ಪರೇಶ್ ಮೆಸ್ತಾ ಪ್ರಕರಣದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲು ಸರ್ಕಾರಕ್ಕೆ 15 ದಿನ ಕಾಲಾವಕಾಶ: ಪ್ರಿಯಾಂಕ್ ಖರ್ಗೆ

Prasthutha|

►ಪೇಸಿಎಂ ಬಳಿಕ SayCM ಆಂದೋಲನಕ್ಕೆ ಸಜ್ಜಾದ ಕಾಂಗ್ರೆಸ್

- Advertisement -

ಬೆಂಗಳೂರು:  ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600ಕ್ಕೂ ಹೆಚ್ಚು ಭರವಸೆ ನೀಡಿದ್ದು, ಶೇ.10ರಷ್ಟು ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಭಿಯಾನದ ಮೂಲಕ ಇಂದು 50ನೇ ಪ್ರಶ್ನೆ ಕೇಳುತ್ತಿದ್ದು, ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಪೇಸಿಎಂ ಅಭಿಯಾನದ ಜತೆಗೆ ನಾವು SayCM ಆಂದೋಲನವನ್ನು ನಡೆಸಬೇಕಿದೆ. ಸರ್ಕಾರ ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ. ನೀವು ಈ ಪ್ರಣಾಳಿಕೆ ಮೂಲಕ ಜನರಿಂದ ಮತ ಹಾಕಿಸಿಕೊಂಡಿದ್ದೀರಿ. ಹೀಗಾಗಿ ನೀವು ಜನರಿಗೆ ಉತ್ತರಿಸಬೇಕು ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಕೆಲವು ದಿನಗಳ ಹಿಂದೆ ಹೊನ್ನಾವರ ನ್ಯಾಯಾಲಯದಲ್ಲಿ ಪರೇಶ್ ಮೇಸ್ತಾ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ತನ್ನ ವರದಿ ಸಲ್ಲಿಸಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂಬುದು ಎಲ್ಲರಿಗೂ ಗೊತ್ತು. ಈ ಸುಳ್ಳಿನ ಕಾರ್ಖಾನೆಯಿಂದ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜತೆಗೆ ನಮ್ಮ ಯುವಕರ ಭವಿಷ್ಯ ನಿರ್ಣಾಮವಾಗುತ್ತಿದೆ. ಬಿಜೆಪಿಯವರು ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ ರಾಜಕೀಯ ದುರುದ್ದೇಶಕ್ಕೆ ಯುವಕರನ್ನು ಬಿಜೆಪಿ ದಾಳಗಳಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

