ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸುವ ಮೂಲಕ ಮನುವಾದಿಗಳನ್ನು ಸಂತೃಪ್ತಿಪಡಿಸಲು ಹೊರಟ ಕೇಂದ್ರ ಸರ್ಕಾರ: ಎಸ್.ಡಿ.ಪಿ.ಐ.

Prasthutha|

ಮಂಗಳೂರು: ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದ ಪೆರೇಡ್ ನಲ್ಲಿ ಸಮಾಜ ಸುಧಾರಕ, ಮಹಾನ್ ದಾರ್ಶನಿಕ ಬಿಲ್ಲವ ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರದ ನೀತಿ ಖಂಡನೀಯ. ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಮನುವಾದಿಗಳನ್ನು ಸಂತೃಪ್ತಿಪಡಿಸಲು ಹೊರಟಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಆರೋಪಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಪ್ರದಾಯದಂತೆ ಕೇಂದ್ರ ಸರಕಾರವು ದೆಹಲಿಯಲ್ಲಿ ಆಯೋಜಿಸುವ ಪೆರೇಡ್ ನಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು, ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇರಳ ಸರಕಾರ ಕಳಿಸಿಕೊಟ್ಟ ಸಮಾಜ ಸುಧಾರಕರು, ಮಹಾನ್ ದಾರ್ಶನಿಕರು ಬಿಲ್ಲವ ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರಾದ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿ ಶಂಕರಾಚಾರ್ಯರ ಸ್ತಬ್ಧ ಚಿತ್ರವನ್ನು ಅಳವಡಿಸಲು ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ರಕ್ಷಣಾ ಇಲಾಖೆ ಸೂಚಿಸುವ ಮೂಲಕ ಸರಕಾರವು ತಾನು ತಳ ಸಮುದಾಯಗಳ ವಿರುದ್ಧ ಮತ್ತು ಮನುವಾದ ಸಿದ್ಧಾಂತದ ಪರ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ . ಸರಕಾರದ ಈ ನಿಲುವು ಶ್ರೀ ನಾರಾಯಣ ಗುರುಗಳಿಗೆ ಮತ್ತು ಅವರ ಅನುಯಾಯಿಗಳಿಗೆ ಮಾಡಿದ ಘೋರವಾದ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.

ಕೇರಳದ (ಅಂದಿನ ಟ್ರುವಾಂಕೂರ್ ಸಂಸ್ಥಾನ) ಜನಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದಂತಹ ಈಳವ ಸಮುದಾಯವು ಮೇಲ್ಜಾತಿಯವರ ಶ್ರೇಣೀಕೃತ ವ್ಯವಸ್ಥೆಯ ಕರಾಳ ನಿಯಂತ್ರಣದಿಂದ ಅತ್ಯಂತ ಅಮಾನವೀಯ, ಅಸ್ಪೃಶ್ಯತೆಯ ಕದಂಬ ಬಾಹುಗಳಿಂದ ಬಂಧಿಸಲ್ಪಟ್ಟು ಅವಮಾನಕರವಾದ ಬದುಕು ಸಾಗಿಸುತ್ತಿದ್ದ ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಅಂದಿನ ಟ್ರವಾಂಕೂರ್ ಸಂಸ್ಥಾನದ ಚೆಂಪಝಂತಿ ಎಂಬ ಗ್ರಾಮದಲ್ಲಿ ಜನ್ಮತಾಳಿದ ನಾರಾಯಣ ಗುರುಗಳು ಎಪ್ಪತ್ತೆರಡು ವರ್ಷಗಳ ಸುದೀರ್ಘ ಜೀವನದಲ್ಲಿ ಮಾಡಿದ ಕ್ರಾಂತಿಕಾರಿ, ಮಾನವತಾವಾದಿ ಹೋರಾಟಗಳು, ಕೈಗೊಂಡ ಸುಧಾರಣಾವಾದಿ ಆಂದೋಲನಗಳು ಈಳವ (ಬಿಲ್ಲವ) ಸಮುದಾಯವನ್ನು ಹಂತ ಹಂತವಾಗಿ ಸಮಾಜದ ಮಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಯಿತು.

