ಮುಹಮ್ಮದ್‌ ಶಮಿಯನ್ನು ನಿಂದಿಸಿದ ಹಾರ್ದಿಕ್ ಪಾಂಡ್ಯ: ವ್ಯಾಪಕ ಟೀಕೆ

Prasthutha|

ಐಪಿಎಲ್ ಟೂರ್ನಿಯಲ್ಲಿ ಸೋಮವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ವರ್ತನೆಗೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕ್ಷೇತ್ರರಕ್ಷಣೆ ವೇಳೆ ತಂಡದ ಹಿರಿಯ ಆಟಗಾರ ಮುಹಮ್ಮದ್ ಶಮಿಯನ್ನು, ಹಾರ್ದಿಕ್ ಪಾಂಡ್ಯ ನಿಂದಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

- Advertisement -

ರನ್ ಚೇಸಿಂಗ್ ವೇಳೆ 12 ಓವರ್ ಕಳೆದರೂ ಹೈದರಾಬಾದ್ ತಂಡದ 1 ವಿಕೆಟ್ ಪಡೆಯಲಷ್ಟೇ ಟೈಟನ್ಸ್ ಬೌಲರ್‌ಗಳು ಸಫಲರಾಗಿದ್ದರು. ನಾಯಕ ಪಾಂಡ್ಯ ಎಸೆದ 12ನೇ ಓವರ್‌ನ ಕೊನೇಯ ಎಸೆತವನ್ನು ರಾಹುಲ್ ತ್ರಿಪಾಠಿ ಅಪ್ಪರ್ ಕಟ್ ಮಾಡಿದ್ದರು. ಈ ವೇಳೆ ಥರ್ಡ್‌ಮ್ಯಾನ್‌‌ ಕ್ಷೇತ್ರರಕ್ಷಣೆಯಲ್ಲಿದ್ದ ಮುಹಮ್ಮದ್ ಶಮಿ, ಒನ್ ಪಿಚ್ ಆಗಿ ಚೆಂಡನ್ನು ತಡೆದಿದ್ದರು. ಆದರೆ ಶಮಿ ಕ್ಯಾಚ್ ಪಡೆಯಲು ಪ್ರಯತ್ನಿಸಲಿಲ್ಲ ಎಂದು ಕೋಪಗೊಂಡ ಪಾಂಡ್ಯ, ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿ, ಕೆಟ್ಟ ಶಬ್ದಗಳಿಂದ ಶಮಿಯನ್ನು ನಿಂದಿಸಿದ್ದರು. ಪಾಂಡ್ಯ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದು ಕ್ಯಾಮರಾದಲ್ಲಿಯೂ ಸ್ಪಷ್ಟವಾಗಿ ದಾಖಲಾಗಿತ್ತು.

ಘಟನೆಯ ವೀಡಿಯೋ ವೈರಲ್ ಆಗಿದ್ದು, ಹಿರಿಯ ಆಟಗಾರ ಮುಹಮ್ಮದ್ ಶಮಿಯನ್ನ ನಡೆಸಿಕೊಂಡ ಪಾಂಡ್ಯ ವರ್ತನೆಗೆ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ಆಟಗಾರ ಮುಹಮ್ಮದ್ ಶಮಿಯವರ ಜೊತೆ ಯಾವ ರೀತಿಯಾಗಿ ವರ್ತಿಸಬೇಕು ಎಂದು ತಿಳಿಯದ ಪಾಂಡ್ಯ ʼಭಯಾನಕ ನಾಯಕʼ ಎಂದು ಭೋದಿಸತ್ವ ಎಂಬ ಟ್ವಿಟರ್ ಖಾತೆದಾರರು ಟ್ವೀಟ್ ಮಾಡಿದ್ದಾರೆ.

- Advertisement -

ಕ್ರಿಕೆಟ್ ದಂತಕಥೆ ಮುಹಮ್ಮದ್ ಶಮಿ ಅವರನ್ನು ಹಾರ್ದಿಕ್ ಪಾಂಡ್ಯ ನಿಂದಿಸಿರುವುದನ್ನ ನಂಬಲಾಗುತ್ತಿಲ್ಲ ಎಂದು ಗ್ಲೊವರ್ಡ್ ಟ್ವೀಟ್ ಮಾಡಿದ್ದಾರೆ.


ಹೈದರಬಾದ್‌ನ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ ಮತ್ತು ಮಾರ್ಕಮ್ ಕ್ಯಾಚ್ ಕೈ ಚೆಲ್ಲಿದಾಗ ನಾಯಕ ಕೇನ್ ವಿಲಿಯಮ್ಸನ್ ತೋರಿದ ಪ್ರತಿಕ್ರಿಯೆಗೂ, ಶಮಿ ವಿಚಾರದಲ್ಲಿ ಹಾರ್ದಿಕ್ ತೋರಿದ ಪ್ರತಿಕ್ರಿಯೆಯೂ ಎಲ್ಲವನ್ನೂ ಹೇಳುತ್ತದೆ ಎಂದು ಯಕ್ಶ್ ತ್ಯಾಗಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಯಾವುದೇ ತಂಡದ ನಾಯಕನಾಗಲು ಅರ್ಹನಲ್ಲ ಎಂದು ಇದ್ರಿಸ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಸಾಯಿ ಸುದರ್ಶನ್ ವಿರುದ್ಧವೂ ತಾಳ್ಮೆ ಕಳೆದುಕೊಂಡ ಹಾರ್ದಿಕ್
ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಶಮಿಯನ್ನು ಮಾತ್ರ ನಿಂದಿಸಿಲ್ಲ. ಯುವ ಆಟಗಾರ ಸಾಯಿ ಸುದರ್ಶನ್ ವಿರುದ್ಧವೂ ಹಾರ್ದಿಕ್ ತಾಳ್ಮೆ ಕಳೆದುಕೊಂಡಿದ್ದಾರೆ. ಕ್ಷೇತ್ರರಕ್ಷಣೆ ವೇಳೆ ಮಾಡಿದ ಎಡವಟ್ಟಿಗೆ ಸಾಯಿ ಸುದರ್ಶನ್ ವಿರುದ್ಧ ಪಾಂಡ್ಯ ಸಿಡುಕಿದ್ದಾರೆ.
ಈ ಬಾರಿಯ ಐಪಿಎಲ್ನ ಮೊದಲ ಮೂರು ಪಂದ್ಯಗಳಲ್ಲಿ ಗೆದ್ದು ಅಜೇಯರಾಗಿದ್ದ ಗುಜರಾತ್ ಟೈಟನ್ಸ್ ತಂಡ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮೊದಲ ಸೋಲಿನ ರುಚಿ ಕಂಡಿದೆ.

Join Whatsapp