- Advertisement -

ಯುವಕರಿಗೆ ಶಿಕ್ಷಣ, ಉದ್ಯೋಗ ನೀಡುವ ಬದಲು ಅವರ ಹೆಗಲಿಗೆ ಕೇಸರಿ ಶಾಲು ಹಾಕಿ ಅವರಿಗೆ ಧರ್ಮ ರಕ್ಷಕ ಹಾಗೂ ಗೋರಕ್ಷಕ ಎಂಬ ಬಿರುದು ನೀಡುತ್ತಿದ್ದಾರೆ. ಕಾಂಗ್ರೆಸ್ ಆರಂಭದಿಂದಲೂ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ, ಭವಿಷ್ಯದ ಜತೆ ಚೆಲ್ಲಾಟವಾಡಿ, ಅವರ ಭವಿಷ್ಯ ನಾಶ ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿದ್ದೆ. ಆದರೆ ಇಂದು ಪರೇಶ್ ಮೇಸ್ತಾ ಅವರ ಸಾವಿನ ಬಗ್ಗೆ ಸಿಬಿಐ ವರದಿ ಬಂದಿದ್ದು, ಈ ಸಾವು ಹೇಗೆ ಸಂಭವಿಸಿದೆ, ಇದರಲ್ಲಿ ಯಾರು ಹೇಗೆ ರಾಜಕೀಯ ಮಾಡಿದ್ದಾರೆ ಎಂಬ ಅಂಶ ವರದಿಯಲ್ಲಿ ಸ್ಪಷ್ಟವಾಗಿದೆ. ಬಿಜೆಪಿ ಅಮಾಯಕರ ಜೀವನದ ಜತೆ ಚೆಲ್ಲಾಟವಾಡಿ, ಹೆಣದ ಮೇಲೆ ರಾಜಕೀಯ ಮಾಡಲು ಹಿಂಜರಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಮಹೇಂದ್ರ ಕುಮಾರ್ ಎಂಬುವವರು ರಾಜ್ಯ ಬಜರಂಗದಳದ ಅಧ್ಯಕ್ಷರಾಗಿದ್ದರು. ಅವರಿಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಹೇಗೆ ಕೆಲಸ ಮಾಡುತ್ತಾರೆ ಎಂದು ಅರಿತು ಆ ವ್ಯವಸ್ಥೆಯಿಂದ ಹೊರ ಬಂದು ಬಹಿರಂಗ ವೇದಿಕೆಯಲ್ಲಿ ಭಾಷಣ ಮಾಡಿ, ‘ ಬಿಜೆಪಿ ಹಾಗೂ ಆರ್ ಎಸ್ ಎಸ್ ಬಡ ಯುವಕರ ತಲೆ ಕೆಡಿಸಿ ಧರ್ಮ ರಕ್ಷಣೆಗೆ ಕಳುಹಿಸಿ ಅವರ ಸಾವಾದರೆ ರಾಜಕೀಯ ಫಸಲು ತೆಗೆಯುತ್ತಾರೆ. ಅವರು ರಕ್ತ ಹೀರುವ ಕ್ರಿಮಿಗಳು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೇಸ್ತಾ ಸಾವಿನ ಪ್ರಕರಣದ ಸಿಬಿಐ ವರದಿಯಲ್ಲೂ ಇದೇ ಅಂಶವಿದೆ. ಸಿಬಿಐ ತನ್ನ ವರದಿ ಸಲ್ಲಿಸಿ ಪರೇಶ್ ಮೇಸ್ತಾ ಪ್ರಕರಣವನ್ನು ಮುಕ್ತಾಯ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಈ ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಆಕಸ್ಮಿಕ. ಯಾವುದೇ ಕೋಮುಗಲಭೆಯಲ್ಲಿ ಆಗಿರುವ ಸಾವು ಅಲ್ಲ. ಡಿ.6, 2017ರಂದು ಹೊನ್ನಾವರದ ಗುಡ್ ಲಕ್ ಹೊಟೇಲ್ ಬಳಿ ಕೋಮು ಗಲಭೆ ಆರಂಭವಾಗುತ್ತದೆ. ನಂತರ ಪರೇಶ್ ಮೇಸ್ತಾ ಕಾಣೆಯಾಗಿ ಡಿ.8ರಂದು ಶೆಟ್ಟಿಕೆರೆ ಬಳಿ ಮೃತದೇಹ ಸಿಗುತ್ತದೆ. ತನಿಖಾ ವರದಿಯಲ್ಲಿ ತಿಳಿಸಿರುವಂತೆ ಡಿ.6, 2017ರಂದು ಹಿಂದೂ ಸಂಘಟನೆ ಮುಖಂಡರು ಮತಾಂತರ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿದ್ದಾಗ ಅಪಘಾತದ ಬಗ್ಗೆ ಸುದ್ದಿ ಬರುತ್ತದೆ. ಅಪಘಾತಕ್ಕೆ ಒಳಗಾದ ಆಟೋ ಚಾಲಕ ಹಿಂದೂವಾಗಿದ್ದು, ಬೈಕ್  ಚಾಲಕ ಮುಸಲ್ಮಾನನಾಗಿದ್ದ. ಆಗ ಹಿಂದೂ ಸಂಘಟನೆ ಸದಸ್ಯರು ಅಪಘಾತ ಸ್ಥಳವಾದ ಶರಾವತಿ ವೃತ್ತದ ಬಳಿ ಹೋಗುತ್ತಾರೆ. ಅಲ್ಲಿ ಯಾರೂ ಇರದ ಕಾರಣ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಾರೆ. ಅಪಘಾತಕ್ಕೆ ಒಳಗಾದವರು ಸ್ಥಳೀಯರಲ್ಲದ ಕಾರಣ ರಾಜಿ ಮಾಡಿಕೊಂಡು ಆಸ್ಪತ್ರೆಯಿಂದಲೂ ತೆರಳಿದ್ದರು ಎಂದು ತಿಳಿಯುತ್ತದೆ. ಆದರೂ ಸಂಘಟನೆಯವರು ಗುಡ್ ಲಕ್ ಹೊಟೇಲ್ ಬಳಿ ಹೋಗಿ ಮುಸಲ್ಮಾನ ಯುವಕರೊಂದಿಗೆ ವಾಗ್ವಾದ ನಡೆಸಿದಾಗ ರಾತ್ರಿ 8.15ರ ಸುಮಾರಿಗೆ ಕೋಮುಗಲಭೆಯ ಕಿಚ್ಚು ಹೊತ್ತಿಕೊಳ್ಳುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಿಯಾಂಕ್ ವಿವರಿಸಿದರು.

