ದೆಹಲಿ ಗಲಭೆ | 17,000 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರ ಹೆಸರು ಮಾತ್ರ ದಾಖಲು !
Prasthutha: September 17, 2020

ನವದೆಹಲಿ : ಸುಮಾರು 50ಕ್ಕೂ ಹೆಚ್ಚು ಮಂದಿಯ ಸಾವು, ಅಪಾರ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಕೇಂದ್ರದ ವಿವಾದಿತ ಕಾನೂನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಗಾರರ ಹೆಸರು ಮಾತ್ರ ಇದೆ. ಸಿಎಎ ಪರ ಹೋರಾಟಗಾರರು ಅಥವಾ ಗಲಭೆ ಪ್ರಚೋದಿಸಿ ಬಹಿರಂಗ ಭಾಷಣ ಮಾಡಿದ ಬಿಜೆಪಿ ಬೆಂಬಲಿಗರ ಹೆಸರು ದೋಷಾರೋಪ ಪಟ್ಟಿಯಲ್ಲಿ ಇಲ್ಲ ಎಂದು ‘ಎನ್ ಡಿಟಿವಿ’ ವರದಿ ತಿಳಿಸಿದೆ.
ಎರಡು ಸ್ಟೀಲ್ ಟ್ರಂಕ್ ಗಳಲ್ಲಿ ತುಂಬಲಾಗಿದ್ದ 17,500 ಪುಟಗಳ ದೋಷಾರೋಪ ಪಟ್ಟಿಯಲ್ಲಿ, 2,600 ಪುಟಗಳಲ್ಲಿ ಆರೋಪಿಗಳ ವಿರುದ್ಧದ ಆರೋಪಗಳ ವಿವರವೇ ಇದೆ. ದೋಷಾರೋಪ ಪಟ್ಟಿಯಲ್ಲಿ ಭಯೋತ್ಪಾದನೆ ತಡೆಗಾಗಿ ಬಳಸಲ್ಪಡುವ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಆರೋಪಗಳನ್ನು ಹೋರಾಟಗಾರರ ವಿರುದ್ಧ ಮಾಡಲಾಗಿದೆ.
ದೋಷಾರೋಪಕ್ಕೆ ಒಳಗಾದ ಪ್ರಮುಖರಲ್ಲಿ ಅಮಾನತುಗೊಂಡ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರುಗಳ ಹೆಸರೂ ಇದೆ. ತನಿಖೆ ಇನ್ನೂ ಮುಂದುವರಿಯುತ್ತಿದೆ. ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ 15 ಮಂದಿಯ ವಿರುದ್ಧ ದೋಷಾರೋಪ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಮುಂದಿನ ದಿನಗಳಲ್ಲಿ ಸಲ್ಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
