PFI ಪರವಾಗಿ ಹೋರಾಡಿದರೆ ಕಠಿಣ ಕ್ರಮ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

Prasthutha|

ಬೆಂಗಳೂರು: ದೇಶದಲ್ಲಿ ಈಗಾಗಲೇ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ನಿಷೇಧವನ್ನು ಹೊರಡಿಸಿರುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ತಿಳಿಸಿದ್ದಾರೆ.

- Advertisement -


ರಾಜ್ಯದಲ್ಲಿ ಪಿಎಫ್ ಐ ಚಟುವಟಿಕೆಗಳನ್ನು ನಡೆಸುವುದಾಗಲಿ, ಆ ಸಂಘಟನೆ ಪರವಾಗಿ ಹೋರಾಟ ಮಾಡುವುದಾಗಲೀ ಮಾಡಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಪಿಎಫ್​ ಐ ಸಂಘಟನೆ ನಿಷೇಧದ ಬಗ್ಗೆ ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿ ಸ್ಪಷ್ಟ ಸೂಚನೆ ನೀಡಲಿದ್ದಾರೆ ಎಂದು ಹೇಳಿದರು.

- Advertisement -

ಈಗಾಗಲೇ ರಾಜ್ಯದ ನಾನಾ ಕಡೆಗಳಲ್ಲಿ ದಾಳಿ ನಡೆಸಿ ಪಿಎಫ್​ ಐನ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದು, ದಾಳಿ ನಡೆದ ಸ್ಥಳಗಳ ತಹಶಿಲ್ದಾರ್‌ ಗಳ ಮುಂದೆ ಹಾಜರು ಪಡಿಸಿದ್ದು, ಕೆಲವು ಮಂದಿಯನ್ನು ಹತ್ತು, ಹದಿನೈದು, ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದರು.

ನಿಷೇಧಿತ ಸಂಘಟನೆಗಳ ಪರವಾಗಿ ಯಾರೇ ಪ್ರತಿಭಟನೆ ನಡೆಸಿದರೂ ತಪ್ಪಾಗುತ್ತದೆ. ಅಲ್ಲದೇ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಂಧಿತ ಪಿಎಫ್​ ಐ ಕಾರ್ಯಕರ್ತರನ್ನು ನಾವು ತಹಶೀಲ್ದಾರ್​ ಎದುರು ಹಾಜರುಪಡಿಸಿದ್ದೇವೆ. ಮುಂಜಾಗ್ರತಾ ಕ್ರಮವಾಗಿ 101 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ರಾಜ್ಯದಲ್ಲಿ ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.​

ಕಚೇರಿ ಬಳಿ ಭದ್ರತೆ:

ಈ ನಡುವೆ ನಗರದ  ಬೆನ್ಸನ್​ ಟೌನ್​ ನಲ್ಲಿರುವ ಪಿಎಫ್​ ಐ ಪ್ರಧಾನ ಕಚೇರಿ ಬಳ ಜೆಸಿ ನಗರ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಯಾರಿಗೂ ಗುಂಪುಗೂಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದರು.


Join Whatsapp