ಈ ವರದಿಯಲ್ಲಿ ಮುಂದುವರಿದು, ಪರೇಶ್ ಮೇಸ್ತಾ ಡಿ.6ರಂದು ಸಂಜೆ 6.54ರ ಸುಮಾರಿಗೆ ಕುಮಟಾಯಿಂದ ಹಿಂದಿರುಗುತ್ತಾರೆ. ನಂತರ ಮನೆಯವರಿಗೆ ತಾನು ಶನೇಶ್ವರ ದೇವಾಲಯಕ್ಕೆ ಹೋಗುವುದಾಗಿ ಹೊರಗೆ ಹೋಗುತ್ತಾರೆ. ನಂತರ ಮಾಲೆ ಹಾಕುವ ವಿಚಾರವಾಗಿ ಪರೇಶ್ ತನ್ನ ಸ್ನೇಹಿತ ಅತುಲ್ ಮೇಸ್ತಾ ಜತೆ ತುಳಸಿ ನಗರದ ಅಯ್ಯಪ್ಪ ದೇವಾಲಯಕ್ಕೆ ಹೋಗುತ್ತಾರೆ. ನಂತರ ಮತ್ತೊಬ್ಬ ಸ್ನೇಹಿತ ದೀಪಕ್ ಮೇಸ್ತಾ ಮನೆಗೆ ಹೋಗಿ ಆತನ ಸ್ಕೂಟರ್ ತೆಗೆದುಕೊಂಡು 8.15ರ ಸುಮಾರಿಗೆ ವೈನ್ ಶಾಪ್ ಗೆ ಹೋಗಿ ಅಲ್ಲಿ ಬಿಯರ್ ಖರೀದಿ ಮಾಡುತ್ತಾನೆ. ಕೆಲ ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಕಾಲು ಪೆಟ್ಟಾಗಿರುವ ಕಾರಣ ಅದೇ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಶರತ್ ಮೇಸ್ತಾ ಮೂಲಕ ಬೈಕ್ ಕಿಕ್ ಮಾಡಿಸಿಕೊಂಡು ಹೋಗಲು ಮುಂದಾಗುತ್ತಾನೆ. ಆಗ ಗುಡ್ ವಿಲ್ ಹೋಟೇಲ್ ಬಳಿ ಗಲಾಟೆ ವಿಚಾರ ತಿಳಿದ ನಂತರ ಅಲ್ಲಿಗೆ ಹೋಗಿ, ನಂತರ ಸೆಂಟ್ ಥಾಮಸ್ ಶಾಲಾ ಮೈದಾನದಲ್ಲಿ ತನ್ನ ಸ್ನೇಹಿತ ಅಶೋಕ್ ಮೇಸ್ತಾನನ್ನು ಭೇಟಿಯಾಗಿ ದೀಪಕ್ ಮೇಸ್ತಾನ ಸ್ಕೂಟರ್ ಕೀ ಕೊಟ್ಟು ಕೋಮು ಗಲಭೆ ಆರಂಭದ ವಿಚಾರ ತಿಳಿಸುತ್ತಾನೆ. ನಂತರ ರಾತ್ರಿ 10 ರಿಂದ 10.30 ಸುಮಾರಿಗೆ ಪರೇಶ್ ನನ್ನು ಅವರ ಸ್ನೇಹಿತರಾದ ಗಜಾನನ ಮೇಸ್ತಾ, ವಿನಾಯಕ್ ಗಣೇಶ್ ಮೇಸ್ತಾ, ಆಕಾಶ್ ಬಾಲಕೃಷ್ಣ ಮೇಸ್ತಾ ಅವರು ಕಡೇಯ ಬಾರಿಗೆ ಶಾಲಾ ಮೈದಾನದ ಬಳಿ ನೋಡಿರುತ್ತಾರೆ. ಡಿ.6ರ ರಾತ್ರಿ ಪರೇಶ್ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಡಿ.7ರಂದು ಪರೇಶ್ ಮೇಸ್ತಾ ಅವರ ತಂದೆ ಕಮಲಾಕರ ಮೇಸ್ತಾ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ದೂರು ನೀಡುತ್ತಾರೆ.   

