ಹಿರಿಯ ಸಾಹಿತಿ ಟಿ.ಜಿ.ಮುಡೂರು ನಿಧನ

Prasthutha|

ಸುಳ್ಯ: ಹಿರಿಯ ಸಾಹಿತಿ, ವಿದ್ವಾನ್ ಟಿ.ಜಿ.ಮುಡೂರು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವರಿಗೆ 95 ವರ್ಷ ವಯಸ್ಸಾಗಿತ್ತು.

- Advertisement -

ಅಧ್ಯಾಪಕ, ಕವಿ , ವಿದ್ವಾಂಸರಾಗಿ ಕನ್ನಡ, ತುಳು ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು, ಹೃದಯರೂಪಕ ‘ ಎಂಬ ಆಂಗ್ಲ ನಾಟಕದ ರೂಪಾಂತರ ಕೃತಿಯನ್ನೂ ಪ್ರಕಟಿಸಿದ್ದಾರೆ.

ಮದರಾಸು ವಿಶ್ವವಿದ್ಯಾನಿಲಯದಿಂದ ಕನ್ನಡ ವಿದ್ವಾನ್ ಹಾಗೂ ಮೈಸೂರು ಎಂ.ಎ ಹಾಗೂ ಬಿ.ಎಡ್ ಗಳಿಸಿದ ಇವರು 1964 ರಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ದುಡಿದು ಹಲವಾರು ಕೃತಿಗಳನ್ನು ರಚಿಸಿದ್ದಾರೆ.

- Advertisement -

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಲ್ಲಿ ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ 15 ವರ್ಷಗಳ ಕಾಲ, ಹಾಗೂ ಸುಳ್ಯ ಘಟಕವಾದಾಗ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿ 3 ವರ್ಷ ಕಾರ್ಯ ನಿರ್ವಹಿಸಿರುವ ಟಿ.ಜಿ.ಮುಡೂರು 1997 ರಲ್ಲಿ ಅರಂತೋಡಿನಲ್ಲಿ ನಡೆದ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ತಾಲೂಕು ರಾಜ್ಯೋತ್ಸವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸುಬ್ಬಪ್ಪ ಗೌಡ ಹಾಗೂ ಬಾಲಕ್ಕ ದಂಪತಿ ಪುತ್ರನಾಗಿ 1927 ನವೆಂಬರ್ 24 ರಂದು ಜನಿಸಿದ ಟಿ.ಜಿ.ಮುಡೂರು, 1948 ರಿಂದ ಪ್ರಾಥಮಿಕ , ಪ್ರೌಢಶಾಲೆಗಳಲ್ಲಿ ದುಡಿದು ನಂತರ ಉಪನ್ಯಾಸಕ ರಾಗಿ ಕೆಲಸ ನಿರ್ವಹಿಸಿ 1982 ರಲ್ಲಿ ನಿವೃತ್ತರಾದರು.

ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Join Whatsapp