ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡ 91 ಮಂದಿ ವಿರುದ್ಧ FIR

Prasthutha|

ಬೆಂಗಳೂರು: ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡ 91 ಮಂದಿ ಉದ್ಯೋಗಿಗಳ ವಂಚನೆ ಜಾಲವು ಬೆಳಕಿಗೆ ಬಂದಿದ್ದು ಈ ಸಂಬಂಧ ಪ್ರಕರಣ ದಾಖಲಿಸಿರುವ ದಕ್ಷಿಣ ವಿಭಾಗದ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -

ಕಳೆದ 2017ರಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನೇಮಕಾತಿ ಪ್ರಾಧಿಕಾರಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಪರೀಕ್ಷಾ ವಿಭಾಗಕ್ಕೆ ದೂರು ನೀಡಿದ್ದವು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸಕ್ಕೆ ಸೇರಿದ 91 ಮಂದಿ ಉದ್ಯೋಗಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ.

2017ರಲ್ಲಿ ವಿವಿಧ ಸಂಸ್ಥೆಗಳು ನಮ್ಮಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ಉದ್ಯೋಗಿಗಳ ಅಂಕಪಟ್ಟಿ ನೈಜತೆ ಬಗ್ಗೆ ಖಚಿತಪಡಿಸಿ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಪರೀಕ್ಷಾ ವಿಭಾಗಕ್ಕೆ ದೂರು ನೀಡಿದ್ದವು.

- Advertisement -

ಬಳಿಕ ದೂರನ್ನು ಗಂಭೀರವಾಗಿ ಪರಿಗಣಿಸಿ ಉದ್ಯೋಗ ಮತ್ತು ತರಬೇತಿ ಇಲಾಖೆಯು ಮೂರು ಸಮಿತಿಗಳನ್ನು ರಚಿಸಿತ್ತು. ಈಗ ಇದೇ ಸಮಿತಿಗಳಿಂದ ಸ್ಫೋಟಕ ತನಿಖಾ ವರದಿ ಹೊರ ಬಂದಿದೆ. 2017ರ ಸೆಪ್ಟೆಂಬರ್, 2018ರ ಜನವರಿ ಹಾಗೂ ಜೂನ್ ನಲ್ಲಿ ರಚಿಸಲಾಗಿದ್ದ ಸಮಿತಿಗಳಿಂದ ವರದಿ ಸಲ್ಲಿಕೆಯಾಗಿದ್ದು, ವರದಿಯ ಪ್ರಕಾರ 91 ಅಭ್ಯರ್ಥಿಗಳು ಐಟಿಐ ತರಬೇತಿ ಸಂಸ್ಥೆಗಳಲ್ಲಿ ಉತೀರ್ಣರಾದವರೇ ಅಲ್ಲ. ಆ ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿ ಉದ್ಯೋಗಗಿಟ್ಟಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಆಯಾ ಇಲಾಖೆ ಮಟ್ಟದಲ್ಲೇ ನಡೆದಿದ್ದ ಸಮಿತಿಯ ತನಿಖೆ ವೇಳೆ 91 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ ಎಂದು ಸಾಬೀತಾಗಿದೆ.
91 ಅಭ್ಯರ್ಥಿಗಳಿಗೆ ಕೆಲಸಗಿಟ್ಟಿಸಿಕೊಳ್ಳಲು ನಕಲಿ ಐಟಿಐ ಮಾರ್ಕ್ಸ್ ಕಾರ್ಡ್ ಗಳು ಸಿಕ್ಕಿದ್ದು ಹೇಗೆ? ಕೆಲವು ಅಭ್ಯರ್ಥಿಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಿಬ್ಬಂದಿ ಮೂಲಕವೇ ನಕಲಿ ಅಂಕಪಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇನ್ನೂ ಕೆಲವು ಅಭ್ಯರ್ಥಿಗಳು ಬೇರೆ ಕಡೆಗಳಲ್ಲಿ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಂಡು ಉದ್ಯೋಗಗಿಟ್ಟಿಸಿಕೊಂಡಿರುವ ಕೂಡ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ ಸಮಿತಿಯ ವರದಿಯಲ್ಲಿ ಬಯಲಾಗಿರುವ 91 ಅಭ್ಯರ್ಥಿಗಳೂ ನಕಲಿ ಅಂಕಪಟ್ಟಿ ಕೊಟ್ಟು ಕೆಲಸಗಿಟ್ಟಿಸಿಕೊಂಡು ಸರ್ಕಾರಕ್ಕೇ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ತರಬೇತಿ ಮತ್ತು ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್ ದೂರು ಆಧಾರದಲ್ಲಿ ಕಳೆದ ಡಿ.23ರಂದೇ ಎಫ್ ಐಆರ್ ದಾಖಲಾಗಿದೆ. ಅನುಮಾನವಿರುವ 91 ಅಭ್ಯರ್ಥಿಗಳನ್ನು ಎಫ್ ಐಆರ್ ನಲ್ಲಿ ಹೆಸರಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಐಪಿಸಿ ಸೆಕ್ಷನ್ 34, 419, 420, 468, 471ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿರುವ 91 ಮಂದಿ ನಕಲಿ ನೌಕರರಲ್ಲಿ ವಿಜಯಪುರ ಜಿಲ್ಲೆ ಸೇರಿದವರು. ಚನ್ನಪಟ್ಟಣ ಹಾಗೂ ಕೆ.ಆರ್.ಪೇಟೆಯ ತಲಾ ಒಬ್ಬರು, ಸುರಪುರ ಹಾಗೂ ಚಿತ್ರದುರ್ಗ ಮೂಲದವರಾಗಿದ್ದಾರೆ. ನಕಲಿ ಅಂಕಪಟ್ಟಿ ಆರೋಪವಿರುವ 91 ಅಭ್ಯರ್ಥಿಗಳ ವಂಚನೆ ಕಹಾನಿ ಬಗ್ಗೆ ಪೊಲೀಸರು ತಲಾಷ್ ಶುರು ಮಾಡಿದ್ದಾರೆ. ಅಭ್ಯರ್ಥಿಗೂ ಬಾಯ್ಬಿಡುವ ಮಾಹಿತಿ ಆಧರಿಸಿ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಿಬ್ಬಂದಿ ಶಾಮೀಲಿನ ಬಗ್ಗೆ ತನಿಖೆ ನಡೆಸಲಾಗುತ್ತೆ. ಸುಮಾರು 20 ದಿನಗಳಿಂದ ನಕಲಿ ಅಂಕಪಟ್ಟಿ ಮಾಫಿಯಾ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Join Whatsapp