ಬೌದ್ದ ಧರ್ಮ ಸ್ವೀಕರಿಸಿದ ನೂರಾರು ದಲಿತರು
Prasthutha: December 6, 2021
ಕರಾಳ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇವೆ ಎಂದು ಪ್ರತಿಜ್ಞೆ

ವಿಜಯಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ನೂರಾರು ಕಾರ್ಯಕರ್ತರು ಇಂದು ಬೌದ್ದ ಧರ್ಮವನ್ನು ಸ್ವೀಕರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ‘ಸಾರಿಪುತ್ರ ಬೌದ್ದ ವಿಹಾರ’ದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಬೋಧಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ, ‘ನಾನು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ದೇವರೆಂದು ನಂಬುವುದಿಲ್ಲ ಮತ್ತು ಆಚರಿಸುವುದಿಲ್ಲ. ನಾನು ರಾಮ, ಕೃಷ್ಣರನ್ನು ದೇವರೆಂದು ನಂಬುವುದಿಲ್ಲ ಮತ್ತು ಅವರನ್ನು ಪೂಜಿಸುವುದಿಲ್ಲ. ಗೌರಿ, ಗಣಪತಿ ಇತ್ಯಾದಿ ಹಿಂದೂ ಧರ್ಮದ ಯಾವುದೇ ದೇವ, ದೇವತೆಗಳನ್ನು ನಂಬುವುದಿಲ್ಲ ಮತ್ತು ಪೂಜಿಸುವುದಿಲ್ಲ. ನಾನು ದೇವರ ಅವತಾರಗಳಲ್ಲಿ ವಿಶ್ವಾಸ ಇಡುವುದಿಲ್ಲ. ಭಗವಾನ್ ಬುದ್ದರನ್ನು ವಿಷ್ಣುವಿನ ಅವತಾರ ಎನ್ನುವುದನ್ನು ನಂಬುವುದಿಲ್ಲ. ನಾನು ಇಂತಹ ಪ್ರಚಾರವನ್ನು ಮೂರ್ಖತನದ ಮತ್ತು ಅಪಪ್ರಚಾರವೆಂದು ತಿಳಿಯುತ್ತೇನೆ. ನಾನು ಎಂದು ಶ್ರದ್ದಾ ಮಾಡುವುದಿಲ್ಲ, ಪಿಂಡದಾನ ನೀಡುವುದಿಲ್ಲ. ಬೌದ್ದ ಧರ್ಮದ ವಿರುದ್ದವಾದ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಯಾವುದೇ ಕ್ರಿಯಾ ಸಂಸ್ಕಾರಗಳನ್ನು ಬ್ರಾಹ್ಮಣರಿಂದ ಮಾಡಿಸುವುದಿಲ್ಲ. ನಾವೆಲ್ಲ ಕರಾಳ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇವೆ ಎಂದು ಪ್ರತಿಜ್ಞೆ ಮಾಡಿದರು.
ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, ನಾವೆಲ್ಲರೂ ಯಾವುದೇ ಒತ್ತಡ, ಆಸೆ, ಆಮಿಷಕ್ಕೆ ಒಳಗಾಗದೇ ಸ್ವ ಇಚ್ಛೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಸ್ವೀಕರಿಸಿದ್ದೇವೆ‘ ಎಂದರು.
