ಇವಿಎಂ ಪ್ರಜಾಪ್ರಭುತ್ವಕ್ಕೆ ಅಪಾಯ: ಅಡ್ವಕೇಟ್ ಶರಫುದ್ದೀನ್

Prasthutha|

ಬೆಂಗಳೂರು: ಇವಿಎಂ ಬಂದ ಬಳಿಕ ಪ್ರಜಾಪ್ರಭುತ್ವಕ್ಕೆ ಅಪಾಯ ಪ್ರಾರಂಭಗೊಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಉಪಾಧ್ಯಕ್ಷ ಅಡ್ವಕೇಟ್ ಶರಫುದ್ದೀನ್ ಅಹಮದ್ ಹೇಳಿದ್ದಾರೆ.

- Advertisement -

ಅವರು ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ನಡೆದ SDPI ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದ ನಿರ್ಣಯಗಳ ಬಗ್ಗೆ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಶರಫುದ್ದೀನ್ ಅಹ್ಮದ್ ಮಾತನಾಡಿ, ಬಂಡವಾಳಶಾಹಿಗಳ ದೇಶವನ್ನಾಗಿ ದೇಶವನ್ನು ಮಾಡಲಾಗುತ್ತಿದೆ. ಶ್ರೀಮಂತರಿಗಾಗಿ ದೇಶವನ್ನು ಮುನ್ನಡೆಸಲಾಗುತ್ತಿದೆ. ಬಾಬರಿ ಮಸೀದಿಗೆ ಅನ್ಯಾಯವಾದಾಗ ಸುಮ್ಮನಿದ್ದವರು ಈ ಮಸೀದಿ ಪ್ರಕರಣದಲ್ಲೂ ಅದನ್ನು ಮುಂದುವರಿಸಿದ್ದಾರೆ. ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಮತ್ತೆ ಸೃಷ್ಟಿಸಲಾಗುತ್ತಿದೆ. ಇವಿಎಂ ಬಂದ ಬಳಿಕ ಪ್ರಜಾಪ್ರಭುತ್ವಕ್ಕೆ ಅಪಾಯ ಪ್ರಾರಂಭಗೊಂಡಿದೆ ಎಂದು ಹೇಳಿದ್ದಾರೆ.

- Advertisement -

ದೇಶವನ್ನು ಅರಾಜಕತೆಯತ್ತ ಸರಕಾರವೇ ಮುಂದುವರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ನಾವು ದೇಶದ ಜನತೆಯನ್ನು ಎಚ್ಚರಿಸುತ್ತಿದ್ದೇವೆ. ಕರಾಳ ಕಾನೂನುಗಳನ್ನು ತಂದು ಜನಸಾಮಾನ್ಯರ ಮೇಲೆ ಸರಕಾರ ದಬ್ಬಾಳಿಕೆ ನಡೆಸುತ್ತಿದೆ. ರೈತ ವಿರೋಧಿ ಕಾನೂನುಗಳನ್ನು ತಂದು ರೈತ ಬೆನ್ನೆಲುಬು ಮುರಿಯಲು ಸರಕಾರ ಮುಂದಾಗಿದೆ. ರೈತರ ನ್ಯಾಯಯುತ ಬೇಡಿಕೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ.

SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಕೇಂದ್ರ ಸರಕಾರ 3 ಕೋಟಿ ರೇಷನ್ ಕಾರ್ಡ್ ರದ್ದುಗೊಳಿಸಿ ಬಡವರ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದೆ. ಈಗಿನ ಸರಕಾರದ ದಯನೀಯ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಮುಂದಿನ ಚುನಾವಣೆಗೆ ಮತಗಳ ಧ್ರುವೀಕರಣ ಮಾಡುವ ದುರುದ್ಧೇಶವನ್ನಿಟ್ಟು ವಾರಣಾಸಿಯ ಗ್ಯಾನ್ವಾಪಿ ಮಸೀದಿಯನ್ನು ಬಳಸಲಾಗುತ್ತಿದೆ. ಇದು ದೇಶದ ಸಮಗ್ರತೆ ಮತ್ತು ಸೌಹಾರ್ದತೆಯನ್ನು ಧ್ವಂಸಗೊಳಿಸುವ ಪ್ರಯತ್ನವಾಗಿದೆ. ಇದರ ವಿರುದ್ಧ SDPI ಕಾನೂನು ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

ಇವಿಎಂ ನಲ್ಲಿ ಜನತೆಗೆ ವಿಶ್ವಾಸವು ಇಲ್ಲವಾಗಿದೆ. ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸುಧಾರಣೆಯನ್ನು ತರಬೇಕಾಗಿದೆ. ಕೋಮು ಗಲಭೆಗೆ ಪ್ರಚೋದನೆ ನೀಡಿದವರನ್ನು ಬಿಜೆಪಿ ಸರಕಾರ ರಕ್ಷಿಸುತ್ತಿದೆ.‌ಇದು ದೇಶದ ಸೌಹಾರ್ದತೆಗೆ ಮಾರಕವಾಗಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ದೆಹ್ಲಾನ್ ಬಾಖವಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರಾಷ್ಟ್ರೀಯ ಕಾರ್ಯದರ್ಶಿ ಸೀತರಾಮ್ ಕೋಹಿವಾಲ್ ಉಪಸ್ಥಿತರಿದ್ದರು.

Join Whatsapp