ಕೋಲೆ ಬಸವಣ್ಣ ರೂಪದ ಮುಖ್ಯಮಂತ್ರಿಯಿಂದಾಗಿ ರಾಜ್ಯ ಅರಾಜಕತೆಯ ಗೂಡಾಗಿದೆ: ಹುಬ್ಬಳ್ಳಿಯ ಘಟನೆಯ ಬಗ್ಗೆ ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿರುವ ಪೊಲೀಸ್ ಠಾಣೆ ಮೇಲಿನ ದಾಳಿ ಮತ್ತು ಗಲಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ದಿನೇಶ್ ಗುಂಡೂರಾವ್ ಗಲಭೆ ಎಬ್ಬಿಸುವ ಪುಂಡರು ಯಾವ ಧರ್ಮದವರೇ ಆಗಿರಲಿ ಅವರ ವಿರುದ್ಧ ಮುಲಾಜಿಲ್ಲದೆ ಸರಕಾರ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಗುಂಡೂರಾವ್, ‘ಭಯದ ಮಗಳೇ ಭಕ್ತಿ’. ಪುಂಡರಿಗೆ ಕಾನೂನಿನ ಭಯ ಇಲ್ಲದಿದ್ದಾಗ ಮಾತ್ರ ಹುಬ್ಬಳಿಯಂತಹ ಘಟನೆ ನಡೆಯುತ್ತವೆ.‌ ಹುಬ್ಬಳಿ ಘಟನೆ ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ. ಕಾನೂನು ಸುವ್ಯವಸ್ಥೆ ಮೇಲೆ ಸರ್ಕಾರಕ್ಕೆ ಹಿಡಿತವೇ ಇಲ್ಲ. ಎಡಬಿಡಂಗಿ ವರ್ತನೆಯ ಗೃಹ ಮಂತ್ರಿ ಹಾಗೂ ಕೋಲೆ ಬಸವಣ್ಣ ರೂಪದ ಮುಖ್ಯಮಂತ್ರಿಯಿಂದಾಗಿ ರಾಜ್ಯ ಅರಾಜಕತೆಯ ಗೂಡಾಗಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಪುಂಡರ ಆಟದ ಮೈದಾನವಲ್ಲ. ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ತೀವ್ರ ಕ್ರಮ ತೆಗೆದುಕೊಳ್ಳಲಿ. ಈ ವಿಚಾರದಲ್ಲಿ ಯಾರೂ ಸರ್ಕಾರದ ಕೈ ಕಟ್ಟಿ ಹಾಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ರಾಜ್ಯದ ಶಾಂತಿ ಮತ್ತು ಸಾಮರಸ್ಯ ಕದಡಲು ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಹೊಂಚು ಹಾಕುತ್ತಿವೆ. ರಾಜಕೀಯ ಲಾಭಕ್ಕಾಗಿ ಈ ಸರ್ಕಾರ ಕೂಡ ಪಟ್ಟಭದ್ರಾ ಹಿತಾಸಕ್ತಿಗಳ ಜೊತೆ ಕೈ ಜೋಡಿಸಿ‌ ಗಲಭೆಯನ್ನು‌‌ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ. ಈ ಸತ್ಯವನ್ನು ಎಲ್ಲಾ ಕೋಮಿನ ಯುವಕರು ಅರಿಯಬೇಕು. ಯುವಕರು ತಾಳ್ಮೆ ಹಾಗೂ ಸಹನೆಯಿಂದ ವರ್ತಿಸಲಿ ಎಂದು ದಿನೇಶ್ ವಿನಂತಿಸಿದ್ದಾರೆ.

Join Whatsapp