ನಂತರ ಡಿ.8ರಂದು ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಅವರ ಶವ ಸಿಗುತ್ತದೆ. ನಂತರ ಪರೇಶ್ ತಂದೆ ಐದು ಜನ ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ದೂರು ನೀಡುತ್ತಾರೆ. ಮೃತ ದೇಹವನ್ನು ಪರೀಕ್ಷೆಗೆ ನಡೆಸಲು ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಮಣಿಪಾಲ ವಿವಿಯ ಕಸ್ತೂರಿ ಬಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಕ್ಕನವರ್ ಎಂಬುವವರು ಮರಣೋತ್ತರ ಪರೀಕ್ಷೆ ನಡೆಸಿದರು. ಅವರ ವರದಿಯಲ್ಲಿ ಪರೇಶ್ ಮೇಸ್ತಾ ಅವರ ದೇಹದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಯಾವುದೇ ಗುರುತುಗಳಿಲ್ಲ. ಮದ್ಯ ಸೇವನೆ, ವಿಷ ಹಾಗೂ ಡ್ರಗ್ಸ್ ಸೇವನೆಯ ಯಾವುದೇ ಅಂಶಗಳು ಮೃತದೇಹದಲ್ಲಿ ಕಂಡುಬಂದಿಲ್ಲ. ಮೃತನ ದೇಹದಲ್ಲಿ ಆ ಕೆರೆಯ ನೀರು ಸೇವನೆಯಾಗಿರುವ ಅಂಶ ಖಚಿತವಾಗಿದ್ದು, ಮೃತನನ್ನು ಹತ್ಯೆ ಮಾಡಿ ನಂತರ ಕೆರೆಗೆ ಎಸೆದಿರುವ ಸಾಧ್ಯತೆ ಇಲ್ಲವಾಗಿದೆ ಎಂದು ತಿಳಿಸಲಾಗಿದೆ. ಇನ್ನು ಶ್ವಾಸಕೋಶದ ಪರೀಕ್ಷೆ ಮಾಡಿದಾಗ ಈ ಸಾವು ಕೆರೆಯಲ್ಲಿ ಮುಳುಗಿ ಆಗಿರುವ ಸಾವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಈ ವರದಿಯಲ್ಲಿ ಮೃತನ ಕುತ್ತಿಗೆ ಭಾಗ ಹಾಗೂ ಮೂಳೆಗೆ ಯಾವುದೇ ಹಾನಿಯಾಗಿರುವ ಲಕ್ಷಣಗಳು ಇಲ್ಲವಾಗಿದ್ದು  ಬೇರೆಯವರು ಬಲವಂತವಾಗಿ ಮುಳುಗಿಸಿ, ಅಥವಾ ಉರುಳು ಹಾಕಿರುವ ಸಾಧ್ಯತೆ ಇಲ್ಲವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಸಾವು ಆಕಸ್ಮಿಕವೇ ಹೊರತು ಹತ್ಯೆಯಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗುತ್ತದೆ. ಇನ್ನು ಸಿಬಿಐ ತನಿಖಾಧಿಕಾರಿಗಳು ಎರಡನೇ ಅಭಿಪ್ರಾಯ ಪಡೆಯಲು ಪಾಂಡಿಚೆರಿಗೆ ಪರೀಕ್ಷೆಗೆ ಕಳುಹಿಸುತ್ತಾರೆ.  ನಂತರ ಅವರೂ ಕೂಡ ಇದು ನೀರಿನಲ್ಲಿ ಮುಳುಗಿರುವ ಆಕಸ್ಮಿಕ ಸಾವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸಿಬಿಐ ತನ್ನ ವರದಿಯಲ್ಲಿ ಇದು ಕೋಮುಗಲಭೆಯಿಂದ ಆಗಿರುವ ಹತ್ಯೆಯಲ್ಲ ಎಂದು ಮೊದಲ ಅಂಶದಲ್ಲಿ ಸ್ಪಷ್ಟಪಡಿಸಿದೆ. ಇನ್ನು ಗುಡ್ ವಿಲ್ ಹೋಟೇಲ್ ಬಳಿ ಸಂಭವಿಸಿದ ಗಲಭೆಯಲ್ಲಿ ಹಿಂದೂ ಸಂಘಟನೆ ಸದಸ್ಯರು ಸುಮಾರು 100 ಮಂದಿ ಇದ್ದರೆ, ಮುಸಲ್ಮಾನ ಸಮುದಾಯದವರು ಸುಮಾರು 60 ಮಂದಿ ಇದ್ದರು. ಗಲಭೆ ಹೆಚ್ಚಿದ ನಂತರ ಹಿಂದೂ ಸಂಘಟನೆ ಸದಸ್ಯರ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ನಂತರ ಈ ಗಲಭೆ ಸಮಯದಲ್ಲಿ ಉಭಯ ಗುಂಪುಗಳ ನಡುವೆ 100 ಮೀಟರ್ ಅಂತರವಿತ್ತು. ಈ ಸಂದರ್ಭದಲ್ಲಿ ಕಲ್ಲು ತೂರಾಟ, ಬಾಟೆಲ್ ಎಸೆಯಲಾಗಿತ್ತು. ಆದರೆ ಗಲಭೆಯಲ್ಲಿ ಒಂದು ಗುಂಪಿನ ಸದಸ್ಯರು ಮತ್ತೊಂದು ಗುಂಪಿನ ಸದಸ್ಯರ ಕಡೆ ಹೋಗಿ ದೈಹಿಕ ದಾಳಿ, ಜಗಳ ಮಾಡಿಲ್ಲ. ಅಷ್ಟು ಜನ ಹಿಂದೂ ಸಂಘಟನೆ ಸದಸ್ಯರು ಹಾಗೂ ಪೊಲೀಸ್ ಪಡೆ ಇರುವಾಗ ಅಲ್ಲಿ ಹತ್ಯೆ ಮಾಡಿ ನಂತರ ಮೃತದೇಹವನ್ನು ಕೆರೆ ಬಳಿ ಎಸೆಯುವ ಅವಕಾಶ ಇಲ್ಲವಾಗಿದೆ. ಇನ್ನು ಮೃತದೇಹದ ಮೇಲೆ ಯಾವುದೇ ಚೂಪಾದ ಆಯುಧಗಳ ಹಲ್ಲೆ ನಡೆದಿಲ್ಲದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಈ ಸಾವನ್ನು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಂಭವಿಸಿರುವ ಸಾವಾಗಿದೆ. ತನಿಖೆ ಸಮಯದಲ್ಲಿ ಯಾವುದೇ ಇದು ಕೊಲೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಇನ್ನು ವಿವಿಧ ವೈದ್ಯಕೀಯ ಪರೀಕ್ಷೆ ವರದಿ ಹಾಗೂ ನೂರಾರು ಮಂದಿಯ ವಿಚಾರಣೆ ನಂತರ ಕೊಲೆ ನಡೆದಿದೆ ಎಂಬುದಕ್ಕೆ ಸಾಕ್ಷಿಗಳು ಇಲ್ಲವಾಗಿದೆ. ಹೀಗಾ ಪ್ರಕರಣದ ಆರೋಪಿಗಳು ನಿರ್ದೋಷಿಗಳಾಗಿದ್ದಾರೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ನ್ಯಾಯಾಲಯ ಈ ವರದಿಯನ್ನು ಸ್ವೀಕರಿಸಬೇಕು ಎಂದು ಸಿಬಿಐ ತನಿಖಾ ತಂಡ ಮನವಿ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ವರದಿ ನಮ್ಮದಲ್ಲ. ಇದು ಸಿಬಿಐ ವರದಿ. ಸಿಬಿಐ ಇರುವುದು ಕೇಂದ್ರ ಸರ್ಕಾರ ಅದರಲ್ಲೂ ಅಮಿತ್ ಶಾ ಅವರ ನಿಯಂತ್ರಣದಲ್ಲಿ. ಆದರೂ ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಬಿಜೆಪಿ ಯುವಕನ ಸಾವಿಗೆ ಧರ್ಮದ ಬಣ್ಣ ಕಟ್ಟಿ ಲಾಭ ಮಾಡುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಡಿ.8ರಂದು ಶವ ಸಿಕ್ಕ ನಂತರ ಡಿ.9, 2017ರಂದು ರಂದು ಬಿಜೆಪಿಯವರು ಅಧಿಕೃತ ಪತ್ರಿಕಾ ಪ್ರಕಟಣೆ ನೀಡುತ್ತಾರೆ. ಅದರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭ ಕರಂದ್ಲಾಜೆ ಅವರು ಹಿಂದೂ ಕಾರ್ಯಕರ್ತ ಪರಶ್ ಮೇಸ್ತಾ ಅವರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಬೇಕು ಎಂದು ಆಗ್ರಹಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಠಿಣ ಕ್ರಮ ಕೈಗೊಳ್ಳಲು ಇನ್ನು ಎಷ್ಟು ಮಂದಿ ಹಿಂದೂಗಳು ಬಲಿಯಾಗಬೇಕು ಎಂದು ಪ್ರಶ್ನಿಸಿರುತ್ತಾರೆ. ಪರೇಶ್ ಮೇಸ್ತಾ ಅವರ ಸಾವು ಕರಾವಳಿ ಭಾಗದ ಜಿಹಾದಿ ಶಕ್ತಿಗಳ ಕೃತ್ಯವಾಗಿದ್ದು, ಹೀಗಾಗಿ ಪರೇಶ್ ಮೇಸ್ತಾ ಪ್ರಕರಣ ಸೇರಿದಂತೆ ಎಲ್ಲ ಸಾವಿನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ವಿಚಾರಣೆ ನಡೆಯಬೇಕು. ಪರೇಶ್ ಮೇಸ್ತಾ ಅವರನ್ನು ಹೇಗೆ ಹತ್ಯೆ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ಅವರು ವಿವರಿಸಿದ್ದು, ‘ಮೇಸ್ತಾ ಮೋಗವೀರ ಸಮುದಾಯಕ್ಕೆ ಸೇರಿದ್ದು, ಬಹಳ ಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಆತ ತನ್ನ ಕೈನಲ್ಲಿ ಜೈರಾಮ ಎಂಬ ಹಚ್ಚೆ ಹಾಕಿಸಿಕೊಂಡಿದ್ದು, ಅದನ್ನು ಕತ್ತರಿಸಲಾಗಿದೆ. ನಂತರ ಕುದಿಯುವ ಎಣ್ಣೆಯನ್ನು ಆತನ ಮೇಲೆ ಸುರಿದಿರುವ ಹಿನ್ನೆಲೆಯಲ್ಲಿ ಆತನ ದೇಹ ಸಂಪೂರ್ಣವಾಗಿ ಕಪ್ಪಾಗಿದೆ. ಜಿಹಾದಿ ಶಕ್ತಿಗಳು ಈ ಹೀನ ಕೃತ್ಯ ನಡೆಸಿದ್ದಾರೆ’ ಎಂದು ಶೋಭ ಕರಂದ್ಲಾಜೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದರು. 