- Advertisement -

ಈಳವ ಸಮುದಾಯಕ್ಕೆ ಮಂದಿರ,ದೇವಳಗಳಿಗೆ ಪ್ರವೇಶವಿಲ್ಲದೆ, ಕನಿಷ್ಠ ಪಕ್ಷ ಬಟ್ಟೆಯುಡಲು ಅವಕಾಶ ನೀಡದೆ ಬ್ರಾಹ್ಮಣ ಪುರೋಹಿತಶಾಹಿ ವರ್ಗಗಳ ಗುಲಾಮರಾಗಿ ಬದುಕು ಸಾಗಿಸುತ್ತಿದ್ದರು. ಆ ಸಮುದಾಯಕ್ಕೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು, ಮೇಲ್ಜಾತಿಯವರ ಕುತಂತ್ರಕ್ಕೆ ಪರ್ಯಾಯವಾಗಿ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಂದೇಶದೊಂದಿಗೆ ತನ್ನ ಸಮುದಾಯಕ್ಕೆ ಪ್ರತ್ಯೇಕ ಮಂದಿರಗಳನ್ನು ಸ್ಧಾಪಿಸಿ ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ರಾಜಿರಹಿತ ಹೋರಾಟ ನಡೆಸಿ ತಳ ಸಮುದಾಯಗಳಿಗೆ ಆತ್ಮ ವಿಶ್ವಾಸ ನೀಡಿದ 18/19 ನೇ ಶತಮಾನದ ಶ್ರೇಷ್ಠ ಸುಧಾರಕರಾದ, ಮಹಾನ್ ಮಾನವತಾವಾದಿ ನಾರಾಯಣ ಗುರುಗಳ ಸಿದ್ದಾಂತ, ಆದರ್ಶ ಇಂದಿನ ಕಾಲಘಟ್ಟಕ್ಕೆ ಅತ್ಯಗತ್ಯವಾಗಿದೆ. ಆದರೆ ನಾಗ್ಪುರ ಕೇಂದ್ರೀಕ್ರತವಾದ ಮನುವಾದಿಗಳು ಇಂದು ನಾರಾಯಣ ಗುರು,ಪೆರಿಯಾರ್ ರಾಮಸ್ವಾಮಿ, ಅಯ್ಯಂಗಾಳಿಯವರ ಚಿಂತನೆಗಳ ಬದಲು ಬ್ರಾಹ್ಮಣ್ಯದ ಪ್ರತಿಪಾದಕರಾದ ಶಂಕರಾಚಾರ್ಯರ ಸಿದ್ದಾಂತಗಳನ್ನು ಪ್ರಸಕ್ತ ಕಾಲಘಟ್ಟಕ್ಕೆ ಪರಿಚಯಿಸಲು ಹೊರಟಿರುವುದು ದೇಶದ ಸಹಬಾಳ್ವೆಗೆ ನೀಡುವ ಕೊಡಲಿ ಏಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂವಿಧಾನಾತ್ಮಕವಾಗಿ ಆಯ್ಕೆ ಯಾದ ರಾಜ್ಯ ಸರಕಾರವೊಂದು ತನ್ನ ನೆಲದ ಇತಿಹಾಸ ಪುರುಷನ ಚರಿತ್ರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಕಳಿಸಿ ಕೊಟ್ಟ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದು ಕೇಂದ್ರ ಸರ್ಕಾರದ ಏಕಾಧಿಪತ್ಯದ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತಿದೆ. ಇದರ ವಿರುದ್ಧ ಧ್ವನಿಯೆತ್ತಬೇಕಾದ ನಾರಾಯಣ ಗುರುಗಳ ಅನುಯಾಯಿಗಳು ಸೇರಿದಂತೆ ಜಾತ್ಯತೀತ ಪಕ್ಷಗಳ ಮೌನವು ದೇಶದ ಸಂವಿದಾನಕ್ಕೆ ಅಪಾಯಕಾರಿ ಆಗಲಿದೆ.

