ಹರ್ಯಾಣದಲ್ಲಿ ಹಿಂದುತ್ವ ಸಂಘಟನೆಯ ಸದಸ್ಯರಿಂದ ಮುಸ್ಲಿಮ್ ಜಿಮ್ ತರಬೇತುದಾರನ ಗುಂಪು ಹತ್ಯೆ !

Prasthutha|

►ಕೆಳ ಸಮುದಾಯದ ಯುವಕರ ವಿರುದ್ಧದ ಗುಜ್ಜರರ ದೌರ್ಜನ್ಯವನ್ನು ಪ್ರಶ್ನಿಸಿದ್ದೇ ತಪ್ಪು?
►ಆಸಿಫ್ ನನ್ನು ಅಪಹರಿಸಿ ಕ್ರೂರವಾಗಿ ಹತ್ಯೆ !

- Advertisement -

ಗುಜ್ಜಾರ್ ಸಮುದಾಯಕ್ಕೆ ಸೇರಿದ ದುಷ್ಕರ್ಮಿಗಳ ತಂಡವೊಂದು 28 ವರ್ಷ ಪ್ರಾಯದ ಮುಸ್ಲಿಂ ಯುವಕನೊಬ್ಬನನ್ನು ಗುಂಪು ಹತ್ಯೆ ನಡೆಸಿರುವ ದಾರುಣ ಘಟನೆ ಹರ್ಯಾಣದ ಮೆವುತ್ ಎಂಬಲ್ಲಿ ನಡೆದಿದೆ. ಜಿಮ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಆಸಿಫ್ ಖಾನ್ ಹತ್ಯೆಗೀಡಾದವರು. ಅವರನ್ನು ದುಷ್ಕರ್ಮಿಗಳ ತಂಡವೊಂದು ಖಲೀಲ್ ಪುರ ಗ್ರಾಮದಿಂದ ಅಪಹರಿಸಿ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದೆ. ಆಸಿಫ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಹತ್ಯೆ ಪ್ರಕರಣದ ತನಿಖೆಗಾಗಿ ಮೇವತ್ ಪೊಲೀಸರು ವಿಶೇಷ ತನಿಖಾ ತಂಡ-ಎಸ್ಐಟಿಯನ್ನು ರಚಿಸಿದ್ದಾರೆ. ಆಸಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು  ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. “ನಾವು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಎಸ್ಐಟಿ (ವಿಶೇಷ ತನಿಖಾ ತಂಡ) ರಚಿಸಿದ್ದೇವೆ. ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜಾರ್ನಿಯಾ ಮಾಹಿತಿ ನೀಡಿದ್ದಾರೆ.

- Advertisement -

ಆಸಿಫ್ ನ ಸೋದರ ಮಾವ ಮುಹಮ್ಮದ್ ಇಶಾ ಘಟನೆಯ ಬಗ್ಗೆ ವಿವರಿಸಿದ್ದು, ಆಸಿಫ್ ಮತ್ತು ಅವನ ಇಬ್ಬರು ಸೋದರಸಂಬಂಧಿಗಳಾದ ರಾಶಿದ್ (31) ಮತ್ತು ವಾಸಿಫ್ ( 22) ಎಂಬವರು ಸಾಹ್ರೋದಲ್ಲಿ ವೈದ್ಯರನ್ನು ಭೇಟಿ ಮಾಡಿ ಸ್ಯಾಂಟ್ರೊ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಕನಿಷ್ಠ 20 ಮಂದಿಯ ತಂಡ ಎರಡು ವಾಹನಗಳಲ್ಲಿ ಅವರನ್ನು ಬೆನ್ನಟ್ಟಿದೆ. ಕಾರಿನಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆಸಿಫ್ ನನ್ನು ಅವರ ವಾಹನದಲ್ಲಿ ಗುಜ್ಜಾರ್ ಬಾಹುಳ್ಯವಿರುವ ಪ್ರದೇಶಕ್ಕೆ ಎಳೆದೊಯ್ದರು ಎಂದು ಇಶಾ ತಿಳಿಸಿದ್ದಾರೆ.