ಶೋಭ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ, ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್ ಅವರಿಗೆ ಈ ಸಾವಿನ ಬಗ್ಗೆ 24 ಗಂಟೆಗಳಲ್ಲಿ ಇಷ್ಟೊಂದು ವಿವರಣೆ ಗೊತ್ತಾಗಿದ್ದು ಹೇಗೆ? ಆತನ ಕೈ ಕತ್ತರಿಸಲಾಗಿದೆ ಎಂದು ಹೇಳಿದ್ದರು, ಮೃತದೇಹ ಸಿಕ್ಕಾಗ ಕೈ ಇತ್ತಲ್ಲವೇ? ಆತನ ಕೈಯಲ್ಲಿ ಜೈ ಶ್ರೀರಾಮ ಎಂಬ ಟ್ಯಾಟೂ ಇತ್ತು ಎಂದು ಹೇಳಿದ್ದಾರೆ. ಆದರೆ ಪರೇಶ್ ಮೇಸ್ತಾ ಕೈಮೇಲೆ ಶಿವಾಜಿ ಟ್ಯಾಟೂ ಇತ್ತು. ಮೃತದೇಹ ಸಿಕ್ಕಾಗ ಆ ಟ್ಯಾಟೂ ಹಾಗೇ ಇದೆ. ಕುದಿಯುವ ಎಣ್ಣೆ ಹಾಕಿದ್ದಾರೆ, ಕಣ್ಣುಗುಡ್ಡೆ ಕೀಳಲಾಗಿದೆ ಎಂಬ ಮಾಹಿತಿಯನ್ನು ಇವರಿಗೆ ಕೊಟ್ಟವರು ಯಾರು? ಇವರು ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡುವುದಾಗಿ ಹೇಳುತ್ತಾರೆ. ಇದು ಕೊಲೆಯೇ ಆಗಿದ್ದು, ಸಾಕ್ಷ್ಯಾಧಾರಗಳು, ಮಾಹಿತಿ ಇದ್ದರೆ ಈ ಬಿಜೆಪಿ ನಾಯಕರು ಕತ್ತೆ ಕಾಯುತ್ತಿದ್ದರೇ? ಸಿಬಿಐಗೆ ಸಾಕ್ಷಿ ಯಾಕೆ ನೀಡಲಿಲ್ಲ? ಅಮಿತ್ ಶಾ ಅವರ ಬಳಿ ನಿಯೋಗವನ್ನು ಕರೆದುಕೊಂಡು ಹೋಗಿದ್ದರಲ್ಲವೇ ಆಗಲೇ ಸಾಕ್ಷಿ ನೀಡಬಹುದಿತ್ತಲ್ಲವೇ? ಈಶ್ವರಪ್ಪ, ಅನಂತ ಕುಮಾರ್ ಹೆಗಡೆ ಬಾಯಿಗೆ ಬಂದಂತೆ ಮಾಡಿದ್ದರು. ಆಗ ಪರೇಶ್ ಮೇಸ್ತಾ ಮನೆಗೆ ದಂಡಿಯಾತ್ರೆ ಮಾಡಿದ್ದ ಬಿಜೆಪಿ ನಾಯಕರು ಈಗ ಹೋಗಿ ಕ್ಷಮೆ ಕೇಳಲಿ. ಇದು ಅವರಿಂದ ಸಾಧ್ಯವೇ? ಎಂದು ಖರ್ಗೆ ಪ್ರಶ್ನಿಸಿದರು.

