ಬರಗಾಲದಲ್ಲೂ ನಮ್ಮ ಜನ ಸಂತೋಷವಾಗಿರೋದು ಖುಷಿ ತಂದಿದೆ: ಸಿಎಂ ಸಿದ್ದರಾಮಯ್ಯ

Prasthutha|

ಮೈಸೂರು: ಮೈಸೂರಿನ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಏರ್​ಶೋ ವೀಕ್ಷಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರಗಾಲದಲ್ಲೂ ಜನ ಸಂತೋಷವಾಗಿದ್ದಾರಲ್ಲಾ ಎಂಬುದೇ ಖುಷಿ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -

ದಸರಾ ಅಂದರೆ ಜನರ ಹಬ್ಬ, ನಾಡಹಬ್ಬ. ಜನರು ಖುಷಿಯಾಗಿರುವುದು ಮುಖ್ಯ. ಈ ಬಾರಿ ರಾಜ್ಯದಲ್ಲಿ ಬರಗಾಲ ಬಂದಿದ್ದು, ಅದರ ನಡುವೆಯೂ ಜನರು ಖುಷಿಯಾಗಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.

ನಾನು ದೆಹಲಿಗೆ ಭೇಟಿ ನೀಡಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್​ ಅವರಿಗೆ ಈ ಬಾರಿಯ ದಸರಾದಲ್ಲಿ ಏರ್​ಶೋ ಆಯೋಜಿಸುವಂತೆ ಮನವಿ ಮಾಡಿದ್ದು, ಅವರು ಸಹ ಒಪ್ಪಿಗೆ ಸೂಚಿಸಿದರು. ಅದರಂತೆ ಏರ್​ಶೋ ನಡೆದಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಒಮ್ಮೆ ಏರ್​ಶೋ ಮಾಡಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

- Advertisement -

ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿದೆ. ದುಡಿಯುವವರಿಗೆ ಕೆಲಸ ಕೊಡುತ್ತಿದ್ದೇವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ ಎಂದ ಸಿಎಂ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಕುಡಿಯುವ ನೀರು ಹಾಗೂ ಮೇವಿನ ವಿಚಾರದಲ್ಲಿ ಎಷ್ಟೇ ಹಣ ಖರ್ಚಾದರೂ ಕೊಡುತ್ತೇವೆ ಎಂದು ಹೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.