ದಿಲ್ಲಿ ಬಾಲಕಿಯ ಕೊಲೆ: 12 ದಿನಗಳ ಬಳಿಕ ಕೊಲೆಗಾರನ ಬಂಧನ

Prasthutha|

ನವದೆಹಲಿ: ಫೆಬ್ರವರಿ 9ರಂದು ಬೆಳಿಗ್ಗೆ ಶಾಲೆಗೆ ಹೊರಟ 11ರ ಹರೆಯದ ಬಾಲಕಿ ಕಾಣೆಯಾದ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು, 12 ದಿನಗಳ ಬಳಿಕ ಬಾಲಕಿಯ ಕೊಲೆಗಾರನನ್ನು ಬಂಧಿಸಿದ್ದಾರೆ.

- Advertisement -


ಫೆ.9ರಂದು ಸಂಜೆ ಬಾಲಕಿ ಮನೆಗೆ ಬಾರದಿದ್ದಾಗ ಮನೆಯವರು ಹುಡುಕುತ್ತ ಮರುದಿನ ಬೆಳಿಗ್ಗೆ ಪೋಲೀಸರಲ್ಲಿಗೆ ಹೋಗಿ ದೂರು ನೀಡಿದರು. ನಾಲ್ಕು ಗಂಡು ಮಕ್ಕಳ ಬಳಿಕ ಹುಟ್ಟಿದ ಏಕೈಕ ಹೆಣ್ಣು ಮಗುವಾದುದರಿಂದ ಆ 11ರ ಬಾಲಕಿಯ ಮೇಲೆ ಮನೆಯವರಿಗೆ ವಿಶೇಷ ಕಾಳಜಿಯಿತ್ತು.


ಫೆಬ್ರವರಿ 9ರಂದು ಬಾಲಕಿಯ ತಾಯಿಯ ಮೊಬೈಲ್ ಗೆ 11.30 ಗಂಟೆಗೆ ಒಂದು ಮಿಸ್ಸಿಂಗ್ ಕಾಲ್ ಬಂದಿತ್ತು. ಅನಂತರ ಅದಕ್ಕೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಇದೊಂದೇ ಪೋಲೀಸರಿಗಿದ್ದ ಸಾಕ್ಷ್ಯ. ಇದು ದಿಲ್ಲಿಯ ನಂಗೋಲಯ್ ಪ್ರದೇಶದಲ್ಲಿ ನಡೆದ ಘಟನೆಯಾಗಿದೆ.

- Advertisement -


12 ದಿನಗಳ ಬಳಿಕ ಪೊಲೀಸರು 21ರ ಹರೆಯದ ಕೊಲೆಗಾರ ಯುವಕ ರೋಹಿತ್ ಅಲಿಯಾಸ್ ವಿನೋದ್ ನನ್ನು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸರ್ವಿಲೆನ್ಸ್ ಮೂಲಕ ಪೊಲೀಸರು ಆ ನಂಬರನ್ನು ಪತ್ತೆ ಹಚ್ಚಿದರು. ಒಮ್ಮೆ ಪಂಜಾಬ್, ಒಮ್ಮೆ ಮಧ್ಯ ಪ್ರದೇಶದ ಮೇಲೆ ದಾಳಿ ಮಾಡಿದರೂ ಫಲ ಸಿಗಲಿಲ್ಲ. ಅಂತಿಮವಾಗಿ ದಿಲ್ಲಿಗೆ ಹಿಂದಿರುಗಿದ ಕೊಲೆಗಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಮುಂಡ್ಕಾ ಗ್ರಾಮದ ಗೆವ್ರಾ ಮೋರ್ ನಲ್ಲಿ ಬಾಲಕಿಯನ್ನು ಕೊಂದು ಎಸೆದಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ. ಕೊಲೆಗಾರನನ್ನು ಕರೆದೊಯ್ದು ಕೊಳೆತಿದ್ದ ಬಾಲಕಿಯ ದೇಹವನ್ನು ತರಲಾಯಿತು. ಲೈಂಗಿಕ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದರೂ, ಶವ ಪರೀಕ್ಷೆ ಇತ್ಯಾದಿಯ ಬಳಿಕ ಸ್ಪಷ್ಟವಾಗಬೇಕಾಗಿದೆ. ವಿಚಾರಣೆ ಮುಂದುವರಿದಿದೆ. ಫೊರೆನ್ಸಿಕ್ ತಂಡ ಹೆಚ್ಚಿನ ಪರೀಕ್ಷೆಯಲ್ಲಿ ತೊಡಗಿದೆ.

Join Whatsapp