ಸೋಮವಾರ ಮುಸ್ಲಿಂ ಸಮುದಾಯದ 100ಕ್ಕೂ ಅಧಿಕ ಮಂದಿ ನುಹ್ನ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಆದರೆ, ಅವರ ಮನವಿ ಸ್ವೀಕರಿಸುವ ಬದಲು ಪೊಲೀಸರು, ಲಾಠಿಚಾರ್ಜ್ ಮಾಡಿ ಅವರನ್ನು ಚದುರಿಸಿದ್ದಾರೆ. ಮಾತ್ರವಲ್ಲ 15 ರಿಂದ 20 ಮಂದಿ ಪ್ರತಿಭಟನಾಕಾರರನ್ನೇ ವಶಕ್ಕೆ ಪಡೆದಿದ್ದಾರೆ ಎಂದು ಇಸಾ ಆರೋಪಿಸಿದ್ದಾರೆ.

“ನಮ್ಮ ಏಕೈಕ ಬೇಡಿಕೆಯೆಂದರೆ ನಮಗೆ ನ್ಯಾಯ ಬೇಕು ” ಎಂದು ಆಸಿಫ್ ಸಹೋದರ ಮುಹ್ಸಿಮ್ ಹೇಳುತ್ತಾರೆ.  “ನಾವು ಒಬ್ಬ ಸಹೋದರನನ್ನು ಕಳೆದುಕೊಂಡಿದ್ದೇವೆ. ಆದರೆ ನ್ಯಾಯ ಒದಗಿಸಿಕೊಡಬೇಕಾದ ಪೊಲೀಸರು ನಮ್ಮೊಂದಿಗೆ  ಕ್ರೂರವಾಗಿ ವರ್ತಿಸುತ್ತಿದ್ದಾರೆ. ನನ್ನ ಸಹೋದರನನ್ನು ಕೊಲೆ ಮಾಡಿದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಮುಹ್ಸಿನ್ ಆಗ್ರಹಿಸಿದ್ದಾರೆ.

ಆಸಿಫ್ ಹತ್ಯೆಯ ಪಿತೂರಿಯ ಹಿಂದಿನ ಪ್ರಮುಖ ಅಪರಾಧಿಗಳು ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ. ಪೊಲೀಸರು ಅವರನ್ನೂ ಬಂಧಿಸಬೇಕು ಎಂದು ಮುಹ್ಸಿನ್ ಒತ್ತಾಯಿಸಿದರು. ಆದಾಗ್ಯೂ, ಎಸ್.ಪಿ, ನರೇಂದ್ರ ಬಿಜಾರ್ನಿಯಾ “ಅವರು ಪ್ರತಿಭಟನೆ ನಡೆಸಿಲ್ಲ, ಅವರು ಪೊಲೀಸ್ ಮತ್ತು ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಅದಕ್ಕಾಗಿಯೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಆಸಿಫ್  ಮೇಲೆ ಹಲ್ಲೆ ನಡೆಸಿದವರ ಪರಿಚಯ ರಶೀದ್ ಗೆ ಇದೆ. ಅವರಲ್ಲಿ ಹೆಚ್ಚಿನವರು ಖಲೀಲ್ಪುರಕ್ಕೆ ಸೇರಿದವರು.   ಕೆಲವರು ಹೊರಗಿನವರೂ ಇದ್ದರು. ಸಂದೀಪ್, ಕಾಲೂ, ಅಡ್ವನೈ, ಪಟ್ವಾರಿ, ರಿಷಿ, ಕುಲದೀಪ್, ಸೋನು, ಭೀಮ್ ಮಹಿಂದರ್ ಮತ್ತು ಅನೂ  ಎಂಬವರು ಹಲ್ಲೆ ನಡೆಸಿದವರ ಗುಂಪಿನಲ್ಲಿದ್ದರು ಎಂದು ರಶೀದ್ ಹೇಳುತ್ತಾರೆ. ಈ ದಾಳಿ ಧರ್ಮ ದ್ವೇಷದಿಂದ ನಡೆದಿದೆ ಎಂದು ಕುಟುಂಬ ಆರೋಪಿಸಿದೆ. ಆಸಿಫ್ ಅವರು ಜಿಮ್ ನಡೆಸುತ್ತಿದ್ದಾರೆ. ಇದು ಗುಜ್ಜಾರ್ ಯುವಕರಿಗೆ ಸಹಿಸಲು ಆಗಲಿಲ್ಲ. ಆಸಿಫ್ ಸ್ಥಳೀಯವಾಗಿ ಪ್ರಾಬಲ್ಯ ಹೊಂದುತ್ತಿರುವುದನ್ನೂ ಅವರಿಗೆ ಸಹಿಸಲು ಆಗಲಿಲ್ಲ. ಅವರು ಅವನ ಬಗ್ಗೆ ಅಸೂಯೆ ಹೊಂದಿದ್ದರು. ಆದ್ದರಿಂದ ಆತನನ್ನು ಕೊಲೆ ಮಾಡಿದ್ದಾರೆ ಎಂದು ಇಸಾ ಆರೋಪಿಸಿದ್ದಾರೆ.

