ಉತ್ತರಾಖಂಡದಂತೆಯೇ ಹಿಮಾಚಲ ಪ್ರದೇಶದಲ್ಲೂ ಭೂ ಕುಸಿತದ ಭೀತಿ

Prasthutha|

ಶಿಮ್ಲಾ: ಉತ್ತರಾಖಂಡದಂತೆಯೇ ಹಿಮಾಚಲ ಪ್ರದೇಶವೂ ಸಹ ಭೂ ಕುಸಿತದ ಭೀತಿಗೆ ಸಿಲುಕಿದೆ.

- Advertisement -


ಹಿಮಾಚಲ ಪ್ರದೇಶದ ಮಂಡಿಯ ಶಲಾನಲ್ ಗ್ರಾಮದಲ್ಲಿ ನಾಲ್ಕು ದಾರಿಯ ಹೆದ್ದಾರಿಗಾಗಿ ಬೆಟ್ಟವನ್ನು ಕತ್ತರಿಸುತ್ತಿರುವುದರಿಂದ ಹತ್ತಿರದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದಾಗಿ ಹಳ್ಳಿಗರು ಹೇಳಿದ್ದಾರೆ.
ಇಡೀ ಊರೇ ಹಾಳಾಗುವ ಭೀತಿಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಬೆಟ್ಟದ ರಾಜ್ಯಗಳಲ್ಲಿ ತೀವ್ರ ಅಭಿವೃದ್ಧಿಯ ನಿರ್ಮಾಣಗಳು ಆಗುತ್ತಿದ್ದು ಪ್ರಕೃತಿ ಮತ್ತು ಮಾನವಾಭಿವೃದ್ಧಿಯ ನಡುವಣ ಸಮತೋಲನ ತಪ್ಪಿದೆ. ಜೋಶಿಮಠದ ಗತಿ ಹಿಮಾಚಲ ಪ್ರದೇಶದಲ್ಲೂ ಕಾದಿದೆ. ಈ ಕೊರೆಯುವ ಚಳಿಯಲ್ಲಿ ಮಂಡಿಯ ಮೂರು ಗ್ರಾಮಗಳ ಜನರು ಮನೆ ಬಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಂಡಿಯ ದರಾಂಗ್ ವಿಧಾನ ಸಭಾ ಕ್ಷೇತ್ರದ ಬಾಲಿಚೌಕಿ, ಬಟ್ವಾಡಿ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ.


ಮನಾಲಿ ಚಂಡೀಗಡ ರಸ್ತೆಯನ್ನು ಚತುಷ್ಪಥ ಮಾಡುತ್ತಿರುವುದೇ ಸಮಸ್ಯೆಗೆ ಮೂಲ ಎನ್ನಲಾಗಿದೆ.
ಕಿನೌರ್ ಮತ್ತು ಲಾಹೌಲ್ ಸ್ಪಿತಿ ಜಿಲ್ಲೆಗಳ 30% ಪ್ರದೇಶಗಳು ಮೋಡ ಸಿಡಿತ ಇಲ್ಲವೇ ಮೇಘ ಸ್ಫೋಟದ ಅಪಾಯದಲ್ಲಿವೆ ಎಂದು ಮೊನ್ನೆ ತಾನೆ ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದರು. ಈಗ ಜೋಶಿಮಠ ಮಾದರಿಯ ಬಿರುಕುಗಳ ವರದಿಗಳು ಬರುತ್ತಿವೆ.
ಉತ್ತರಾಖಂಡದ ತೆಹ್ರಿ ಗರ್ಹ್ವಾಲ್ ಪ್ರದೇಶದಲ್ಲಿ ಬಿರುಕು, ಭೂಕುಸಿತ ಈಗಾಗಲೇ ಕಾಣಿಸಿಕೊಂಡಿದೆ. ತೆಹ್ರಿ ಸರೋವರದ ಪಕ್ಕದ ಗ್ರಾಮಗಳಲ್ಲಿ ಭೂಕುಸಿತ ನಡೆದಿದೆ. ಚಂಬಾ ಸುರಂಗದ ಮೇಲು ಭಾಗದ ಮನೆಗಳಲ್ಲಿ ಬಿರುಕು ಕಾಣಿಸಿದ್ದು ಹಲವು ಮನೆಗಳವರು ಮನೆ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ.

- Advertisement -


ಎಲ್ಲ ಹವಾಮಾನ ಯೋಜನೆಯಡಿ ಚಂಬಾದಲ್ಲಿ 440 ಮೀಟರ್ ಉದ್ದದ ಸುರಂಗ ಕೊರೆಯಲಾಗಿದೆ. ಅಲ್ಲಿ ಸುತ್ತಮುತ್ತ ಮನೆಗಳ ಗೋಡೆ ಒಡೆಯತೊಡಗಿದೆ.
“ಸುರಂಗ ಮೂರ್ನಾಲ್ಕು ಮೀಟರ್ ತೊಡಿದ್ದಾಗಲೇ ನಮ್ಮ ಮನೆಗಳು ಅಪಾಯದತ್ತ ಸಾಗಿದ್ದವು. ಆಗಿನಿಂದ ಗಟಾರ ವ್ಯವಸ್ಥೆ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾವು ನಮ್ಮ ಮನೆ ಮತ್ತು ಬಾತ್ ರೂಂ ರಿಪೇರಿ ಮಾಡಿಸಿದೆವು. ಅದರಲ್ಲೂ ಈಗ ಬಿರುಕು ಕಾಣಿಸಿಕೊಂಡಿದೆ” ಎಂದು ಚಂಬಾ ಬಳಿಯ ಮನೆಯೊಂದರ ಯಜಮಾನ ದಿನೇಶ್ ಪ್ರಸಾದ್ ಕೋಟಿಯಾಲ್ ಹೇಳಿದರು.
ಆಲಿಗಡದ ಕನ್ವರಿಗಂಜ್ ಪ್ರದೇಶದ ಹಲವು ಮನೆಗಳಲ್ಲಿ ದಿಢೀರನೆ ಬಿರುಕು ಕಾಣಿಸಿಕೊಂಡು ಜನರನ್ನು ಭೀತಿಯಲ್ಲಿ ಮುಳುಗಿಸಿದೆ.

Join Whatsapp