ಸುಪ್ರಿಂ ಕೋರ್ಟ್ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇನೆ, ಅಲ್ಲಿ ಪರಿಹಾರ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ: ಕಪಿಲ್ ಸಿಬಲ್

Prasthutha|

►50 ವರ್ಷಗಳ ವಕೀಲಿ ವೃತ್ತಿ ಪೂರ್ಣಗೊಳಿಸಿದ ನಂತರ ಈ ಹೇಳಿಕೆ ನೀಡುತ್ತಿದ್ದೇನೆ ಎಂದ ಹಿರಿಯ ವಕೀಲ

- Advertisement -

ಹೊಸದಿಲ್ಲಿ: ಸುಪ್ರಿಂ ಕೋರ್ಟ್ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ಹೇಳಿಕೆಯ ಬೆನ್ನಲ್ಲೇ ಅವರ ಹೇಳಿಕೆ ಪರ ಮತ್ತು ವಿರೋಧ ಕೂಡ ವ್ಯಕ್ತವಾಗಿದೆ.

- Advertisement -

ಸುಪ್ರೀಂಕೋರ್ಟ್ ನಲ್ಲಿ 50 ವರ್ಷಗಳ ವಕೀಲಿ ವೃತ್ತಿ ಪೂರ್ಣಗೊಳಿಸಿದ ನಂತರ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಸುಪ್ರೀಂಕೋರ್ಟ್ ನಿಂದ ನಿಮಗೆ ಪರಿಹಾರ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

 ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು ಬಂದರೂ ಅದು ನೆಲದ ವಾಸ್ತವತೆಗೆ ಹತ್ತಿರವಾಗಿರುವುದಿಲ್ಲ. ನೆಲದಮಟ್ಟದಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸುಪ್ರೀಂಕೋರ್ಟ್ ಗೌಪ್ಯತೆಯ ಬಗ್ಗೆ ತೀರ್ಪು ನೀಡಿತು. ಆದರೆ ಇಡಿ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ. ಅಲ್ಲಿಗೆ ನಿಮ್ಮ ಗೌಪ್ಯತೆ ಏನಾಯಿತು? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

 ಧರ್ಮ ಸಂಸದ್ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಲಿಸಿತು, ಸರ್ಕಾರಗಳಿಂದ ಈ ಕುರಿತು ಪ್ರತಿಕ್ರಿಯೆಯನ್ನು ಕೇಳಿತು. ಆರೋಪಿಗಳು ಇನ್ನೂ ಹೊರಗಿದ್ದಾರೆ, ಅವರನ್ನು ಬಂಧಿಸಿದರೂ 1-2 ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ನಂತರ ಮತ್ತೆ ಧರ್ಮ ಸಂಸದ್ ಸಭೆಗಳನ್ನು ಮುಂದುವರಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ನ್ಯಾಯಾಂಗದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ವಿರುದ್ಧ ತೀರ್ಪು ಬಂದಾಗ, ಆ ವ್ಯಕ್ತಿಯು ನ್ಯಾಯಾಧೀಶರು ಪಕ್ಷಪಾತಿ ಅಥವಾ ನ್ಯಾಯಾಂಗ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಧೀಶರನ್ನು ನಿಂದಿಸುವುದು ಅವಹೇಳನಕಾರಿಯಾಗಿದೆ. ಅದರಲ್ಲೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷರೂ ಆಗಿದ್ದ ಕಪಿಲ್ ಸಿಬಲ್ ಅವರು ಈ ರೀತಿಯಲ್ಲಿ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಸಂಘಟನೆಯ ಅಧ್ಯಕ್ಷರಾದ ಡಾ ಆದಿಶ್ ಸಿ ಅಗರ್ವಾಲ್ ಟೀಕಿಸಿದ್ದಾರೆ.

 ಕಪಿಲ್ ಸಿಬಲ್ ಒಬ್ಬ ಅನುಭವಿ ಹಿರಿಯ ವಕೀಲರಾಗಿ ಅವರು ಹಾಗೂ ಅವರ ಕೆಲವು ಸಂಗಡಿಗರು ಮಂಡಿಸಿದ್ದ ವಾದವನ್ನು ನ್ಯಾಯಾಂಗ ಒಪ್ಪಿಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಧೀಶರು ಮತ್ತು ತೀರ್ಪುಗಳನ್ನು ನಿರಾಕರಿಸುವುದು ಅವರಿಗೆ ಯೋಗ್ಯವಲ್ಲ ಎಂದು ಅಖಿಲ ಭಾರತ ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

Join Whatsapp