕ ಸಂಸ್ಥೆಗಳ ಹೆಸರನ್ನು ಹಾಳು ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ಸಂವಿಧಾನ ಬದ್ದವಾದ ಸಂಸ್ಥೆಗಳ ಕುತ್ತಿಗೆ ಹಿಚುಕಿ ಎಲ್ಲವನ್ನೂ ಸರ್ಕಾರದ ಕೈಗೊಂಬೆ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

- Advertisement -

ನೆಹರೂ ಅವರು ದೇಶವನ್ನು ಮುನ್ನಡೆಸಲು ಬೇಕಾದ ಅರ್ಹತೆ ದೂರದೃಷ್ಟಿ ಹೊಂದಿದ್ದರು. ಇಂದು ದೇಶದಲ್ಲಿರುವ ವಿಶ್ವ ದರ್ಜೆಯ ವಿಜ್ಞಾನ, ಸಂಶೋಧನಾ ಸಂಸ್ಥೆಗಳು ನೆಹರೂ ಅವರ ಸಾಧನೆ. ಪಂಚವಾರ್ಷಿಕ ಯೋಜನೆಗಳು ನೆಹರೂ ಅವರ ಕೊಡುಗೆ. ಆದರೆ ಈಗಿನ ಪ್ರಧಾನಿ ನೆಹರೂ ಅವರಿಗೆ ದೇಶವನ್ನು ಮುನ್ನಡೆಸುವುದು ಗೊತ್ತಿಲ್ಲ. ಐದು ಸಾವಿರ ವರ್ಷಗಳಷ್ಟು ಹಿಂದಕ್ಕೆ ದೇಶವನ್ನು ಎಳೆದೊಯ್ಯುವ ಅಪಾಯಕಾರಿ ಬೆಳವಣಿಗೆಗಳು ಈಗ ನಡೆಯುತ್ತಿವೆ ಎಂದು ಹೇಳಿದರು.

ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್ ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್ ಸಿಂಗ್ ಗಿಂತ ದೇಶಭಕ್ತ ಬೇಕಾ? ಇದನ್ನು ಯಾರಾದರೂ ಪ್ರಶ್ನಿಸಿದರೆ ದೇಶ ಬಿಟ್ಟು ಹೋಗಿ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಯಾರು ದೇಶ ಬಿಟ್ಟು ಹೋಗಬೇಕಾದವರು? ಆರ್ಎಸ್ಎಸ್ ಈ ದೇಶದ್ದಾ ? ಅವರೇನು ದ್ರಾವಿಡರಾ ? ದ್ರಾವಿಡರು ಈ ದೇಶದವರು. ಇದನ್ನೆಲ್ಲಾ ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ ? ಅದಕ್ಕೆ ಚರಿತ್ರೆಯನ್ನು ಕೆದಕಲು ಹೋಗಬಾರದು. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು” ಎಂದು ಹೇಳಿದ್ದರು. ಆರ್ ಎಸ್ ಎಸ್ ನವರಿಗೆ ನಿಜವಾದ ಚರಿತ್ರೆ ಮತ್ತು ಇತಿಹಾಸದ ಬಗ್ಗೆ ಬಹಳ ಭಯ ಇದೆ. ನಿಜವಾದ ಚರಿತ್ರೆ ದೇಶದ ದುಡಿಯುವ ವರ್ಗಗಳು, ಶ್ರಮಿಕರು ಮತ್ತು ದ್ರವೀಡರು ಅರಿತುಕೊಂಡರೆ ಏನಾಗಬಹುದು ಎನ್ನುವುದು ಅವರಿಗೆ ಗೊತ್ತಿದೆ. ಈ ಕಾರಣಕ್ಕೇ ಇತಿಹಾಸವನ್ನು ತಿರುಚುತ್ತಾರೆ. ಪಠ್ಯ ಪುಸ್ತಕಗಳ ಸಮಿತಿಗೆ ಚಕ್ರತೀರ್ಥನಂತವರನ್ನು ಹಾಕುವುದೇ ಈ ಉದ್ದೇಶಗಳಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆಹರೂ ಅವರು ಪ್ರಧಾನಿ ಆದ ಮೇಲೂ ವಿರೋಧ ಪಕ್ಷಗಳಿಗೆ ಮನ್ನಣೆ ನೀಡುತ್ತಿದ್ದರು. ವಿರೋಧ ಪಕ್ಷದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಪ್ರಧಾನಿ ನೆಹರೂ ಅವರು ಪಾರ್ಲಿಮೆಂಟ್ಗೆ ಗೈರು ಹಾಜರಾಗುತ್ತಿರಲಿಲ್ಲ. ಸದನದಲ್ಲೇ ಕುಳಿತು ವಿರೋಧ ಪಕ್ಷದವರ ಮಾತು ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ ಎದೆಗಾರಿಕೆ ಇತ್ತು. ಈ ಎದೆಗಾರಿಕೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಏಕಿಲ್ಲ ಎಂದು ಪ್ರಶ್ನಿಸಿದರು.
ದೇಶದ ನಿರುದ್ಯೋಗ, ಕೃಷಿ, ಆರ್ಥಿಕತೆ ಪ್ರತಿಯೊಂದನ್ನೂ ಸಮೀಕ್ಷೆ ನಡೆಸಿ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲ ಆಗುವಂತಹ ಸಂಸ್ಥೆಗಳನ್ನು ನೆಹರೂ ಮತ್ತು ನಂತರದವರು ರೂಪಿಸಿದ್ದರು. ಆದರೆ ಮೋದಿ ಅವರು ಎಲ್ಲಾ ಸಂಸ್ಥೆಗಳ ಕುತ್ತಿಗೆ ಹಿಚುಕುತ್ತಿದ್ದಾರೆ. ಸಮೀಕ್ಷೆಗಳೇ ನಡೆಯದಂತೆ, ಖಾಸಗಿ ಸಂಸ್ಥೆಗಳು ನಡೆಸುವ ಸಮೀಕ್ಷೆಗಳೂ ಬಹಿರಂಗಗೊಳ್ಳದAತೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ ನೆಹರೂ ಅವರ ಆಲೋಚನೆಯಾಗಿತ್ತು. ಕಂದಾಚಾರ-ಮೌಡ್ಯಕ್ಕೆ ದೇಶದ ಯುವ ಸಮೂಹವನ್ನು ಬಲಿ ಕೊಡದೆ ಅವರನ್ನು ವೈಜ್ಞಾನಿಕ ಮಾರ್ಗದಲ್ಲಿ ಶಿಕ್ಷಿತರನ್ನಾಗಿ ಮಾಡುವ ಮೂಲಕ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಬೇಕು ಎನ್ನುವುದನ್ನು ನೆಹರೂ ಅವರು ಸಾಧಿಸಿ ತೋರಿಸಿದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಜ್ಞಾನಿಕ ಮನೋಧರ್ಮ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಹೀಗಾಗಿ ಈ ದೇಶದ ಯುವ ಸಮೂಹ ಮತ್ತು ವಿದ್ಯಾರ್ಥಿ ಸಮೂಹಕ್ಕೆ ಅಗತ್ಯವಾದ ಶಿಕ್ಷಣ, ಉದ್ಯೋಗ, ಪ್ರಗತಿ ಇದ್ಯಾವುದರ ಬಗ್ಗೆಯೂ ಅವರು ಮಾತನಾಡುವುದಿಲ್ಲ. ಈ ಕ್ಷೇತ್ರಗಳಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅವರು ಧರ್ಮ ಮತ್ತು ಜಾತಿ ಸಂಘರ್ಷಗಳ ಬಗ್ಗೆಯೇ ಮಾತನಾಡುತ್ತಾ ದೇಶದ ದಾರಿ ತಪ್ಪಿಸುತ್ತಾರೆ. ಈ ಸತ್ಯವನ್ನು ದೇಶದ ಯುವಕರು, ಪ್ರಜೆಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮತ್ತು ನಿಮ್ಮ ಮಕ್ಕಳು ಐದು ಸಾವಿರ ವರ್ಷದ ಹಿಂದಕ್ಕೆ ಜಾರಬೇಕೋ, ಅಭಿವೃದ್ಧಿ ಪಥದಲ್ಲಿ ವಿಶ್ವ ಸಮುದಾಯದೊಂದಿಗೆ ಮುನ್ನಡೆಯಬೇಕೋ ಎನ್ನುವುದನ್ನು ಯುವಕರು ನಿರ್ಧರಿಸಬೇಕು ಎಂದರು.

Join Whatsapp