ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ಪ್ರಕಟನಾ ಸಭೆ

Prasthutha|

ಉಳ್ಳಾಲ: ಹಿಜಾಜ್ ಸಂಬಂಧ ಕರ್ನಾಟಕ ಹೈ ಕೋರ್ಟ್ ನೀಡಿದ ತೀರ್ಪು ನಿರಾಶಾದಾಯಕವಾಗಿದೆ. ಪವಿತ್ರ ಕುರ್ ಆನ್ ಸ್ಪಷ್ಟವಾಗಿ ನೀಡಿದ ನಿರ್ದೇಶನವನ್ನು ಹೈಕೋರ್ಟ್, ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂದು ತೀರ್ಪು ನೀಡುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಉಳ್ಳಾಲದ ಅಲ್ ಮಿಅ್ ರಾಜ್ ಜುಮಾ ಮಸೀದಿ ಮತ್ತು ಮಅದನುಲ್ ಉಲೂಮ್ ಅರಬಿಕ್ ಮದ್ರಸ ಸಮಿತಿ ತಿಳಿಸಿದೆ.

- Advertisement -

ಉಳ್ಳಾಲದ ಮಾರ್ಗತ್ತಲೆಯಲ್ಲಿ ಜಮಾಅತ್ ಅಧ್ಯಕ್ಷ ಆಲಿಯಬ್ಬ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ತೀರ್ಪಿಗೆ ತೀವ್ರ ಬೇಸರ ವ್ಯಕ್ತಪಡಿಸಲಾಯಿತು.

ಜಗತ್ತಿನಲ್ಲೇ ಭಾರತವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಮುಸ್ಲಿಮರ ವಿರುದ್ಧ ನ್ಯಾಯಾಂಗದ ತೀರ್ಪು ಮತ್ತು ಸರಕಾರದ ಪ್ರತಿಯೊಂದು ನಿಲುವು ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಬಾಬರಿ ಮಸ್ಜಿದ್, ತ್ರಿವಳಿ ತಲಾಖ್, ಮುಸ್ಲಿಮರ ಆಹಾರ ಕ್ರಮದ ಮೇಲೆ ದಾಳಿ, ಮುಸ್ಲಿಮರ ವ್ಯವಹಾರ, ಮುಸ್ಲಿಮರ ಧಾರ್ಮಿಕ ನಂಬಿಕೆ, ಆಚಾರ, ಸಂಸ್ಕೃತಿಯ ಮೇಲೆ ದಾಳಿ ಮೊದಲಾದವುಗಳ ಮುಂದುವರಿಕೆಯ ಭಾಗವಾಗಿ ಈ ಹಿಜಾಬ್ ವಿವಾದ ಸೇರ್ಪಡೆ ಗೊಂಡಿದೆ.

- Advertisement -

ಕೋಮು, ಜಾತಿ, ವಿಷ ಬೀಜ ಬಿತ್ತಿ ಜನರನ್ನು ಧರ್ಮಾಧಾರಿತ ಮತ್ತು ಜಾತಿ ಆಧಾರಿತವಾಗಿ ವಿಭಜಿಸುವ ಮನುವಾದ ಸಿದ್ಧಾಂತ ಮೂಲಕ ಭಾರತವನ್ನು ಒಡೆದು ಆಳುವ ಬ್ರಿಟಿಷ್ ಪ್ರಯೋಗವನ್ನು ಬಿಜೆಪಿ ಭಾರತದಾದ್ಯಂತ ಪ್ರಯೋಗಿಸುತ್ತಿದೆ. ಬೆಲೆ ಏರಿಕೆ, ಆರ್ಥಿಕ ಕುಸಿತ,  ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ, ಆಹಾರ ಆರೋಗ್ಯದ ಅಭದ್ರತೆ, ಸರಕಾರಿ ಸ್ವತ್ತುಗಳ ಮಾರಾಟ , ಉದ್ಯೋಗವಿಲ್ಲದೆ ಜನರ ಚಡಪಡಿಕೆ, ಹೀಗೆ ಸರ್ವ ರಂಗದಲ್ಲಾದ ಆಡಳಿತ ವೈಫಲ್ಯದ ಮೂಲಕ ನಗ್ನವಾಗುತ್ತಿರುವ ಮರ್ಯಾದೆಯನ್ನು ಭಾರತದಾದ್ಯಂತ ಕೋಮು ವಿಷಬೀಜ ಬಿತ್ತಿ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಿ ತಮ್ಮ ತಮ್ಮ ಮಾನ ಉಳಿಸಿಕೊಳ್ಳುವ ಪ್ರಯತ್ನ ಇದೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಕಣ್ಣೂರು ಮಾತನಾಡಿದರು. ಮಾಜಿ ಅಧ್ಯಕ್ಷರಾದ ಹನೀಫ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಾಕಿರ್ ಸ್ವಾಗತಿಸಿ ವಂದಿಸಿದರು.

Join Whatsapp