ಹಾಸನ| ಜಮೀನು ಕಲಹ; ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ದಾಯಾದಿಗಳು

Prasthutha|

ಹಾಸನ: ದಾಯಾದಿಗಳು ಜಮೀನು ವಿವಾದದಲ್ಲಿ ಜಗಳವಾಡಿಕೊಂಡು ಮಾರಕಾಸ್ತ್ರಗಳಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ಘಟನೆ  ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಿಡುವಣಿ ಗ್ರಾಮದಲ್ಲಿ ನಡೆದಿದೆ.

- Advertisement -

ನಿಡುವಣಿ ಗ್ರಾಮದ ನಿಂಗಪ್ಪ ಮತ್ತು ದಾಯಾದಿ ಸಹೋದರ ಶಂಕರ ನಡುವೆ ಮಾರಾಮಾರಿ ನಡೆದಿದ್ದು, ಎರಡು ಕುಟುಂಬದವರೂ  ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಎರಡು ಕುಟುಂಬಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಳೆನರಸೀಪುರ ಹಾಗೂ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

 ಕಳೆದ ಹತ್ತು ವರ್ಷಗಳಿಂದ  ಎರಡು ಕುಟುಂಬಗಳ ನಡುವೆ ಜಮೀನು ವಿವಾದ ನಡೆಯುತ್ತಿತ್ತು. ಶಂಕರ ಕುಟುಂಬದ ಸದಸ್ಯರು ನಿಂಗಪ್ಪನ ಪತ್ನಿ ಗೌರಿ ಹಾಗೂ ಆತನ ಪುತ್ರ ಅಪ್ಪು ಎಂಬಾತನಿಗೆ ಜಮೀನಿನ ಕಡೆ ಹೋಗುವಾಗ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ನಿಂಗಪ್ಪ ಮಡದಿ ರಕ್ತಸಿಕ್ತವಾಗಿ ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಹಿಂದಿನಿಂದ ಬಂದ ಶಂಕರ್ ಮತ್ತು ಆತನ ಕುಟುಂಬಸ್ಥರು  ನಿಂಗಪ್ಪನ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

- Advertisement -

ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪೊಲೀಸರು , ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು, ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Join Whatsapp