ವಾರಾಂತ್ಯ ಕರ್ಫ್ಯೂ ನಡುವೆ ‘ಕಣಚೂರು’ ಕಣ್ಣಾಮುಚ್ಚಾಲೆ ಆಟ | ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲು

Prasthutha|

ಮಂಗಳೂರು: ವಾರಾಂತ್ಯ ಕರ್ಫ್ಯೂ ಇರುವ ಹೊರತಾಗಿಯೂ ನಿಯಮ ಉಲ್ಲಂಘಿಸಿ ಮಹಿಳೆಯರನ್ನ ಕರೆದೊಯ್ಯಲು ಯತ್ನಿಸುತ್ತಿದ್ದ ಕಣಚೂರು ಮೆಡಿಕಲ್ ಕಾಲೇಜು ಮ್ಯಾನೇಜರ್ ಹಾಗೂ ಬಸ್ ಚಾಲಕನ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

ನಗರದ ಮುಲ್ಕಿಯ ಲಿಂಗಪ್ಪಯ್ಯಕಾಡು ಎಂಬಲ್ಲಿ ಕಳೆದ ಭಾನುವಾರ ರಾತ್ರಿ ಕಣಚೂರು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಕಾಲೇಜು ಬಸ್ ವೊಂದು ಆಗಮಿಸಿದ್ದು, ಸ್ಥಳೀಯ ಮಹಿಳೆಯರನ್ನ ಬಸ್ ನಲ್ಲಿ ಕೂರಿಸಿ ಕರೆದೊಯ್ಯಲು ಮುಂದಾಗಿದ್ದಾರೆ. ಇದನ್ನ ಗಮನಿಸಿದ ಲಾಲ್ ಸಾಬ್ ಎಂಬವರು ಕಾಲೇಜ್ ಬಸ್ಸನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಬಸ್ ಚಾಲಕನು ಕೋವಿಡ್ ಲಸಿಕೆಗಾಗಿ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ ಇದಕ್ಕೆ ಬೇಕಾದ ಸೂಕ್ತ ಪತ್ರಗಳನ್ನ ಕೇಳಿದಾಗ ಬಸ್ ಚಾಲಕ ತಡವರಿಸಿದ ಹಿನ್ನೆಲೆ ಮಹಿಳೆಯರನ್ನ ಬಸ್ ನಿಂದ ಕೆಳಗಿಳಿಸಿ ಮನೆಗೆ ಕಳುಹಿಸಿದ್ದಾರೆ.

ಇದರಿಂದ ಸಂಶಯಗೊಂಡ ಲಾಲ್ ಸಾಬ್ ಅವರು ಮುಲ್ಕಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜ್ ಆಸ್ಪತ್ರೆ ಆಡಳಿತ ಮಂಡಳಿ ಯಾವುದೋ ಉದ್ದೇಶಕ್ಕಾಗಿ ಸ್ಥಳೀಯ ಮಹಿಳೆಯರನ್ನ ಕರೆದೊಯ್ಯಲು ಯತ್ನಿಸಿದ್ದಾಗಿ ಅವರು ಆರೋಪಿಸಿದ್ದಾರೆ. ಅಲ್ಲದೇ, ಕೋವಿಡ್ ನಿಯಮ ಉಲ್ಲಂಘಿಸಿದ್ದಾಗಿಯೂ ತಿಳಿಸಿದ್ದಾರೆ.

- Advertisement -

ದೂರಿನನ್ವಯ ಕಣಚೂರು ಮೆಡಿಕಲ್ ಆಸ್ಪತ್ರೆ ಮ್ಯಾನೇಜರ್ ನವಾಝ್ ಹಾಗೂ ಬಸ್ ಚಾಲಕ ಪ್ರವೀಣ್ ಎಂಬವರ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.  

Join Whatsapp