ನಾವೆಲ್ಲಾ ಹಿಂದು ನಾವೆಲ್ಲ ಒಂದು ಎನ್ನುತ್ತ ಸಂಘಪರಿವಾರ ಹಾಗೂ ಬಿಜೆಪಿ ಬಿಲ್ಲವ ಸಮುದಾಯದ ಮತಗಳನ್ನು ಕ್ರೋಡೀಕರಿಸಿ ಅಧಿಕಾರ ನಡೆಸುತ್ತಿದೆ. ಬಿಜೆಪಿ ಪಕ್ಷದ ಹಿಂಸಾತ್ಮಕ ರಾಜಕೀಯವನ್ನು ನಿಯಂತ್ರಿಸುವ ಬ್ರಾಹ್ಮಣ ವರ್ಗವು ಅಲ್ಪಸಂಖ್ಯಾತರ ಮಾರಣಹೋಮ ನಡೆಸಲು ಪಾತ್ರಧಾರಿಗಳನ್ನಾಗಿ ಬಳಸುತ್ತಿರುವುದು ಇದೇ ನಾರಾಯಣ ಗುರುಗಳ ಅನುಯಾಯಿಗಳಾದ ಬಿಲ್ಲವ ಸಮುದಾಯದ ಯುವಕರನ್ನಾಗಿದೆ. ಸಂಘಪರಿವಾರದ ರಾಜಕೀಯ ಲಾಭಕ್ಕಾಗಿ ಮಚ್ಚು, ಲಾಂಗು, ತ್ರಿಶೂಲ ಎತ್ತಿಕೊಂಡು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ ಇಂದು ಜೈಲಿನ ಕತ್ತಲ ಕೋಣೆಗಳಲ್ಲಿ ಕಂಬಿ ಎಣಿಸುತ್ತಿರುವ ಬಿಲ್ಲವ ಸಮುದಾಯದ ಯುವಕರು ಇನ್ನಾದರೂ ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ವಂಚನೆಯ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು SDPI ಪಕ್ಷವು ಆಗ್ರಹಿಸುತ್ತಿದೆ.

ದೇಶದ ಸುಂದರ ಚರಿತ್ರೆ ಹಾಗೂ ಗತ ವೈಭವದ ಇತಿಹಾಸವನ್ನು ಬದಲಾಯಿಸಲು ಬಿಜೆಪಿ ಸರಕಾರ ಹೊರಟರೆ SDPI ಪಕ್ಷವು ಅದನ್ನು ಜನಾಂದೋಲನದ ಮೂಲಕ ಎದುರಿಸಲು ಸದಾ ಸನ್ನದ್ದ ವಾಗಿದೆ ಎಂದು ಸರಕಾರ ಅರಿತು ಕೊಳ್ಳಬೇಕಾಗಿದೆ . ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳದ ಗುರು ನಾರಾಯಣ ಸ್ವಾಮಿಗಳ ಸ್ತಬ್ಧ ಚಿತ್ರವನ್ನ ಅಳವಡಿಸಲು ಸರಕಾರ ಅವಕಾಶವನ್ನು ಮಾಡಿಕೊಟ್ಟು ಧಾರ್ಶನಿಕರ ಚರಿತ್ರೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಸರಕಾರ ಮಾಡಿ ಕೊಡಬೇಕು ಇದಕ್ಕಾಗಿ ರಾಜ್ಯದ ಎಲ್ಲ ಸಂಸದರು ಪ್ರಯತ್ನಿಸಬೇಕು ಎಂದು ಅಬ್ದುಲ್ ಲತೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp