ನಕಲಿ ಮ್ಯಾಟ್ರಿಮೋನಿಯಲ್ ವೆಬ್ : 26 ಯುವತಿಯರಿಗೆ ವಂಚಿಸಿದ್ದ ಕೊಲೆ ಆರೋಪಿ ಪೊಲೀಸ್ ಬಲೆಗೆ

Prasthutha|

ಬೆಂಗಳೂರು: ಹಲವು ಜಾತಿಗಳ ಹೆಸರಿನಲ್ಲಿ 50ಕ್ಕೂ ಪ್ರೊಫೈಲ್ ಗಳನ್ನು ಕ್ರಿಯೇಟ್ ಮಾಡಿಕೊಂಡು ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಯುವತಿಯರಿಗೆ ವಂಚಿಸುತ್ತಿದ್ದ ಕೊಲೆ ಆರೋಪಿಯೊಬ್ಬ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಜೈಭೀಮ್ ಅಲಿಯಾಸ್ ವಿಠ್ಠಲ ಪರ್ಲಪೇಟೆ (33) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.

- Advertisement -

ಆರೋಪಿಯ ತಂದೆಗೆ ಹೆಸ್ಕಾಂ ನಲ್ಲಿ ಕೆಲಸವಿದ್ದು, ತಂದೆಯ ಅಕಾಲಿಕ ಸಾವಿನ ಬಳಿಕ ಅನುಕಂಪದ ಆಧಾರ ಮೇಲೆ ಲೈನ್ ಮೆನ್ ಕೆಲಸ ಗಿಟ್ಟಿಸಿಕೊಂಡಿದ್ದ.

2013ರಲ್ಲಿ ಆರೋಪಿ ಸುನಿತಾ ಎಂಬಾಕೆಯನ್ನು ಕೊಲೆ ಮಾಡಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿ ಜಾಮೀನಿನ ಮುಖಾಂತರ ಹೊರ ಬಂದಿದ್ದು ಆತನನ್ನು ಲೈನ್ ಮೆನ್ ಕೆಲಸದಿಂದ ವಜಾ ಗೊಳಿಸಲಾಗಿತ್ತು.

- Advertisement -

ಬಳಿಕ ಜೀವನೋಪಾಯಕ್ಕಾಗಿ ಫೇಕ್ ಐಡಿ ನಿರ್ಮಾಣ ಮಾಡಿಕೊಂಡು ಯುವತಿಯರನ್ನು ಪರಿಚಯ ಮಾಡಿಕೊಂಡು ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಆರೋಪಿ ಶಿವಮೊಗ್ಗ , ಹಾವೇರಿ, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದ ಒಟ್ಟು 26 ಯುವತಿಯರಿಗೆ ನಂಬಿಸಿ 21 ಲಕ್ಷ 30 ಸಾವಿರ ಹಣವನ್ನು ವಂಚಿಸಿದ್ದಾನೆ ಎಂದು ಹೇಳಲಾಗಿದೆ.

ಆರೋಪಿಯು ಕುರುಬ, ಎಸ್ ಸಿ, ಎಸ್ ಟಿ, ಗಾಣಿಗ, ನೇಕಾರ ಇನ್ನಿತರ ಜಾತಿಗಳ ಹೆಸರಲ್ಲಿ 50ಕ್ಕೂ ಪ್ರೊಫೈಲ್ ಗಳನ್ನು ಕ್ರಿಯೇಟ್ ಮಾಡಿಕೊಂಡು ಮ್ಯಾಟ್ರಿಮೋನಿಯಲ್ ಯುವತಿಯರನ್ನು ವಿವಾಹವಾಗುವುದಾಗಿ ವಂಚನೆ ನಡೆಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಡಿವಾಳದಲ್ಲಿ ನಡೆದಿದ್ದ ಯುವತಿಯ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಇನ್ಸ್ ಪೆಕ್ಟರ್ ಯೋಗೀಶ್ ಅವರು ಎಸಿಪಿ ಸುಧೀರ್ ಹೆಗಡೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ ಐದು ಲಕ್ಷ ಬೆಲಬಾಳುವ ನಿಸಾನ್ ಕಾರು ಮತ್ತು ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ 66 ಸಾವಿರ ಹಣವನ್ನು ಜಪ್ತಿ ಮಾಡಲಾಗಿದೆ. ಆರೋಪಿಯು ನಡೆಸುತ್ತಿರುವ ವಂಚನೆ ಸಂಬಂಧಿಸಿದಂತೆ ದೂರುಗಳಿದ್ದರೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ಸಲ್ಲಿಸಲು ಎಸಿಪಿ ಸುಧೀರ್ ಹೆಗಡೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Join Whatsapp