 “ಬೇರೆ ಸಮುದಾಯದ ಯಾರಾದರೂ ಅವರಿಗಿಂತ ಜೋರಾಗಿ ಮಾತನಾಡುವುದು ಗುಜ್ಜರ್ ನವರಿಗೆ ಇಷ್ಟವಾಗುವುದಿಲ್ಲ. ಆಸಿಫ್  ಗ್ರಾಮದಲ್ಲಿ ಎಲ್ಲರೂ ಸಮಾನರು ಎಂದು ಅವರು ನಂಬಿದ್ದರು. ಗುಜ್ಜರರು, ಇತರ ಸಮುದಾಯಗಳ ಸದಸ್ಯರಾದ ಚಮರ್ (ಕೆಳಜಾತಿಯ ಸಮುದಾಯದವರು) ಫಕೀರ್ ಮತ್ತು ಮಿಯಾನ್ ಅವರಿಗೆ ಕಿರುಕುಳ ನೀಡುತ್ತಿದ್ದುದನ್ನು ಆಸಿಫ್ ಆಗಾಗ್ಗೆ ಪ್ರಶ್ನಿಸುತ್ತಿದ್ದರು. ಮುಸ್ಲಿಮರಾದ ಆಸಿಫ್ ಅವರನ್ನು ಎದುರಿಸುತ್ತಿದ್ದಾರೆ ಎಂದು ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಸಿಫ್ ಗೆ ಅವರು ಆಗಾಗ ಬೆದರಿಕೆಯನ್ನೂ ಹಾಕುತ್ತಿದ್ದರು ಎಂದು ಇಸಾ ತಿಳಿಸಿದ್ದಾರೆ. ಆಸಿಫ್  ಪ್ರಾಮಾಣಿಕ ಮತ್ತು ಶುದ್ಧ ಚಾರಿತ್ರ್ಯ ಹೊಂದಿದ್ದ. ಅವನು ಎಷ್ಟು ಒಳ್ಳೆಯ ವ್ಯಕ್ತಿಯಾಗಿದ್ದ ಎಂದು ನೀವು ಪ್ರದೇಶದ ಯಾರನ್ನೂ ಬೇಕಾದರೂ ಕೇಳಿನೋಡಿ ಎಂದು ಇಸಾ ಹೇಳುತ್ತಾರೆ.

https://twitter.com/imMAK02/status/1394234546720100352
Join Whatsapp