ಹೆಣದ ಮೇಲೆ ರಾಜಕೀಯ ಮಾಡಲು ನಾಚಿಕೆಯಾಗುವುದಿಲ್ಲವೇ? ನೀವು ರಾಜಕೀಯಕ್ಕಾಗಿ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುತ್ತೀರಾ? ಯುವಕರ ಭವಿಷ್ಯಕ್ಕೆ ಕಿಮ್ಮತ್ತಿಲ್ಲವೇ? ನೀವೆಂತಾ ನಾಯಕರು? ನಿಮ್ಮ ಪ್ರತ್ರಿಕಾ ಹೇಳಿಕೆಯಲ್ಲಿ ಪರೇಶ್ ಹತ್ಯೆಯ ಬಗ್ಗೆ ಗ್ರಾಫಿಕ್ ಡೀಟೇಲ್ಸ್ ಎಂದು ಹೇಳಿದ್ದೀರಿ. ಈ ಮಾಹಿತಿಯನ್ನು ಸಿಬಿಐಗೆ ನೀಡಿಲ್ಲ ಏಕೆ? ಪಿಎಸ್ ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿ ಹೇಳಿದರೆ ನನಗೆ ನೊಟೀಸ್ ನೀಡಿದ್ದರು, ಪೇಸಿಎಂ ಪೋಸ್ಟರ್ ಅಂಟಿಸಿದವರಿಗೆ ಸಿಸಿಬಿ ಪ್ರಕರಣ. ಆದರೆ ಹಿಂದೂ ಕಾರ್ಯಕರ್ತ ಸಾವು ಹೇಗಾಗಿದೆ ಎಂದು ಗೊತ್ತಿರುವಾಗ ಅವರಿಗೆ ಸಾಕ್ಷಿ ನೀಡಿ ಎಂದು ಈ ಸರ್ಕಾರ ಕೇಳಿಲ್ಲ. ನಾನು ಅತ್ತಂಗೆ ಮಾಡುತ್ತೇನೆ, ನೀನು ಚಿವುಟಿದಂತೆ ಮಾಡುವ ಪ್ರಯತ್ನವೇ? ಎಂದು ಕೇಳಿದರು.

