ಹರಿದ್ವಾರ ಧರ್ಮ ಸಂಸದ್ ನ ದ್ವೇಷ ಪ್ರಚೋದಕರನ್ನು ತಕ್ಷಣ ಬಂಧಿಸಿ: ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ನವದೆಹಲಿ: ಹರಿದ್ವಾರದಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಹಿಂದುತ್ವವಾದಿಗಳು ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ ಮತ್ತು ದ್ವೇಷ ಭಾಷಣ ಮಾಡಿದ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ತೀವ್ರವಾಗಿ ಖಂಡಿಸಿದ್ದು, ಹಿಂಸೆಗೆ ಕರೆ ನೀಡಿದ ಎಲ್ಲಾ ಭಾಷಣಕಾರರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ” ಉತ್ತರಾಖಂಡದ ಹರಿದ್ವಾರದಲ್ಲಿ ಡಿಸೆಂಬರ್ 17ರಿಂದ 19ರ ವರೆಗೆ ಆಯೋಜಿಸಲಾದ ‘ ಧರ್ಮ ಸಂಸದ್’ನಿಂದ ಹೊರಬರುತ್ತಿರುವ ವರದಿಗಳು ಭಾರತದಂತಹ ಪ್ರಜಾಪ್ರಭುತ್ವ, ಬಹುತ್ವ ಸಮಾಜಕ್ಕೆ ಅತ್ಯಂತ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಮುಸ್ಲಿಮ್ ಮುಕ್ತ ಭಾರತ ನಿರ್ಮಾಣಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ಜನರನ್ನು ಪ್ರಚೋದಿಸುವುದು ಈ ಕಾರ್ಯಕ್ರಮದ ಏಕೈಕ ಉದ್ದೇಶವಾಗಿದೆ. ಹಿಂದುತ್ವ ಸಂಘಟನೆಗಳ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಭಾಷಣಕಾರರು ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆಗೈಯ್ಯಲು ಬಹಿರಂಗವಾಗಿ ಕರೆ ನೀಡಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸರು ಮೌನವಹಿಸಿರುವುದು ಅವರು ಇದರಲ್ಲಿ ಸಹಭಾಗಿತ್ವ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ತಿಳಿಸಿದರು.

ಮಾತ್ರವಲ್ಲ ಇದು ಮುಸ್ಲಿಮ್ ಸಮುದಾಯಕ್ಕೆ ತೀವ್ರ ಕಳವಳದ ವಿಷಯವಾಗಿದೆ. ಇಂತಹ ಘಟನೆಗಳು ಸಮುದಾಯದ ಅತ್ಯಂತ ದುರ್ಬಲರ ವಿರುದ್ಧ ದ್ವೇಷದ ಅಪರಾಧಗಳನ್ನು ಪ್ರಚೋದಿಸುತ್ತದೆ. ದೇಶದ ಪ್ರಜಾಸತ್ತಾತ್ಮಕ ಸಮಾಜ ಈ ಘಟನೆಯನ್ನು ತೀವ್ರವಾಗಿ ಖಂಡಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

- Advertisement -

ಹಿಂದುತ್ವವಾದಿಗಳು ಜಗತ್ತಿನಾದ್ಯಂತ ಹಿಂದೂ ಧರ್ಮಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಇಂತಹ ನರಹಂತಕ ಶಕ್ತಿಗಳ ವಿರುದ್ಧ ಮತ್ತು ಅವರ ಕೃತ್ಯವನ್ನು ಖಂಡಿಸಿ ಹಿಂದೂ ಸಮಾಜದಿಂದ ಪ್ರಬಲ ಧ್ವನಿ ಕೇಳದಿರುವುದು ದುಃಖಕರ ವಿಷಯವಾಗಿದೆ. ನೈಜ ಹಿಂದೂಗಳು ಮತ್ತು ಆಧ್ಯಾತ್ಮಿಕ ನಾಯಕರು, ಇಂತಹ ಸಂದರ್ಭದಲ್ಲಿ ದೊಡ್ಡ ಧ್ವನಿಯಲ್ಲಿ, ನಮ್ಮ ಸಮಾಜದ ಇತರ ಧರ್ಮದವರನ್ನು ನಿರ್ಮೂಲನೆ ಮಾಡಲು ಕರೆ ನೀಡುತ್ತಿರುವ ಇಂತಹ ದುಷ್ಟ ಜನರು ಮತ್ತು ಗುಂಪುಗಳಿಗೆ ನಮ್ಮ ಧರ್ಮದಲ್ಲಿ ಅವಕಾಶವಿಲ್ಲ ಎಂದು ಹೇಳಲು ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿದರು.

ಈ ಪ್ರಕರಣದ ಹಿಂದಿರುವ ಸಂಚನ್ನು ಬಯಲಿಗೆಳೆಯಲು ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಮತ್ತು ದ್ವೇಷ ಭಾಷಣಗೈದವರನ್ನು ತಕ್ಷಣ ಬಂಧಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮ್ಯಾನ್ ಒ.ಎಂ.ಎ. ಸಲಾಮ್ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp