ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ: ವ್ಯಾಪಕ ಆಕ್ರೋಶ

Prasthutha|

ಮಂಡ್ಯ: ಶಾಲೆಗೆ ಮೊಬೈಲ್​ ತಂದ ಕಾರಣಕ್ಕೆ ಮುಖ್ಯಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಶಿಕ್ಷೆ ಕೊಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಗಣಂಗೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಸ್ನೇಹಲತಾ, ತರಗತಿಗೆ ಮೊಬೈಲ್ ತಂದಿದ್ದ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಬೇರೆ ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಆರೋಪ ಕೇಳಿ ಬಂದಿದೆ.

ಮುಖ್ಯ ಶಿಕ್ಷಕಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದೂರು ನೀಡಲು ವಿದ್ಯಾರ್ಥಿನಿ ಪೋಷಕರು ನಿರ್ಧರಿಸಿದ್ದಾರೆ.

- Advertisement -

ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಶಾಲೆಗೆ ಭೇಟಿ ನೀಡಿ ಬಾಲಕಿಯಿಂದ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ, ಮಂಡ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮುಖ್ಯ ಶಿಕ್ಷಕಿಯ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಡಿಡಿಪಿಐ ಜವರೇಗೌಡ ಮಾತನಾಡಿದ್ದು, ಅವರು ಕ್ಲಾಸ್ ಒನ್ ಶಿಕ್ಷಕಿ ಆಗಿದ್ದಾರೆ. ಮೇಲ್ನೋಟಕ್ಕೆ ಪ್ರಕರಣ ತಪ್ಪು ಎಂದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆಯುತ್ತಿದ್ದೇವೆ ಎಂದಿದ್ದಾರೆ.

Join Whatsapp