ಇದೇ ಕಾರಣಕ್ಕೆ ಮಹೇಂದ್ರ ಕುಮಾರ್ ಅವರು ನಿಮ್ಮನ್ನು ರಕ್ತ ಹೀರುವ ಕ್ರೀಮಿಗಳು ಎಂದು ಹೇಳಿದ್ದಾರೆ. ರಾಜ್ಯದ ಯುವ ಜನರಿಗೆ ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ರಾಜ್ಯದ ಯುವಕರಲ್ಲಿ ಸಾಕಷ್ಟು ಪ್ರತಿಭೆ ಇದೆ, ನಿಮಗೆ ಒಳ್ಳೆಯ ಭವಿಷ್ಯ ಇದೆ. ನೀವು ಬಿಜೆಪಿ ಆರ್ ಎಸ್ಎಸ್ ಅಜೆಂಡಾಕ್ಕೆ ನಿಮ್ಮ ತಲೆ ಕೆಡೆಸಿಕೊಂಡು ಭವಿಷ್ಯ ನಾಶ ಮಾಡಿಕೊಳ್ಳಬೇಡಿ. ನಿಮ್ಮ ಭವಿಷ್ಯ ಉಜ್ವಲವಾದರೆ ರಾಜ್ಯ ಉದ್ದಾರವಾಗುತ್ತದೆ.  ನಿಮಗೆ ಕೇಸರಿ ಶಾಲು ಹಾಕಲು ಬಂದರೆ, ಬಿಜೆಪಿ ನಾಯಕರ ಮಕ್ಕಳು ಯಾಕೆ ಕೇಸರಿ ಶಾಲು ಹಾಕಿಕೊಂಡು ಧರ್ಮ ರಕ್ಷಣೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಕೇಳಿ. ಎಷ್ಟು ಜನ ಗೋಶಾಲೆಯಲ್ಲಿದ್ದಾರೆ? ಎಷ್ಟು ಮಂದಿ ಗೋ ಪೂಜೆ ಮಾಡಿ ಗೋಮೂತ್ರ ಕುಡಿಯುತ್ತಾರೆ? ಗೋರಕ್ಷಣೆಗೆ ಕೇವಲ ಬಡವರು, ಈಡಿಗರು, ಪರಿಶಿಷ್ಟರು, ಬಿಲ್ಲವ ಸಮುದಾಯದವರು ಬೇಕಾ? ಸಮೃದ್ಧ ಹಾಗೂ ಪ್ರಬುದ್ಧ ಕರ್ನಾಟಕ ಕಟ್ಟಬೇಕಾದರೆ, ಯುವಕರಿಗೆ ಉತ್ತಮ ಶಿಕ್,ಣ, ಉದ್ಯೋಗ ನೀಡಿ ಅವರ ಭವಿಷ್ಯ ಕಟ್ಟಬೇಕು. ಬಿಜೆಪಿಯವರಿಗೆ ಇವೆರಡನ್ನೂ ನಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೋರಕ್ಷಣೆ ಧರ್ಮ ರಕ್ಷಣೆಗೆ ಕಳುಹಿಸುತ್ತಿದ್ದಾರೆ.

ಬಿಜೆಪಿ ಮಾತೆತ್ತಿದರೆ ಕಾಂಗ್ರೆಸ್ , ಧಮ್ಮು, ತಾಕತ್ತು ಎಂಬ ಮಾತನಾಡುತ್ತಾರೆ. ನಿಮಗೆ ತಾಕತ್ತೂ ಧಮ್ಮು, ಮಾನವೀಯತೆ ಇದ್ದರೆ ಪರೇಶ್ ಮೇಸ್ತಾ ಅವರ ಕುಟುಂಬಕ್ಕೆ ಕ್ಷಮೆ ಕೇಳಿ. ದಕ್ಷಿಣ ಕನ್ನಡ, ಯುವಕರ ಕೈಕಾಲಿಗೆ ಬೀಳಿ. ಶೋಭ ಕರಂದ್ಲಾಜೆ, ಈಶ್ವರಪ್ಪ, ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್, ಅನಂತ ಕುಮಾರ್ ಹೆಗಡೆ ಯಾರೆಲ್ಲ ಈ ರೀತಿ ಸುಳ್ಳು ಮಾಹಿತಿ ನೀಡಿ ಜನರ ದಾರಿತಪ್ಪಿಸಿ ರಾಜ್ಯಕ್ಕೆ ಬೆಂಕಿ ಹಚ್ಚಿದವರ ವಿರುದ್ದ ಪ್ರಕರಣ ದಾಖಲಿಸಲಿ. ಸಿಎಂ ಎಂದರೆ ಕಾಮನ್ ಮ್ಯಾನ್ ಎನ್ನುವ ಮುಖ್ಯಮಂತ್ರಿಗಳೇ ನೀವು ಪರೇಶ್ ಮೇಸ್ತಾ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೀರಾ? ಇವರ ಮೇಲೆ ಪ್ರಕರಣ ದಾಖಲಿಸುವ ತಾಕತ್ತು ಇದೆಯಾ? ಎಂದು ಕೇಳಿದರು.

ಸುಮೋಟೋ ಪ್ರಕರಣ ದಾಖಲಿಸಲು ನಾವು ಸರ್ಕಾರಕ್ಕೆ 15 ದಿನ ಕಾಲಾವಕಾಶ ನೀಡುತ್ತೇವೆ. ಇಲ್ಲದಿದ್ದರೆ ನಾವು ಇವರು ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂದು ಸಿಬಿಐಗೆ ದೂರು ನೀಡುತ್ತೇವೆ. ನೀವು ಈ ಮೂರ್ಖತನಕ್ಕೆ ಅಂತ್ಯವಾಡದಿದ್ದರೆ ಕಾಂಗ್ರೆಸ್ ಪಕ್ಷ ಅಂತ್ಯ ಹಾಕಲಿದೆ. ನಾವು ನಮ್ಮ ಯುವಕರ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ನೀವು 15 ದಿನಗಳ ಒಳಗೆ ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸದಿದ್ದರೆ ನಾವು ದೂರು ದಾಖಲಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಾಂಗ್ರೆಸ್ ಸಾಕ್ಷಿ ನಾಶ ಮಾಡಿದ್ದಕ್ಕೆ ಸಿಬಿಐ ಈ ರೀತಿ ವರದಿ ನೀಡಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಿಬಿಐ ಯಾರ ಕೆಳಗೆ ಇದ್ದಾರೆ? ಅವರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಈಗಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಸಮರ್ಥರು. ಕಳೆದ ಮೂರ್ನಾಲ್ಕು ವರ್ಷದಿಂದ ಇವರೇ ಅಧಿಕಾರದಲ್ಲಿದ್ದರೂ ಸಾಕ್ಷಿ ನೀಡಲು ಆಗಿಲ್ಲ. ಸಿಬಿಐ ವರದಿಯಲ್ಲಿ ಪ್ಯಾರಾ 16.21ನಿಂದ 16.23ವರೆಗೆ ನೋಡಿ ಎಲ್ಲ ಸಾಕ್ಷ್ಯಾಧಾರ ಎಲ್ಲಿಂದ ಕಲೆ ಹಾಕಿದ್ದಾರೆ ಎಲ್ಲದರ ವಿಚಾರಣೆ ಮಾಡಿದ ನಂತರ ಈ ವರಿದಿ ನೀಡಲಾಗಿದೆ ಎಂದು ತಿಳಿಸಲಾಗಿದೆ’ ಎಂದರು.

ಈ ಪ್ರಕರಣ ಮರುತನಿಖೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ಸಿಬಿಐ ವರದಿಯಲ್ಲಿ ಯಾವ ಲೋಪವಿದೆ? ಯಾವ ಆಧಾರದ ಮೇಲೆ ಮರುತನಿಖೆಗೆ ನೀಡುತ್ತಾರೆ? ಈ ವರದಿ ಸರ್ಕಾರದ ಬಳಿ ಇಲ್ಲವೇ? ಅವರು ಪತ್ರಿಕಾಗೋಷ್ಠಿ ಕರೆದು ಇದರ ಲೋಪಗಳನ್ನು ಹೇಳಲಿ. ನನ್ನ ಪ್ರಶ್ನೆ ಬಿಜೆಪಿ ನಾಯಕರಿಗೆ ಈ ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ? ಅವುಗಳನ್ನು ಬಹರಂಗವಾಗಿ ಇಟ್ಟು, ಅವುಗಳನ್ನು ತನಿಖಾ ಸಂಸ್ಥೆಗೆ ನೀಡಿ ನಂತರ ಮರುತನಿಖೆಗೆ ಆಗ್ರಹಿಸಲಿ. ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುವುದೇ ನಿಮ್ಮ ಸಂಕಲ್ಪ ಯಾತ್ರೆಯೇ?’ ಎಂದು ಪ್ರಶ್ನಿಸಿದರು.

ಪೇಸಿಎಂ ಅಭಿಯಾನದಲ್ಲಿ ಸಿಸಿಬಿ ನೊಟೀಸ್ ಬಗ್ಗೆ ಕೇಳಿದಾಗ, ‘ಆ ನೊಟೀಸ್ ಗೆ ಲಿಖಿತ ಉತ್ತರ ನೀಡಬಹುದು. ದುರ್ದೈವ ಎಂದರೆ ಪೇಸಿಎಂ ಅಭಿಯಾನ ಮಾಡಿದ್ದು ಯಾರು? ಪೋಸ್ಟರ್ ಅಂಟಿಸಿದವರು ಯಾರು ಎಂದು ಗೊತ್ತಿದೆ. ಆದರೂ ಇದರ ತನಿಖೆಯನ್ನು ಸಿಸಿಬಿಗೆ ನೀಡಿದ್ದಾರೆ. ಆದರೆ ಪಿಎಸ್ ಐ ಹಗರಣ, ಕೆಪಿಟಿಸಿಎಲ್, ಪಿಡಬ್ಲ್ಯೂಡಿ ಅಕ್ರಮ ತನಿಖೆ ಬಗ್ಗೆ ನ್ಯಾಯಾಂಗ ತನಿಖೆ ಮಾಡುತ್ತಿಲ್ಲ. ನಮ್ಮ ಸರ್ಕಾರದ ಕಾರ್ಯವೈಖರಿ ಹಾಗೂ ಆದ್ಯತೆಗಳು ಇದರಿಂದ ಸ್ಪಷ್ಟವಾಗುತ್ತದೆ’ ಎಂದರು.

Join Whatsapp